‘ಅಯ್ಯೋ, ಮನೆಯಲ್ಲಿ ಹೇಗಿರೋದು’ ಅನ್ನೋರಿಗೆ ಹೊನ್ನಾವರ ಮನೋವೈದ್ಯರ ಸಲಹೆ

'ಜಗತ್ತು ಮತ್ತು ದೇಶ ಕೊರೊನಾ ಸಂಕಷ್ಟದಲ್ಲಿರುವಾಗ ಸರ್ಕಾರದ ಆರೋಗ್ಯ ಇಲಾಖೆಯ ಎಲ್ಲ ಸೂಚನೆಗಳನ್ನು ಪಾಲಿಸಬೇಕು. ನಮ್ಮ ಮನಸ್ಸನ್ನು ನಾವು ಸಂತೈಸಿಕೊಳ್ಳುವ ಮೂಲಕ ದೇಹದ ಆರೋಗ್ಯ ಕಾಪಾಡಿಕೊಂಡರೆ ರೋಗ ಹೆಚ್ಚು ಕಾಡಲಾರದು' ಎಂದು ಮನೋವೈದ್ಯ ಡಾ.ವಿಶಾಲ್ ಸಲಹೆ ನೀಡಿದ್ದಾರೆ.

ಪ್ರಸಿದ್ಧ ಮನೋವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ.ವಿಶಾಲ್, ಐದು ವರ್ಷಗಳಿಂದ ಹೊನ್ನಾವರದ ಸೇವಾ ಆಸ್ಪತ್ರೆ ಸೇಂಟ್ ಇಗ್ನೇಷಿಯಸ್ ನಲ್ಲಿ ಮನೋವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿತ್ಯ ನೂರಕ್ಕೂ ಹೆಚ್ಚು ಮನೋರೋಗಿಗಳಿಗೆ ಸಲಹೆ ನೀಡುತ್ತಾರೆ. ಅದರಂತೆ, ಸರ್ಕಾರದ ಈ ತುರ್ತು ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಓದುಗರಿಗೆ ಇಲ್ಲೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

 ಕುಟುಂಬದವರೊಂದಿಗೆ ಕಾಲ ಕಳೆಯಲು ಅವಕಾಶ

ಕುಟುಂಬದವರೊಂದಿಗೆ ಕಾಲ ಕಳೆಯಲು ಅವಕಾಶ

ಅನಿರೀಕ್ಷಿತವಾಗಿ ಆಘಾತವಾದಾಗ ಬೇಸರ, ಗಾಬರಿ, ಕೋಪ ಮತ್ತು ಆವೇಶಗಳ ವಿರುದ್ಧ ವರ್ತಿಸುವ ಮನೋಭಾವ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೇಸರವನ್ನು ಕಳೆಯಲು, ಗಾಬರಿ ಪಡದಿರಲು, ಕೋಪವನ್ನು ತಡೆದುಕೊಳ್ಳಲು ಮತ್ತು ಸರ್ಕಾರದ ಆದೇಶವನ್ನು ಧಿಕ್ಕರಿಸಲು ಅಥವಾ ವಿರೋಧಿಸಲು ಮನುಷ್ಯ ತೊಡಗುತ್ತಾನೆ. ಇದರಿಂದ ಹೊರಬರಬೇಕು. ಮನೆಯಲ್ಲಿ 21 ದಿನ ಉಳಿಯಬೇಕೆಂಬ ಬೇಸರ ಬೇಡ. ಜೀವನವಿಡೀ ದುಡಿದ ನಿಮಗೆ ಕುಟುಂಬದವರೊಂದಿಗೆ ಕಾಲ ಕಳೆಯಲು ಇದೊಂದು ಅವಕಾಶವೆಂದುಕೊಳ್ಳಿ ಎಂದು ಹೇಳಿದ್ದಾರೆ.

 ಎಲ್ಲ ಸುದ್ದಿಗಳನ್ನೂ ನಂಬದಿರಿ

ಎಲ್ಲ ಸುದ್ದಿಗಳನ್ನೂ ನಂಬದಿರಿ

ಏನೇನೋ ಆಗುತ್ತದೆ ಎಂದು ಸಾವು ನೋವಿನ ಭೀತಿ ಬೇಕಾಗಿಲ್ಲ. ಯಾರೋ ರೋಗ ತಂದರೆಂದು ಅವರ ಮೇಲೆ ಸಿಟ್ಟು ಮಾಡಬೇಕಾಗಿಲ್ಲ. ಕರ್ಫ್ಯೂವನ್ನು ಉಲ್ಲಂಘಿಸಿ ನೋಡುತ್ತೇವೆ ಎಂಬ ಭಾವವೂ ಒಳ್ಳೆಯದಲ್ಲ. ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಮತ್ತು ವೈದ್ಯರು, ನರ್ಸ್ ಗಳು ಮತ್ತು ಸ್ಥಳೀಯ ಆಡಳಿತ ಶ್ರಮಪಟ್ಟು ದುಡಿಯುತ್ತಿದ್ದಾರೆ. ಅವರಿಂದ ಲೋಪವಾಗಬಹುದು, ಸುಧಾರಿಸಿಕೊಳ್ಳಿ. ದಿನವಿಡೀ ಟಿ.ವಿ ನೋಡಬೇಡಿ.

ಸಾವು ನೋವಿನ ಸುದ್ದಿಯನ್ನು ಪದೇಪದೇ ಕೇಳುತ್ತಿದ್ದರೆ, ನೋಡುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ಮಾನಸಿಕ ಆಯಾಸ, ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೋವಿಡ್ 19 ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದನ್ನು ಕೇಳಿ, ನೋಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಯಾವುದನ್ನು ಹೇಳುತ್ತದೆಯೋ ಅದನ್ನು ಮಾತ್ರ ನಂಬಿ. ಫೇಸ್‌ಬುಕ್, ವಾಟ್ಸಪ್ ಗಳಲ್ಲಿ ಬರುವ ಎಲ್ಲವನ್ನೂ ನಂಬಿದರೆ ಮನಸ್ಸಿಗೆ ಬೇಡದ ಆಲೋಚನೆಗಳು ಬರುತ್ತವೆ. ಮಾನಸಿಕ ಶಕ್ತಿ ಕುಂದಿದರೆ ದೈಹಿಕ ಶಕ್ತಿಯೂ ಕಡಿಮೆಯಾಗುತ್ತದೆ. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ.

 ಮಕ್ಕಳಿಗೂ ಇಲ್ಲಿದೆ ಕಿವಿಮಾತು

ಮಕ್ಕಳಿಗೂ ಇಲ್ಲಿದೆ ಕಿವಿಮಾತು

ಸಂಗೀತ ಕೇಳಿ, ಹಾಡು, ನರ್ತನ, ಭಜನೆ ಗೊತ್ತಿದ್ದರೆ ದಿನಕ್ಕೊಂದು ತಾಸು ಆ ಕೆಲಸ ಮಾಡಿ. ಪುಸ್ತಕಗಳನ್ನು ಓದಿ, ಪತ್ರಿಕೆಗಳನ್ನು ಓದಿ. ಮಕ್ಕಳೊಂದಿಗೆ ಕೆಲ ಹೊತ್ತು ಆಟ ಆಡಿ. ಮಕ್ಕಳನ್ನು ಹೊರಗೆ ಹೋಗಬೇಡಿ ಎಂದು ಹೆದರಿಸದೆ, ಯಾಕೆ ಹೋಗಬಾರದು ಎಂದು ತಿಳಿಸಿ ಹೇಳಿ. ಭೀತಿ ಹುಟ್ಟಿಸುವುದಕ್ಕಿಂತ ಅವರ ಮನವೊಲಿಸಿ. ವಿದ್ಯಾರ್ಥಿಗಳು ಪರೀಕ್ಷೆ ಮುಂದೆ ಹೋಗಿದೆ ಎಂದು ಚಿಂತಿಸಬೇಕಾಗಿಲ್ಲ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ನೀವು ಓದಿದ್ದನ್ನು ಅರ್ಧದಿನ ಪುನಃ ನೆನಪಿಸಿಕೊಳ್ಳಿ. ಉಳಿದ ಅರ್ಧದಿನ ಆಟವಾಡಿ. ಪರೀಕ್ಷೆಯ ದಿನ ನಿಗದಿಯಾದ ಮೇಲೆ ಇನ್ನಷ್ಟು ಸಮಯ ಓದಬಹುದು.

 ಮುಂದೇನು ಎಂಬ ಚಿಂತೆ ಬೇಡ...

ಮುಂದೇನು ಎಂಬ ಚಿಂತೆ ಬೇಡ...

ಅನಗತ್ಯವಾಗಿ ಸಾಮಾನುಗಳನ್ನು ಸಂಗ್ರಹಿಸಲು ಹೋಗಬೇಡಿ. ಸರ್ಕಾರ ನಿಮ್ಮ ಮನೆಗೇ ಆಹಾರ ವಸ್ತುಗಳನ್ನು ಪೂರೈಸಲಿದೆ. ಉದ್ಯೋಗ ಹಾಳಾಯಿತು, ಆದಾಯ ಕಡಿಮೆಯಾಯಿತು, ಮದುವೆ ನಿಂತು ಹೋಯಿತು, ಭವಿಷ್ಯದಲ್ಲಿ ಮುಂದೇನು ಎಂಬ ಚಿಂತೆ ಬೇಡ. ಆದದ್ದು ಆಗಿಯೇ ಆಗುತ್ತದೆ. ಎದುರಿಸುವಂತೆ ಮನಸ್ಸನ್ನು ಗಟ್ಟಿಮಾಡಿಕೊಳ್ಳಿ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯಕ್ಕೆ ಸಂಬಂಧವಿದೆ. ಸಣ್ಣಪುಟ್ಟ ಸಮಸ್ಯೆಗಳಿಗೂ ನೊಂದುಕೊಳ್ಳುವ, ಚಿಂತೆಮಾಡುವ, ಗಾಬರಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ತಂದುಕೊಳ್ಳಬೇಡಿ. ತಡೆಯಲಾರದ ಭಯವಿದ್ದರೆ ಮನೋವೈದ್ಯರಲ್ಲಿ ಚಿಕಿತ್ಸೆ ಲಭ್ಯವಿದೆ. ಅಂತೆ-ಕಂತೆ, ಹಾಗಂತೆ- ಹೀಗಂತೆ ಹೇಳಬೇಡಿ, ಕೇಳಬೇಡಿ. ಯಾರೋ ಹೇಳಿದ ವದಂತಿಗೆ ಕಿವಿಗೊಡಬೇಡಿ, ನಿದ್ದೆಗೆಡಬೇಡಿ. ಒಬ್ಬ ವ್ಯಕ್ತಿಗೆ ಕನಿಷ್ಠ ಎಂಟು ತಾಸು ನಿದ್ದೆ ಬೇಕು, 8 ತಾಸು ನಿದ್ದೆ ಮಾಡಿ, ಮಧ್ಯಾಹ್ನವೂ 2 ತಾಸು ನಿದ್ದೆ ಮಾಡಿ. ನಿದ್ದೆ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅಗತ್ಯವಿದೆ. ಇಂತಹ ಸರಳ ಸಂಗತಿಗಳನ್ನು ಪಾಲಿಸಿ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+