ಏಂಡಿ ಬಲೆಗೆ ಭರಪೂರ ಮೀನು; ತಾಜಾ ಮೀನಿಗಾಗಿ ಮುಗಿ ಬೀಳುತ್ತಿರುವ ಜನ!
ಕಾರವಾರ, ಜುಲೈ 28: ಕರಾವಳಿಯಲ್ಲಿ ಕಳೆದ ಎರಡು ತಿಂಗಳಿಂದ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಆದರೆ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಇದೆಯಾದರೂ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಅದು ಸಹ ಸಾಧ್ಯವಾಗಿರಲಿಲ್ಲ. ಇದರಿಂದ ಕರಾವಳಿಗರು ಐಸ್ ಮೀನನ್ನೆ ಅವಲಂಭಿಸಬೇಕಾಗಿತ್ತು.
ಆದರೆ ಇದೀಗ ಕಳೆದ ಕೆಲ ದಿನಗಳಿಂದ ಮಳೆ ಬಿಡುವು ನೀಡಿದ್ದ ಬೆನ್ನಲ್ಲೆ ಸಾಂಪ್ರದಾಯಿಕ ಏಂಡಿ ಬಲೆಯಲ್ಲಿ ಭರಪೂರ ಮೀನು ಶಿಖಾರಿಯಾಗುತ್ತಿದ್ದು ಮೀನುಗಾರರು ಫುಲ್ ಖುಷಿಯಾಗಿದ್ದಾರೆ. ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಸಾಂಪ್ರದಾಯಿಕವಾಗಿ ಮೀನು ಬೇಟೆ ನಡೆಸಲಾಗುತ್ತದೆ. ಅದರಲ್ಲೂ ದಡದಲ್ಲೇ ನಿಂತು ಬಲೆ ಹಾಕಿ ಮೀನು ಹಿಡಿಯುವ ಏಂಡಿ ಮೀನುಗಾರಿಕೆ ಮಳೆಗಾಲದ ಅವಧಿಯಲ್ಲಿ ಹೆಚ್ಚಾಗಿ ಮಾಡಲಾಗುತ್ತದೆ.
ಆದರೆ ಕಳೆದೊಂದು ತಿಂಗಳಿನಿಂದ ಕಡಲತೀರದಲ್ಲಿ ಭಾರೀ ಮಳೆಯಿಂದಾಗಿ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭವಾಗಿರಲಿಲ್ಲ. ಇದೀಗ ಮಳೆ ಬಿಡುವು ನೀಡಿದ್ದು ಎಲ್ಲೆಡೆ ಬಿಸಿಲಿನ ವಾತಾವರಣ ಮೂಡುತ್ತಿದೆ. ಇದರಿಂದ ಕರಾವಳಿ ತೀರಗಳಲ್ಲಿ ಏಂಡಿ ಬಲೆ ಮೀನುಗಾರಿಕೆ ಚುರುಕುಗೊಂಡಿದೆ.

ದಡದ ಸಮೀಪದಲ್ಲಿ ಮೀನುಗಾರಿಕೆಗೆ ಅವಕಾಶ
ಸಾಮಾನ್ಯವಾಗಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತಗೊಳ್ಳುವ ಜೂನ್, ಜುಲೈ ತಿಂಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮಾಡಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಮೀನುಗಳು ಮರಿ ಇಡುವ ಹಿನ್ನಲೆಯಲ್ಲಿ ಕೇವಲ ದಡದ ಸಮೀಪದಲ್ಲಿ ಮೀನುಗಾರಿಕೆಗೆ ಅವಕಾಶವಿದ್ದು ಈ ಸಂದರ್ಭದಲ್ಲಿ ಏಂಡಿ ಮೀನುಗಾರಿಕೆಯನ್ನು ನಡೆಸಲಾಗುತ್ತದೆ. ಅಲ್ಲದೆ ಇದೀಗ ಕೆಲ ಮೀನುಗಾರರು ಬೀಸಿದ್ದ ಏಂಡಿ ಬಲೆಗೆ ಸಾಕಷ್ಟು ಮೀನುಗಳು ಬೀಳತೊಡಗಿದ್ದು, ಮಳೆಯಿಂದಾಗಿ ಮೀನುಗಾರಿಕೆ ಮಾಡಲಾಗದೇ ಕಂಗಾಲಾಗಿದ್ದ ಸಾಂಪ್ರದಾಯಿಕ ಮೀನುಗಾರರು ಫುಲ್ ಖುಷಿಯಾಗಿದ್ದಾರೆ.

