ಕೋವಿಡ್ ಮಾರ್ಗಸೂಚಿ; ಮದುವೆಗೆ ಬಂದವರು ಅರ್ಧದಲ್ಲೇ ವಾಪಸ್!
ಕಾರವಾರ, ಏಪ್ರಿಲ್ 22; ಕಾರವಾರ ತಾಲೂಕಿನ ಶೇಜವಾಡದ ಸದಾನಂದ ಪ್ಯಾಲೇಸ್ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿದರು. ಮದುವೆಗೆ ಬಂದಿದ್ದವರನ್ನೆಲ್ಲ ಸಭಾಂಗಣದಿಂದ ಹೊರ ಕಳುಹಿಸಿದರು.
ಕೋವಿಡ್ ಮಾರ್ಗಸೂಚಿ ಪ್ರಕಟಗೊಳ್ಳುವುದಕ್ಕಿಂತಲೂ ಮೊದಲೇ ನಿಗದಿಯಾಗಿದ್ದ ಮದುವೆಯನ್ನು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಗುತ್ತಿತ್ತು.
ಮಾಂಗಲ್ಯ ಧಾರಣೆಯೂ ನಡೆದು, ಆರತಕ್ಷತೆ ನಡೆಯುತ್ತಿದ್ದ ವೇಳೆ ಸಭಾಂಗಣಕ್ಕೆ ಪೊಲೀಸರೊಂದಿಗೆ ಅಧಿಕಾರಿಗಳು ಭೇಟಿ ನೀಡಿದರು. ಈ ಸಂದರ್ಭ 50ಕ್ಕಿಂತ ಹೆಚ್ಚು ಜನರು ಸೇರಿದ್ದ ಕಾರಣ, ನಿಗದಿತ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಹೊರ ಹೋಗುವಂತೆ ಮೈಕ್ ನಲ್ಲಿ ಸೂಚಿಸಿದ್ದಾರೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಮದುವೆಗೆ ಆಗಮಿಸಿದ್ದ ಕೆಲವರು ಉಡುಗೊರೆಯೂ ನೀಡದೇ, ಊಟವನ್ನೂ ಮಾಡದೆ ಭಯದಲ್ಲಿ ಸಭಾಂಗಣದಿಂದ ಹೊರ ಹೋಗಿದ್ದಾರೆ.

ಕೆಲ ಸಮಯದ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡು ಉಡುಗೊರೆ ನೀಡಲು ಹಾಗೂ ಊಟಕ್ಕೆ ಅವಕಾಶ ನೀಡಲಾಯಿತು. ಬಳಿಕ ಸರದಿ ಸಾಲಿನಲ್ಲಿ ಉಡುಗೊರೆ ನೀಡಿ, ಕೆಲವರು ಊಟ ಮಾಡಿ ತೆರಳಿದರು. ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮ ಇದಾಗಿದ್ದು, ಮಾರ್ಗಸೂಚಿ ಪ್ರಕಟವಾಗುವ ಮುನ್ನವೇ ಆಮಂತ್ರಣ ಪತ್ರಿಕೆಯೆಲ್ಲ ಹಂಚಿಯಾಗಿತ್ತು.
ಮದುವೆಗೆ ಬಂದವರಿಗೂ ಹೊರ ಹೋಗುವಂತೆ ಹೇಳಲು ಆಗದ ಕಾರಣ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ದಿಢೀರ್ ಎಂದು ಅಧಿಕಾರಿಗಳು ದಾಳಿ ನಡೆಸಿದ್ದು ಬೇಸರವೆನಿಸಿತು ಎಂದು ಕುಟುಂಬಸ್ಥರು ಹೇಳಿದರು.
ಮದುವೆ ಜೀವನದಲ್ಲಿ ಒಮ್ಮೆ ನಡೆಯುವುದು. ತಂದೆ- ತಾಯಿಗೆ ಒಬ್ಬರೇ ಮಕ್ಳಿದ್ದರಂತೂ ಮದುವೆಗೆ ನೂರಾರು ಕನಸಿಟ್ಟುಕೊಂಡಿರುತ್ತಾರೆ. ಆದರೆ ಈ ರೀತಿ ಕೋವಿಡ್ ಹೆಸರಲ್ಲಿ ಸಂಭ್ರಮದ ಕಾರ್ಯಕ್ರಮದಲ್ಲಿ ಆತಂಕ ಉಂಟು ಮಾಡುವ ಕಾರ್ಯವಾಗಬಾರದು. ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ ಇಂಥ ಕಾರ್ಯಕ್ರಮಗಳ ಆಚರಣೆಗೆ ಅವಕಾಶ ನೀಡಬೇಕು ಎಂದಿದ್ದಾರೆ.












Click it and Unblock the Notifications