ಪೋರ್ಚುಗೀಸ್ ಪ್ರಧಾನಿಗೆ ಪತ್ರ ಬರೆದಿದ್ದಕ್ಕೆ ಕ್ಷಮೆಯಾಚಿಸಿದ ಕ್ರೈಸ್ತರು
ಕಾರವಾರ, ಫೆಬ್ರವರಿ 3: ಅಂಜುದೀವ್ ದ್ವೀಪದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡುವಂತೆ ಕಳೆದ ವರ್ಷ ಪೋರ್ಚುಗೀಸ್ ಪ್ರಧಾನಿಗೆ ಪತ್ರ ಬರೆದಿದ್ದಕ್ಕೆ ಗೋವಾ ಕ್ರೈಸ್ತರು ಕ್ಷಮೆಯಾಚಿಸಿದ್ದಾರೆ. ಅಂಜುದೀವ್ ದ್ವೀಪದಲ್ಲಿ ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣವಾಗಿದ್ದ ಅವರ್ ಲೇಡಿ ಆಫ್ ಬ್ರೋಥಾಸ್ ಚರ್ಚ್ ಇದ್ದು, ಪ್ರತಿವರ್ಷ ಫೆಬ್ರುವರಿ 2ರಂದು ಗೋವಾ ಕ್ರಿಶ್ಚಿಯನ್ನರು ಹಾಗೂ ಸ್ಥಳೀಯರು ಸೇರಿ ಅಲ್ಲಿ ಫೆಸ್ಟ್ ಆಚರಿಸುತ್ತಿದ್ದರು. ಆದರೆ ನೌಕಾನೆಲೆ ಬಂದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಧಾರ್ಮಿಕ ಆಚರಣೆಗೆ ನಿರ್ಬಂಧಿಸಲಾಗಿದೆ.
ವರ್ಷಕ್ಕೊಮ್ಮೆ ನೌಕಾ ದಿನದಂದು ನೌಕಾನೆಲೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಲಾಗುತ್ತದೆ. ಅದರಂತೆ ಫೆಸ್ಟ್ ಸಂದರ್ಭದಲ್ಲಿ ತಮಗೆ ದ್ವೀಪಕ್ಕೆ ಆಗಮಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಗೋವಾ ಕಾನಕೋಣದ ನಿವಾಸಿ ನೇಟಿವಿಡೆ ಡೇ ಸಾ (78) ಎನ್ನುವವರು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಮಂತ್ರಿ ಕಚೇರಿ, ಸಮೀಕ್ಷೆಯ ಸಂಖ್ಯೆ ಮತ್ತು ದ್ವೀಪದ ಇತರ ವಿವರಗಳನ್ನು ಕೋರಿದೆ. ಆದರೆ ಇದಕ್ಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಅಂಜುದೀವ್ ದ್ವೀಪಕ್ಕೆ ಪ್ರವೇಶ ನೀಡಲು ಗೋವನ್ನರ ಒತ್ತಾಯ
ಪೋರ್ಚುಗೀಸ್ ಪ್ರಧಾನಮಂತ್ರಿ ಕಚೇರಿಗೆ ಪತ್ರ
ಈ ಆಶ್ವಾಸನೆಯಿಂದ ತೃಪ್ತರಾಗದ ನೇಟಿವಿಡೆ ಡೇ ಸಾ, ಪೋರ್ಚುಗೀಸ್ ಪ್ರಧಾನಮಂತ್ರಿ ಕಚೇರಿಗೆ ಪತ್ರವೊಂದನ್ನು ಬರೆದು ಈ ವಿಚಾರವಾಗಿ ಮಧ್ಯಪ್ರವೇಶಿಸಲು ಕೋರಿದ್ದರು. ಅಲ್ಲಿಂದ ಪ್ರತಿಕ್ರಿಯೆ ಕೂಡ ಪಡೆದಿದ್ದರು. ಈ ಸಮಸ್ಯೆಯನ್ನು ಹೇಗೆ ನೋಡಬೇಕು ಎಂಬುದರ ಕುರಿತು ಅಧ್ಯಯನ ಮಾಡುವುದಾಗಿಯೂ ಪೋರ್ಚುಗೀಸ್ ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ನೀಡಿದ್ದರು. ಈ ವರ್ಷ ಕೂಡ ಅಂಜುದೀವ್ ದ್ವೀಪಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಗೋವನ್ನರಿಗೆ "ಭಾರತದ ನೆಲದಲ್ಲಿನ ಪ್ರಕರಣದಲ್ಲಿ ಪೋರ್ಚುಗೀಸ್ ಪ್ರಧಾನಿಗೆ ಆಹ್ವಾನಿಸಿರುವುದು ಎಷ್ಟು ಸರಿ?' ಎಂದು ಪತ್ರಕರ್ತರು ಪ್ರಶ್ನಿಸಿದರು.