ಏಂಡಿ ಬಲೆ ಮೀನುಗಾರಿಕೆಗೆ 40ಕ್ಕಿಂತ ಹೆಚ್ಚು ಮಂದಿ ಅವಶ್ಯಕ
ಇನ್ನು ಏಂಡಿ ಬಲೆ ಮೀನುಗಾರಿಕೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಬಲೆ ಬೀಸಿದರೆ ಸುಮಾರು 40 ರಿಂದ 100 ಮಂದಿ ಅವಶ್ಯಕತೆ ಇದೆ. ಒಂದು ಬದಿಯಿಂದ ಬೋಟ್ ಮೂಲಕ ತೀರ ಪ್ರದೇಶದಲ್ಲಿ ಬಲೆಯನ್ನು ಬಿಡುತ್ತಾ ಇನ್ನೊಂದು ಭಾಗಕ್ಕೆ ಬಂದು ನಿಲ್ಲಲಾಗುತ್ತದೆ. ಬಳಿಕ ಎರಡೂ ತುದಿಯಲ್ಲಿ ನಿಲ್ಲುವ ಮೀನುಗಾರರು ಹಂತ ಹಂತವಾಗಿ ಬಲೆಯನ್ನು ಎರಡೂ ಕಡೆಗಳಿಂದ ಎಳೆಯಬೇಕಾಗುತ್ತದೆ. ಈ ವೇಳೆ ಕಡಲತೀರ ಪ್ರದೇಶಕ್ಕೆ ಬಂದ ಮೀನುಗಳು ಬಲೆಯಲ್ಲಿ ಸಿಲುಕಿಕೊಳ್ಳುತ್ತವೆ.

ಏಂಡಿ ಮೀನುಗಾರಿಕೆಯಲ್ಲಿ ಲಾಭವಿಲ್ಲ
ಈ ರೀತಿಯ ಮೀನುಗಾರಿಕೆಯಲ್ಲಿ ಒಮ್ಮೊಮ್ಮೆ ಹೆಚ್ಚು, ಇನ್ನೊಮ್ಮೆ ಕಡಿಮೆ ಮೀನುಗಳು ಸಹ ಸಿಗುತ್ತವೆ. ಸಿಕ್ಕಂತಹ ಮೀನಿನಲ್ಲಿ ಶೇಕಡಾ 40ರಷ್ಟು ಭಾಗವನ್ನು ಬಲೆ ಎಳೆಯಲು ಬಂದಂತಹ ಮೀನುಗಾರರಿಗೆ ನೀಡಲಾಗುತ್ತದೆ. ಉಳಿದದ್ದನ್ನು ಮಾಲೀಕ ಮಾರಾಟ ಮಾಡುತ್ತಾನೆ. ಆದ್ರೆ ಏಂಡಿ ಮೀನುಗಾರಿಕೆಯಲ್ಲಿ ಹೆಚ್ಚು ಜನರು ಇರುವುದರಿಂದ ಬಂದಂತಹವರಿಗೆ ಹೆಚ್ಚು ಲಾಭ ಸಿಗುವುದಿಲ್ಲ ಅನ್ನೋದು ಮೀನುಗಾರರ ಅಭಿಪ್ರಾಯವಾಗಿದೆ.

ಕಡಲತೀರಗಳಿಗೆ ಬಂದು ಮೀನು ಕೊಳ್ಳುತ್ತಿರುವ ಜನರು
ಇನ್ನು ಇಷ್ಟು ದಿನ ಸರಿಯಾಗಿ ಮೀನುಗಾರಿಕೆಯಾಗದ ಕಾರಣ ಕರಾವಳಿಯಲ್ಲಿ ಐಸ್ ಮೀನುಗಳನ್ನೆ ಹೆಚ್ಚಾಗಿ ಬಳಸಲಾಗುತಿತ್ತು. ಆದರೆ ಕಳೆದ ಒಂದು ವಾರದಿಂದ ಏಂಡಿ ಬಲೆಗೆ ಭರಪೂರ ಮೀನುಗಳು ಬೀಳುತ್ತಿವೆ. ಹೀಗೆ ಬೀಳುವ ತಾಜಾ ಮೀನಿಗೆ ಸಾಕಷ್ಟು ಬೇಡಿಕೆ ಕೂಡ ಹೆಚ್ಚಾಗಿದೆ. ಅಲ್ಲದೆ ಬೆಲೆ ಕೂಡ ತುಸು ಹೆಚ್ಚಾಗಿದ್ದರೂ ಕೂಡ ತಾಜ ಮೀನಿಗಾಗಿ ಜನರು ಕಡಲತೀರಗಳಿಗೆ ಬಂದು ಮೀನುಗಾರರ ಮೂಲಕ ಕೊಂಡು ಪಡೆಯುತ್ತಿದ್ದಾರೆ.
ಒಟ್ಟಾರೇ ಮಳೆ ಬಿಡುವು ಕೊಟ್ಟ ಬೆನ್ನಲ್ಲೇ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಸಿಕ್ಕಿದ್ದು ಮೀನುಗಾರರಿಗೆ ಖುಷಿ ಕೊಟ್ಟಿದ್ದರೆ, ತಾಜಾ ಮೀನು ಸಿಕ್ಕ ಸಂತಸದಲ್ಲಿ ಮೀನು ಪ್ರಿಯರು ಮೀನಿನ ಖರೀದಿಗೆ ಮುಗಿಬೀಳುವುದಂತೂ ಸತ್ಯ.












Click it and Unblock the Notifications