ಕಾರವಾರದ ಕದಂಬ ನೌಕಾನೆಲೆಗೆ ಬಂದ ವಿಶೇಷ ಅತಿಥಿ!
ಕಾರವಾರ, ಅಕ್ಟೋಬರ್ 24 : ಕದಂಬ ನೌಕಾನೆಲೆಗೆ ವಿಶೇಷ ಅತಿಥಿಯೊಬ್ಬರು ಪ್ರವೇಶಿಸಿ ಕೆಲಕಾಲ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದ್ದರು. ನೌಕಾನೆಲೆಗೆ ಬಂದಿದ್ದ ಅತಿಥಿಯನ್ನು ರಕ್ಷಿಸಿ, ಸುರಕ್ಷಿತವಾಗಿ ವಾಪಸ್ ಕಳಿಸಲಾಗಿದೆ.
ಕದಂಬ ನೌಕಾನೆಲೆಯ ಕಾಮತ್ ಬೀಚ್ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಮೊಸಳೆಯೊಂದು ಕಾಣಿಸಿಕೊಂಡಿತ್ತು. ನೌಕಾನೆಲೆಯೊಳಗೆ ಮೊಸಳೆ ಪ್ರವೇಶಿಸಿದ್ದನ್ನು ನೋಡಿದ ಸಿಬ್ಬಂದಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ವನ್ಯಜೀವಿ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಆಗಮಿಸಿದರು.

8 ಅಡಿ ಉದ್ದವಿದ್ದ ಸುಮಾರು 4 ವರ್ಷ ಪ್ರಾಯದ ಹೆಣ್ಣು ಮೊಸಳೆ ನೌಕಾನೆಲೆಯ ಕಾಂಪೌಂಡ್ ತಂತಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿತ್ತು. ವನ್ಯಜೀವಿ ಕಾರ್ಯಕರ್ತರು ಹರಸಾಹಸಪಟ್ಟು ಮೊಸಳೆಯನ್ನು ತಂತಿಯಿಂದ ಬಿಡಿಸುವಲ್ಲಿ ಯಶಸ್ವಿಯಾದರು. ಬಳಿಕ ಅದನ್ನು ದೂರದ ಅರಣ್ಯ ಪ್ರದೇಶವೊಂದರ ಹಳ್ಳದ ಬಳಿ ಬಿಡಲಾಯಿತು.

ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಮೊಸಳೆಗಳು ಕಂಡುಬರುವುದಿಲ್ಲ. ನದಿ, ಹಳ್ಳಗಳ ಸಮೀಪ ಮಾತ್ರ ಇವು ಕಾಣಸಿಗುತ್ತವೆ. ಈ ಮೊಸಳೆ ಮಳೆಯ ನೀರಿನೊಂದಿಗೆ ನದಿಯಿಂದ ತೇಲಿ ಬಂದಿರುವ ಸಾಧ್ಯತೆಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಮೊಸಳೆಯನ್ನು ರಕ್ಷಿಸುವ ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ವನ್ಯಜೀವಿ ಕಾರ್ಯಕರ್ತರಾದ ಮಹೇಶ್ ನಾಯ್ಕ, ಅಶೋಕ ನಾಯ್ಕ, ಪವನ್ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications