ಸಿದ್ದಾಪುರ : ಅನಿವಾರ್ಯ ಕಾರಣಕ್ಕೆ ನಿಂತಿದ್ದ ದೀಪಾವಳಿ, ಗೋವುಗಳೊಂದಿಗೆ ಸಂಭ್ರಮಿಸಿದ ರೈತರು!
ಕಾರವಾರ, ನವೆಂಬರ್ 29: ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ಬೆಳಕಿಗೆ ತರುವ ದೀಪಾವಳಿ ಹಬ್ಬ ಹಿಂದೂಗಳ ಪಾಲಿಗೆ ದೊಡ್ಡ ಹಬ್ಬ. ಅದರಲ್ಲಿಯೂ ರೈತರ ಒಡನಾಡಿ ಗೋವುಗಳಿಗೆ ಪೂಜೆ ಸಲ್ಲಿಸಲು ಸಿಗುವ ಹಬ್ಬವನ್ನು ರೈತರು ವಿಶೇಷವಾಗಿ ಆಚರಣೆ ಮಾಡುತ್ತಾರೆ.
ಅದರಂತೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗ್ರಾಮವೊಂದರಲ್ಲಿ ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದ್ದ ದೀಪಾವಳಿ ಹಬ್ಬವನ್ನು ಗೋವುಗಳೊಂದಿಗೆ ವಿಶಿಷ್ಟವಾಗಿ ಆಚರಿಸಿದ್ದು ಈ ಕುರಿತು ಒಂದು ವಿಶೇಷ ಸುದ್ದಿ ಇಲ್ಲಿದೆ.

ಒಂದೆಡೆ ಕಾಲ್ಕಿತ್ತು ಓಡುತ್ತಿರೋ ಹೋರಿಗಳು . ಇನ್ನೊಂದೆಡೆ ಅವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರೋ ಯುವಕರು, ಮತ್ತೊಂದೆಡೆ ಈ ಸಾಹಸಮಯ ದೃಶ್ಯಗಳನ್ನು ಕಣ್ಣುಂಬಿಕೊಳ್ಳುತ್ತಿರುವ ಸಾರ್ವಜನಿಕರು. ಇದು ರೈತರ ಪಾಲಿನ ದೊಡ್ಡಹಬ್ಬ ಎಂದೇ ಕರೆಸಿಕೊಳ್ಳುವ ದೀಪಾವಳಿ ಸಂಭ್ರಮವಾಗಿದೆ.
ಸಿದ್ದಾಪುರ ತಾಲೂಕಿನ ದೊಡ್ಮನೆ ವ್ಯಾಪ್ತಿಯ ಉಡಳ್ಳಿ-ಬೀಳೆಗೊಡ ಗ್ರಾಮಗಳ ಜನರ ದೀಪಾವಳಿ ಸಂಭ್ರಮ ಇದು. ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದ್ದ ದೀಪಾವಳಿ ಹಬ್ಬವನ್ನು ಈ ಹುಣ್ಣಿಮೆ ಪಾಡ್ಯಕ್ಕೆ ಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲಿಸಿದ ರೈತರು ಬಲಿಪಾಡ ದಿನವಾದ ಇಂದು ಗೋವುಗಳಿಗೆ ಸಿಂಗಾರ, ರೊಟ್ಟಿ , ಪತ್ತೆ ತೆನ್ನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವುಗಳನ್ನು ಚೌಲೂ, ಬಲೂನ್, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು. ಈ ವೇಳೆ ಹೋರಿಗಳ ಓಟ ಹಾರಾಟ ನೆರೆದವರ ಆಕರ್ಷಣೆಗೆ ಕಾರಣವಾಯಿತು.

ಇನ್ನು ಹುಣ್ಣಿಮೆ ಪಾಡ್ಯದ ವೇಳೆ ಆಚರಣೆ ಮಾಡುವ ದೀಪಾವಳಿ ಹಬ್ಬವನ್ನು ಊರಿನ ಜನರು ಒಟ್ಟುಗೂಡಿ ವಿಜೃಂಭಣೆಯಿಂದ ಆಚರಿಸಿದರು. ಅದರಲ್ಲಿಯೂ ನಮ್ಮೊಂದಿಗೆ ದುಡಿದು ನಮ್ಮ ಮನೆಗೆ ಆಧಾರವಾಗಿರುವ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಶೇಷವಾಗಿ ಸಿದ್ದಾಪುರದ ಬಾನ್ಕುಳಿ ಮಠ ಹಾಗೂ ಸುತ್ತಮುತ್ತಲಿನ ಸಂಬಂಧಿಕರ ಮನೆಗಳಿಂದ ಹೋರಿಗಳನ್ನು ತಂದು ಅವುಗಳನ್ನು ಶೃಂಗರಿಸಿ ಮೆರವಣಿಗೆ ನಡೆಸಲಾಯಿತು. ಹೀಗೆ ಸದಾ ನಮ್ಮ ಒಡನಾಡಿಯಾಗಿರುವ ಗೋವುಗಳಿಗೆ ಈ ದಿನದಂದು ವಿಶೇಷ ಪೂಜೆ ಸಲ್ಲಿಸಿದ ಸಂತೃಪ್ತಿ ನಮ್ಮದಾಗಿದೆ ಎಂದು ಸ್ಥಳೀಯರು ಸಂಭ್ರಮಿಸಿದ್ದಾರೆ.
ಇನ್ನು ಗ್ರಾಮದಲ್ಲಿ ಬಹುತೇಕರು ಕೃಷಿಯನ್ನೇ ನಂಬಿ ಬದುಕುತ್ತಿದ್ದವರು. ಸದಾ ಗೋವುಗಳೊಂದಿಗೆ ಒಡನಾಟ ಹೊಂದಿರುವ ಕಾರಣ ನಿಂತು ಹೋಗಿದ್ದ ದೀಪಾವಳಿಯನ್ನು ಈ ಬಾರಿ ಹುಣ್ಣಿಮೆಗೆ ವಿಶೇಷವಾಗಿ ಆಚರಿಸಲಾಯಿತು. ಗೋವುಗಳನ್ನು ಅಲಂಕರಿಸಿ ಬೆದರಿಸುವ ಮೂಲಕ ಸಂಭ್ರಮಿಸುವುದಲ್ಲದೆ ನೆರೆದವರ ಆಕರ್ಷಣೆಗೂ ಕಾರಣವಾಯಿತು.












Click it and Unblock the Notifications