ಕಾರವಾರ: ಮೀನುಗಾರರಿಗೆ ತೀವ್ರ ನಿರಾಸೆ ಮಾಡಿದ ಎಚ್ ಡಿಕೆ ಬಜೆಟ್
ಕಾರವಾರ, ಜುಲೈ.05 : ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರಾವಳಿಗರಿಗೆ ತೀವ್ರ ನಿರಾಸೆಯುಂಟು ಮಾಡಿದ್ದಾರೆ.
2,18,488 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ನಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಗೆ 150 ಕೋಟಿ ಬಿಟ್ಟರೆ ಉತ್ತರ ಕನ್ನಡ ಜಿಲ್ಲೆಗೆ ವಿಶೇಷವಾಗಿ ಯಾವುದೇ ಪ್ಯಾಕೇಜ್, ಅನುದಾನ, ಹೊಸ ಯೋಜನೆಗಳು ಘೋಷಣೆಯಾಗಿಲ್ಲ.
ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?
ಈ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದ್ದು, ಹೊಸ ಯೋಜನೆಗಳು, ಸಾಲ ಮನ್ನಾದ ಕುರಿತು ನಿರೀಕ್ಷೆ ಇಟ್ಟುಕೊಂಡಿದ್ದ ಮೀನುಗಾರರಿಗೆ ತೀವ್ರ ನಿರಾಸೆಯುಂಟಾಗಿದೆ.
ಉತ್ತರಕನ್ನಡ ಜಿಲ್ಲೆಯ ನಿರೀಕ್ಷೆ ಏನಿತ್ತು?
ಕರಾವಳಿ ಭಾಗದಲ್ಲಿ ಉಂಟಾಗುವ ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವುದು ಈ ಭಾಗದ ಜನರಲ್ಲಿ ನಿರೀಕ್ಷೆ ಇತ್ತು.
ಕುಮಟಾ, ಗೋಕರ್ಣ, ಅಂಕೋಲಾ, ಕಾರವಾರ ಭಾಗದಲ್ಲಿ ಉಪ್ಪು ನೀರಿನ ಹಾವಳಿ ಹೆಚ್ಚಿದೆ. ಉಪ್ಪು ನೀರು ಗದ್ದೆಹಳಿಗೆ ನುಗ್ಗಿ ಬೆಳೆ ಹಾನಿ ಉಂಟಾಗುವುದು ಇಲ್ಲಿ ಹೆಚ್ಚು. ಪ್ರತೀ ವರ್ಷವೂ ರೈತರು ಈ ಉಪ್ಪು ನೀರಿನಿಂದಾಗಿ ಪರಿಪಾಟಲು ಅನುಭವಿಸುತ್ತಾರೆ. ಹೀಗಾಗಿ ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಬಜೆಟ್ ನಲ್ಲಿ ರೈತರು ನಿರೀಕ್ಷಿಸಿದ್ದರು.
ಇದು ಅಣ್ಣ-ತಮ್ಮಂದಿರ ಬಜೆಟ್: ಯಡಿಯೂರಪ್ಪ ಕಟು ಟೀಕೆ
ಇನ್ನು, ಕರಾವಳಿ ಭಾಗದ ಪ್ರಮುಖ ವೃತ್ತಿಯಾದ ಮೀನುಗಾರಿಕೆಯನ್ನು ಅವಲಂಬಿಸಿಕೊಂಡಿರುವ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು. ಮೀನುಗಾರರನ್ನು ಕರಾವಳಿ ಭಾಗದ ರೈತರು ಎಂದು ಪರಿಗಣಿಸಿ ಅವರ ಸಾಲ ಮನ್ನಾ ಮಾಡಬೇಕು.
ಯಾಂತ್ರೀಕೃತ ದೋಣಿಗಳಲ್ಲಿ ಬಂದು ಆಳಸಮುದ್ರ ಮೀನುಗಾರಿಕೆ ಮಾಡುವವರು ಡೀಸೆಲ್ ಸಬ್ಸಿಡಿ ಹೆಚ್ಚಿಸುವಂತೆ, ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಯದ ದಿನಗಳಲ್ಲಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಇವೆಲ್ಲವೂ ಬಜೆಟ್ ನಲ್ಲಿ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ಮೀನುಗಾರರಲ್ಲಿತ್ತು.
ಉದ್ಯೋಗ ಸೃಷ್ಟಿ
ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಕೈಗಾರಿಕಾ ಟೌನ್ಶಿಪ್ಗಳನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿತ್ತು. ಇದರಿಂದ ಜಿಲ್ಲೆಯ ಜನತೆ ಉದ್ಯೋಗಗಳಿಗಾಗಿ ಗೋವಾ, ಬೆಂಗಳೂರಿಗೆ ವಲಸೆ ಹೋಗುವುದನ್ನು ತಡೆಯಬಹುದು. ಅವರಿದ್ದಲ್ಲಿಯೇ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಆದರೆ, ಬಜೆಟ್ ನಲ್ಲಿ ವಿಷಯ ಪ್ರಸ್ತಾಪವೇ ಆಗಿಲ್ಲ.
ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯುವ ನಿಯಮ ಸಡಿಲಿಕೆ, ಸರ್ಕಾರ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆಗಳ ಹೂಳೆತ್ತಲು ವಿಶೇಷ ಯೋಜನೆ ಘೋಷಣೆಯಾಗುವ ಕುರಿತು ಇಲ್ಲಿನ ಜನರಲ್ಲಿ ನಿರೀಕ್ಷೆ ಇತ್ತು.
ಶಿರಸಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬ ಬೇಡಿಕೆ ಸುಮಾರು ಒಂದು ದಶಕದಿಂದ ಇದೆ. ಆದರೆ, ಪ್ರತಿ ಬಜೆಟ್ ನಲ್ಲೂ ಈ ವಿಷಯ ಘೋಷಣೆಯಾಗುತ್ತಿಲ್ಲ. ಈ ಬಾರಿಯಾದರೂ ಆಗುತ್ತದೆಯೇ ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿತ್ತು.
ಈ ಬಾರಿಯ ಬಜೆಟ್ ನಲ್ಲಿಯೂ ಕರಾವಳಿ ಭಾಗದ ರೈತರ ಆಸಾಮಿ ಸಾಲದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಈ ಭಾಗದ ರೈತರಲ್ಲಿ ತೀವ್ರ ಬೇಸರ ಮೂಡಿಸಿದೆ. ಹಲವು ವರ್ಷಗಳಿಂದ ಆಸಾಮಿ ಸಾಲ ಮನ್ನಾ ಮಾಡುವಂತೆ ಈ ಭಾಗದ ರೈತರು ಸರ್ಕಾರವನ್ನು ಒತ್ತಾಯಿಸುತ್ತ ಬಂದಿದ್ದರೂ ಅದನ್ನು ನಿರ್ಲಕ್ಷಿಸಿರುವುದು ರೈತರಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ.