ಸಾಮಾಜಿಕ ಜಾಲತಾಣಗಳಲ್ಲಿ ‘ಕ್ರಾಂತಿಕಾರಿ ಗೋವನ್ನ’ರ ಅಭಿಯಾನ; ‘ಘಾಟಿ ಸರ್ಕಾರ’ದ ವಿರುದ್ಧ ಆಕ್ರೋಶ

ಕಾರವಾರ, ಜನವರಿ 30: ಗೋವಾ ರಾಜ್ಯದಲ್ಲಿ ಕರ್ನಾಟಕ ಸೇರಿದಂತೆ ಹೊರ ರಾಜ್ಯದವರ ಮೇಲೆ ದಬ್ಬಾಳಿಕೆ ಮಾಡುವ ಪ್ರಕರಣ ಈ ಹಿಂದೆ ಸಾಕಷ್ಟು ಬಾರಿ ನಡೆದಿದೆ. ಇದೀಗ 'ನಾನು ಕ್ರಾಂತಿಕಾರಿ ಗೋವನ್ನ' (ಐ ಆಮ್ ರೆವಲ್ಯೂಷನರಿ ಗೋವನ್) ಎನ್ನುವ ಅಭಿಯಾನವೊಂದನ್ನು ಆರಂಭಿಸಿರುವ ಕೆಲ ಗೋವನ್ನರು, ಮತ್ತೆ ಹೊರ ರಾಜ್ಯದವರ ಮೇಲೆ ದಬ್ಬಾಳಿಕೆಗೆ ಮುಂದಾಗಿದ್ದಾರೆ.

ಮನೋಜ್ ಪರಬ್ ಎನ್ನುವ ಯುವಕನ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನಕ್ಕೆ ಕೆಲ ತಿಂಗಳ ಹಿಂದೆ ಚಾಲನೆ ನೀಡಲಾಗಿದೆ. ಈ ಮೂಲಕ 'ನಮ್ಮ ಗೋವಾ ನಮಗೆ ಬೇಕು' ಎಂದು ಹೊರ ರಾಜ್ಯದವರ ಮೇಲೆ ದಬ್ಬಾಳಿಕೆಗೆ ಮುಂದಾಗಿದ್ದಾರೆ. ಗೋವಾದಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿದ್ದು, ಹೊರ ರಾಜ್ಯದವರಿಂದ ಬಂದವರೇ ಮಾಡುತ್ತಿದ್ದಾರೆಂದು ಈ ಅಭಿಯಾನದ ಮೂಲಕ ಆರೋಪಿಸಿದ್ದಾರೆ.

 ಹೊರರಾಜ್ಯದವರಿಗೆ ಮಣೆ ಹಾಕದಿರುವಂತೆ ಒತ್ತಾಯ

ಹೊರರಾಜ್ಯದವರಿಗೆ ಮಣೆ ಹಾಕದಿರುವಂತೆ ಒತ್ತಾಯ

ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವುದಷ್ಟೆ ಅಲ್ಲದೆ ಹೊರ ರಾಜ್ಯದಿಂದ ಬಂದು ವ್ಯಾಪಾರ- ವ್ಯವಹಾರ ಮಾಡುವ ಮೂಲಕ ಗೋವಾದ ಆರ್ಥಿಕತೆ ಮೇಲೆ ಪರಿಣಾಮ ಬೀರುವಂತೆ ಮಾಡುತ್ತಿದ್ದು, ಹೊರ ರಾಜ್ಯದಿಂದ ಬಂದವರಿಗೆ ಅವಕಾಶ ಕೊಡದಿರುವುದೇ ಈ ಅಭಿಯಾನದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಗೋವಾದ ಪ್ರವಾಸಿ ತಾಣಗಳಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಹೊರ ರಾಜ್ಯದಿಂದ ಬಂದು ವ್ಯಾಪಾರ- ವ್ಯವಹಾರ ಮಾಡುತ್ತಿದ್ದವರ ಮೇಲೆ ಗೋವನ್ನರ ತಂಡ ದಾಳಿ ಮಾಡಿ ವಾಪಸ್ ಕಳುಹಿಸುವ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಗೋವಾದಲ್ಲಿ ಎಲ್ಲಾ ವ್ಯಾಪಾರಗಳನ್ನು ಗೋವಾದವರೇ ಮಾಡಿದರೆ ಅಲ್ಲಿನ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ ಎನ್ನುವ ಸಂದೇಶವನ್ನು ಸಾರುವ ಕೆಲಸವನ್ನು ಅಭಿಯಾನದ ಮೂಲಕ ಮಾಡುತ್ತಿದ್ದಾರೆ.

ಒಂದೆಡೆ ಅಭಿಯಾನದ ಹೆಸರಿನಲ್ಲಿ ಗೋವನ್ನರನ್ನು ಸಂಘಟನೆ ಮಾಡುವ ಕಾರ್ಯ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ವ್ಯಾಪಾರಿಗಳ ಮೇಲೆ ಉದ್ಧಟತನ ಸಹ ತೋರಲಾಗುತ್ತಿದೆ. ಹೊರ ರಾಜ್ಯದವರಿಗೆ ‘ಘಾಟಿ ಸರ್ಕಾರ' ಬೆಂಬಲ ನೀಡುತ್ತಿದೆ ಎಂದು ತಮ್ಮದೇ ಗೋವಾ ಸರ್ಕಾರದ ವಿರುದ್ಧ ಗೋವನ್ನರು ಅಭಿಯಾನ ಮೂಲಕ ಕಿಡಿಕಾರಿದ್ದಾರೆ.

 ಪ್ರವಾಸಿಗರ ಮೇಲೆ ದಬ್ಬಾಳಿಕೆ ತೋರಿದ ತಂಡ

ಪ್ರವಾಸಿಗರ ಮೇಲೆ ದಬ್ಬಾಳಿಕೆ ತೋರಿದ ತಂಡ

ಹೊರ ರಾಜ್ಯದಿಂದ ಬರುವ ಪ್ರವಾಸಿಗರ ಮೇಲೂ ಈ ತಂಡ ದಬ್ಬಾಳಿಕೆ ನಡೆಸಿದೆ. ಕೆಲ ಪ್ರವಾಸಿಗರು ಹೋಟೆಲ್ ನಲ್ಲಿ ಊಟ ಮಾಡಿದರೆ ಹೆಚ್ಚು ಹಣ ಖರ್ಚಾಗುತ್ತದೆ ಎಂದು ಖಾಲಿ ಇರುವ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸಿ ತಾವೇ ಅಡುಗೆಯನ್ನು ಮಾಡಿಕೊಳ್ಳುತ್ತಾರೆ. ಅಂಥವರ ಮೇಲೂ ಈ ತಂಡ ದಾಳಿ ನಡೆಸಿ ಅಡುಗೆ ಮಾಡಲು ಅವಕಾಶವನ್ನೂ ಕೊಡದೇ ವಾಪಸ್ ಕಳುಹಿಸುವ ಕಾರ್ಯ ಕೂಡ ಮಾಡುತ್ತಿದ್ದಾರೆ. ಪ್ರವಾಸಿಗರು ಅಡುಗೆ ಮಾಡುವುದನ್ನು ತಡೆದು ವಾಪಸ್ ಕಳುಹಿಸುವ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪ್ರವಾಸಿಗರು ತಾವೇ ಅಡುಗೆ ಮಾಡಿಕೊಂಡರೆ ಗೋವಾದ ಹೋಟೆಲ್ ಗಳಿಗೆ ನಷ್ಟವಾಗಲಿದ್ದು, ಈ ಹಿನ್ನಲೆಯಲ್ಲಿ ಪ್ರವಾಸಿಗರು ತಮ್ಮ ಜಾಗದಲ್ಲಿ ಅಡುಗೆ ಮಾಡಿಕೊಳ್ಳಬಾರದು. ಹೋಟೆಲ್ ಮೊರೆ ಹೋಗಿ ಅಲ್ಲೇ ಊಟ ಮಾಡಬೇಕು ಎನ್ನುವ ಉದ್ಧಟತನ ಈ ‘ಐ ಆಮ್ ರೆವಲ್ಯೂಷನರಿ ಗೋವನ್' ಅಭಿಯಾನ ನಡೆಸುತ್ತಿರುವ ತಂಡದವರದ್ದಾಗಿದೆ.

 ಗೋವಾದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿರುವ ಕನ್ನಡಿಗರು

ಗೋವಾದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿರುವ ಕನ್ನಡಿಗರು

‘ನಮ್ಮ ಗೋವಾ ನಮಗೆ ಬೇಕು' ಎಂದು ನಡೆಸುತ್ತಿರುವ ಅಭಿಯಾನದಲ್ಲಿ ಅತಿ ಹೆಚ್ಚಾಗಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ವಲಸೆ ಹೋಗಿರುವ ಕನ್ನಡಿಗರು ನೆಲೆಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ಅಂಗಡಿಗಳನ್ನು ಹಾಕಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಹಚ್ಚೆ ಹಾಕುವ, ಮಸಾಜ್ ಮಾಡುವ, ಸಣ್ಣ ಪುಟ್ಟ ವ್ಯಾಪಾರಗಳು, ಕಟ್ಟಡ ನಿರ್ಮಾಣ ಕಾರ್ಯ ಹೀಗೆ ಹಲವಾರು ಕೆಲಸಗಳನ್ನು ಲಕ್ಷಾಂತರ ಕನ್ನಡಿಗರು ಗೋವಾದಲ್ಲಿ ಮಾಡುತ್ತಾ, ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ.

ಸದ್ಯ ಗೋವಾದಲ್ಲಿ ಪ್ರಾರಂಭವಾಗಿರುವ ಅಭಿಯಾನದಲ್ಲಿ ಕನ್ನಡಿಗರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಿಗರ ಪರ ಸರ್ಕಾರ ನಿಲ್ಲುತ್ತಿದೆ ಎಂದು ‘ಘಾಟಿ ಸರ್ಕಾರ' ಎಂದು ಆರೋಪಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಅಭಿಯಾನದ ಹೆಸರಿನಲ್ಲಿ ಗೋವಾದಲ್ಲಿ ಕನ್ನಡಿಗರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯಿಂದ ಕನ್ನಡಿಗರು ಅತಂತ್ರ ಸ್ಥಿತಿಗೆ ತಲುಪುವಂತಾಗಿದ್ದು, ಕೆಲ ಗೋವನ್ನರು ನಡೆಸುತ್ತಿರುವ ಈ ಉದ್ಧಟತನಕ್ಕೆ ಹಲವರು ಟೀಕೆ ಸಹ ವ್ಯಕ್ತಪಡಿಸಿದ್ದಾರೆ.

 ಅಂಗಡಿಗಳನ್ನು ತೆರೆದ ತಂಡ

ಅಂಗಡಿಗಳನ್ನು ತೆರೆದ ತಂಡ

ಅಭಿಯಾನದ ಅಂಗವಾಗಿ ‘ಐ ಆಮ್ ರೆವಲ್ಯೂಷನರಿ ಗೋವನ್' ತಂಡದ ಕೆಲವು ಯುವಕರು ಸ್ವತಃ ತಾವೇ ಫಾಸ್ಟ್ ಫುಡ್ ಸೆಂಟರ್ ಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದಾರೆ. ಹೊರ ರಾಜ್ಯದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದೆ, ಗೋವನ್ನರೇ ವ್ಯಾಪಾರ- ವಹಿವಾಟು ನಡೆಸಬೇಕು ಎಂಬ ಕಾರಣಕ್ಕೆ ತಾವೇ ಖುದ್ದಾಗಿ ಅಂಗಡಿ- ಮಳಿಗೆಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದು, ಬರುವ ಗೋವಾದ ಗ್ರಾಹಕರಿಗೆ ಅಭಿಯಾನ ಬೆಂಬಲಿಸುವಂತೆ ಕರೆನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+