ಅಂಜುದೀವ್ ದ್ವೀಪಕ್ಕೆ ಪ್ರವೇಶ ನೀಡುವಂತೆ ಒತ್ತಾಯ
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೋವನ್ನರು, ಪೋರ್ಚುಗೀಸ್ ಪ್ರಧಾನಿ ಆಂಟಾನಿಯೋ ಕೋಸ್ಟಾ ಮೂಲತಃ ಗೋವಾದವರು. ಅವರ ಮೂಲಕವಾದರೂ ಸಹಾಯ ಸಿಗಬಹುದು ಎಂಬ ಏಕೈಕ ಉದ್ದೇಶದಿಂದ ಅವರಿಗೆ ಪತ್ರ ಬರೆಯಲಾಗಿತ್ತು. ದೇಶದ ಆಂತರಿಕ ವಿಚಾರದಲ್ಲಿ ಬೇರೆ ದೇಶದ ಸಹಾಯ ಕೇಳಿದ್ದು ತಪ್ಪೆಂದು ಅರಿವಾಗಿದೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಕ್ಷಮೆಯಾಚಿಸಿದ್ದಾರೆ. ಇನ್ನು, ಪೋರ್ಚುಗೀಸ್ ಪ್ರಧಾನಿಗೆ ಪತ್ರ ಬರೆದಿರುವುದಕ್ಕೆ ಹಾಗೂ ಅಂಜುದೀವ್ ದ್ವೀಪಕ್ಕೆ ಪ್ರವೇಶ ನೀಡುವಂತೆ ಗೋವಾ ಕ್ರೈಸ್ತರು ಒತ್ತಾಯಿಸುತ್ತಿರುವುದಕ್ಕೆ ಭಾರತೀಯ ಜನತಾ ಪಾರ್ಟಿ ಕೂಡ ಖಂಡನೆ ವ್ಯಕ್ತಪಡಿಸಿದೆ.
ಕ್ರೈಸ್ತರು, ಹಿಂದೂಗಳಿಗೆ ಹಿಂಸೆ
ಈ ಬಗ್ಗೆ ಮಾತನಾಡಿರುವ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ, ಗೋವಾದಲ್ಲಿ ಪೋರ್ಚುಗೀಸರು ಕ್ರೈಸ್ತರು, ಹಿಂದೂಗಳಿಗೆ ಹಿಂಸೆ ನೀಡಿದ್ದುದನ್ನು ಇತಿಹಾಸ ಹೇಳುತ್ತದೆ. ಅನ್ಯ ಧರ್ಮೀಯರ ಧಾರ್ಮಿಕ ಸ್ಥಳಗಳನ್ನು ಧ್ವಂಸ ಮಾಡಿದ್ದರು. ಆದರೆ ಪೋರ್ಚುಗೀಸ್ ಪ್ರಧಾನಿಗೆ ಪತ್ರ ಬರೆಯುವ ಮೂಲಕ ಗೋವನ್ನರು ಮತ್ತೆ ಆ ಇತಿಹಾಸದ ಹಿಂಸೆ, ಕ್ರೌರ್ಯಗಳನ್ನು ವಾಪಸ್ಸು ಪಡೆಯಬೇಕೆಂದಿದ್ದಾರೆಯೇ? ಈ ನೆಲದಲ್ಲಿ ಪೋರ್ಚುಗೀಸ್ ಪ್ರಧಾನಿಗೆ ಆಹ್ವಾನ ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
Recommended Video
ಪತ್ರ ಬರೆದವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ
ಒಂದು ವೇಳೆ ಕ್ರೈಸ್ತರಿಗೆ ರಕ್ಷಣಾ ಇಲಾಖೆಗೆ ಒಳಪಡುವ ಅಂಜುದೀವ್ ಗೆ ಪ್ರವೇಶ ನೀಡುವುದಾದರೆ, ಸೀಬರ್ಡ್ ಗೆ ಒಳಪಡುವ ಹಿಂದೂ ದೇವಾಲಯಗಳಲ್ಲೂ ಪೂಜೆಗೆ ಅವಕಾಶ ನೀಡಬೇಕು ಎಂದು ಅವರು ಕೋರಿದ್ದಾರೆ. ಭಾರತದ ಪ್ರಕರಣದಲ್ಲಿ ಪೋರ್ಚುಗೀಸ್ ಪ್ರಧಾನಿ ಮಧ್ಯಸ್ಥಿಕೆಗೆ ಪತ್ರ ಬರೆದಿರುವುದು ಕಾನೂನಾತ್ಮಕವಾಗಿಯೂ ತಪ್ಪು. ಪತ್ರ ಬರೆದವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿಕೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.