ದೃಶ್ಯ ಮಾಧ್ಯಮಗಳಿಗೆ ಪ್ರಬುದ್ಧತೆ ಇಲ್ಲ: ರವಿ ಹೆಗಡೆ
ಕಾರವಾರ, ಜುಲೈ .01: ಉತ್ತರ ಕನ್ನಡದಲ್ಲಿ ದೊಡ್ಡಮಟ್ಟದ ಪತ್ರಕರ್ತರ ಸಂಖ್ಯೆ ಬೆಳೆಯಲು ಇಲ್ಲಿನ ಪರಿಸರವೇ ಕಾರಣ ಎಂದು ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಪತ್ರಿಕಾ ಭವನದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತರಿಗೆ ಮೊದಲಿದ್ದಷ್ಟು ಗೌರವ ಈಗಿಲ್ಲ. ಪತ್ರಿಕೋದ್ಯಮಕ್ಕೆ ಕೆಟ್ಟ ಹೆಸರು ಬರಲು ಕಾರಣವೇನು ಎನ್ನುವುದನ್ನು ಪತ್ರಕರ್ತರೆಲ್ಲ ಒಂದಾಗಿ ಚಿಂತಿಸಬೇಕಿದೆ. ಪ್ರಜಾಪ್ರಭುತ್ವದ ಅಡಿ ಕೆಲಸ ಮಾಡುತ್ತಿರುವ ಎಲ್ಲ ಸಂಸ್ಥೆಗಳ ಮೌಲ್ಯವೂ ಕುಸಿದಿದೆ ಎಂದು ಅಭಿಪ್ರಾಯಪಟ್ಟರು.

ಮುದ್ರಣ ಮಾಧ್ಯಮದ ಬಗ್ಗೆ ಅಷ್ಟೊಂದು ಅಸಮಧಾನ ಜನರಲ್ಲಿಲ್ಲ. ಆದರೆ, ದೃಶ್ಯ ಮಾಧ್ಯಮಗಳ ಧಾವಂತದಿಂದಾಗಿ ಪತ್ರಿಕೋದ್ಯಮಕ್ಕೆ ಗೃಹಣ ಹಿಡಿದಿದೆ. ಪತ್ರಿಕೋದ್ಯಮಕ್ಕೆ 175 ವರ್ಷಗಳ ಇತಿಹಾಸವಿದೆ. ಆದರೆ, ದೃಶ್ಯ ಮಾಧ್ಯಮಕ್ಕೆ ಕೇವಲ 11 ವರ್ಷಗಳ ಇತಿಹಾಸವಷ್ಟೆ. ಹೀಗಾಗಿ ದೃಶ್ಯ ಮಾಧ್ಯಮಕ್ಕೆ ಪ್ರಬುದ್ಧತೆ ಇಲ್ಲವಾಗಿದೆ.
ಆರೋಗ್ಯಯುತ ಚರ್ಚೆಗಳು ದೃಶ್ಯ ಮಾಧ್ಯಮಗಳಲ್ಲಿ ಆಗಬೇಕಿದೆ. ಟಿಆರ್ ಪಿಯ ಪೈಪೋಟಿಯಲ್ಲಿ ರಾಷ್ಟ್ರದ ರಕ್ಷಣಾ ವ್ಯವಸ್ಥೆಯ ಕುರಿತ ಗುಟ್ಟುಗಳನ್ನೂ ಬಿಡುಗಡೆ ಮಾಡುತ್ತಿದ್ದೇವೆ. ಹೀಗಾಗಿ ಮಾಧ್ಯಮಗಳಿಗೆ ನಿಯಮಾವಳಿಗಳನ್ನು ಹಾಕಿಕೊಳ್ಳುವುದು ಅಗತ್ಯ. ಎಲ್ಲೆಲ್ಲಿ ನಿಯಂತ್ರಣ ಅಗತ್ಯ ಎನ್ನುವುದನ್ನು ಪತ್ರಕರ್ತರೇ ಚರ್ಚಿಸಬೇಕಿದೆ ಎಂದರು.
ಸಾಮಾಜಿಕ ಜಾಲತಾಣವು 'ಮಿಥ್ಯಾ ರಾಕ್ಷಸ'ನಂತೆ. ಇವುಗಳಿಂದಾಗಿ ಜನರಿಗೆ ಮಾಧ್ಯಮಗಳ ಮೇಲೆ ದಿನದಿಂದ ದಿನಕ್ಕೆ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಪತ್ರಕರ್ತರು ಅದನ್ನು ಉಳಿಸಿಕೊಳ್ಳಬೇಕಾಗಿದೆ. ಆದರೆ, ತಂತ್ರಜ್ಞಾನದ ಬಳಕೆಯನ್ನು ನಿಲ್ಲಿಸಲು ಅಸಾಧ್ಯ. ಸಾಮಾಜಿಕ ಜಾಲತಾಣಗಳಿಂದಾಗಿ ಓದುಗರೇ ವರದಿಗಾರರಾಗಿ ಬದಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತಿತರರು ಇದ್ದರು.
ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಟಿವಿ 5 ಕನ್ನಡದ ಸಹ ಸಂಪಾದಕ ಶ್ರೀನಾಥ ಜೋಶಿ ಅವರಿಗೆ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ, ಕನ್ನಡ ಪ್ರಭದ ವಿಶೇಷ ವರದಿಗಾರ ವಸಂತಕುಮಾರ್ ಕತಗಾಲ ಹಾಗೂ ಕೆಪಿಎನ್ ಛಾಯಾಗ್ರಾಹಕ ಪಾಂಡುರಂಗ ಹರಿಕಂತ್ರ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಮತ್ತು ಬಿಟಿವಿ ನ್ಯೂಸ್ನ ಪ್ರಧಾನ ನಿರೂಪಕ ಶೇಷಕೃಷ್ಣ ಅವರಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಪತ್ರಿಕಾ ಭವನಕ್ಕೆ ಕೊಡುಗೆ ನೀಡಿದ ದಾನಿಗಳಾದ ರಾಜು ತಾಂಡೇಲ್, ಜಾರ್ಜ್ ಫರ್ನಾಂಡೀಸ್, ಮಾಧವ ನಾಯಕ, ದಿಲೀಪ ಅರ್ಗೇಕರ್, ಇಬ್ರಾಹಿಂ ಕಲ್ಲೂರ್, ನಿರಾಕಾರ ಫರ್ನೀಚರ್ಸ್, ಸುರೇಶರ್ ಶೆಟ್ಟಿ, ಗಿರೀಶ್ ರಾವ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.












Click it and Unblock the Notifications