ಉಗ್ರರ ದಾಳಿಯ ಎಚ್ಚರಿಕೆ: ಉತ್ತರ ಕನ್ನಡ ಜಿಲ್ಲೆಯಲ್ಲಿ 'ಹೈ ಅಲರ್ಟ್' ಘೋಷಣೆ
Recommended Video
ಕಾರವಾರ, ಆಗಸ್ಟ್ 16: ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಕಾಶ್ಮೀರದ ವಿಶೇಷ ಸ್ಥಾನಮಾನದ ಹಕ್ಕು, ಆರ್ಟಿಕಲ್ 370ಅನ್ನು ಕೇಂದ್ರ ಸರಕಾರ ರದ್ದು ಮಾಡಿದಾಗಿನಿಂದ ಪಾಕ್ ಭಾರತದ ಮೇಲೆ ಕೆಂಡಕಾರುತ್ತಿದೆ. ಪಾಕ್ ಕೃಪಾಪೋಷಿತ ಉಗ್ರ ಸಂಘಟನೆಗಳು ಭಾರತದಲ್ಲಿ ದಾಳಿ ನಡೆಸುವ ಮೂಲಕ ಇದರ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿವೆ ಎಂದು ಗುಪ್ತಚರ ಮಾಹಿತಿ ಹೇಳಿದೆ.

ಸುಮಾರು 150 ಕಿ.ಮೀ. ಕರಾವಳಿ ಹೊಂದಿರುವ ಜಿಲ್ಲೆಯಲ್ಲಿ, ಅರಬ್ಬೀ ಸಮುದ್ರದ ಮೂಲಕವೂ ಉಗ್ರರು ದೇಶದ ಒಳ ನುಸುಳಬಹುದು. ಯಾವ ಸಂದರ್ಭದಲ್ಲಾದರೂ ಮೀನುಗಾರರು, ವ್ಯಾಪಾರಿಗಳ ಸೋಗಿನಲ್ಲಿ ಸಮುದ್ರ ಮಾರ್ಗದ ಮೂಲಕ ಜಿಲ್ಲೆಯನ್ನು ಪ್ರವೇಶಿಸಿ, ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ. ಹೀಗಾಗಿ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಹೈ ಅಲರ್ಟ್ನ ಸೂಚನೆ ನೀಡಿದ್ದು, ರಾಜ್ಯ ಹಾಗೂ ಹೊರ ರಾಜ್ಯದ ದೋಣಿಗಳ ಮೇಲೆ ಹಾಗೂ ಒಟ್ಟಾರೆ ಸಮುದ್ರ ಮಾರ್ಗದ ಮೇಲೆ ಕಣ್ಣಿಡಲು ತಿಳಿಸಿದ್ದಾರೆ.
ಅದರಂತೆ, ಮೀನುಗಾರಿಕೆ ಇಲಾಖೆ, ಕರಾವಳಿ ಕಾವಲು ಪೊಲೀಸ್ ಪಡೆ ಹಾಗೂ ತಟ ರಕ್ಷಕ ದಳವು ಸಮುದ್ರ ಮಾರ್ಗದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮೀನುಗಾರರ ಯೂನಿಯನ್ ಗಳಿಗೆ ಸಂದೇಶ ರವಾನಿಸಲಾಗಿದ್ದು, ಅಪರಿಚಿತರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಅನುಮಾನಾಸ್ಪದ ದೋಣಿಗಳು ಕಂಡುಬಂದಲ್ಲಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಲು ಸೂಚನೆ ನೀಡಲಾಗಿದೆ.
ಸೀಬರ್ಡ್ ನಲ್ಲೂ ಅಲರ್ಟ್
ಏಷ್ಯಾದ ಅತಿದೊಡ್ಡ ನೌಕಾನೆಲೆ ಸೀಬರ್ಡ್ ಕೂಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿದೆ. ಉಗ್ರರು ನೌಕಾನೆಲೆಯನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸುವ ಸಾಧ್ಯತೆ ಕೂಡ ಇದೆ. ಹೀಗಾಗಿ, ಸೀಬರ್ಡ್ ನೌಕಾನೆಲೆಯಲ್ಲೂ 'ಹೈ ಅಲರ್ಟ್' ಘೋಷಿಸಲಾಗಿದೆ. ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಒಳ ಹೋಗುವ ಹಾಗೂ ಹೊರ ಬರುವ ಎಲ್ಲರ ಚಲನವಲನಗಳನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ನೌಕಾನೆಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ್ ಕಪೂರ್ ತಿಳಿಸಿದರು.












Click it and Unblock the Notifications