ಸೀಬರ್ಡ್ ನಿರಾಶ್ರಿತರ 32 ವರ್ಷಗಳ ನೋವಿಗೆ ನಾಳೆ ಮುಲಾಮು
ಕಾರವಾರ, ಫೆ.23: ಏಷ್ಯಾದ ಅತಿದೊಡ್ಡ ನೌಕಾನೆಲೆಯ ನಿರ್ಮಾಣದ ಸೀಬರ್ಡ್ ಯೋಜನೆಗಾಗಿ ತಮ್ಮ ಜಾಗಗಳನ್ನು ಬಿಟ್ಟುಕೊಟ್ಟು ನಿರಾಶ್ರಿತರಾಗಿದ್ದವರಿಗೆ ಸುಮಾರು 32 ವರ್ಷಗಳ ಬಳಿಕ ಪರಿಹಾರ ವಿತರಣೆ ಮಾಡಲು ಸ್ವತಃ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆ.24) ಉತ್ತರಕನ್ನಡ ಜಿಲ್ಲೆಯ ಕಾರವಾರಕ್ಕೆ ಆಗಮಿಸುತ್ತಿದ್ದಾರೆ.
ದೆಹಲಿಯಿಂದ ಗೋವಾಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಅವರು ಕಾರವಾರ ಆಗಮಿಸಲಿದ್ದಾರೆ. ಬಳಿಕ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ನಡೆಯುವ ಸೀಬರ್ಡ್ ನಿರಾಶ್ರಿತರ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, 60 ನಿರಾಶ್ರಿತರಿಗೆ ಪರಿಹಾರ ವಿತರಿಸಲಿದ್ದಾರೆ. 32 ವರ್ಷಗಳಿಂದ ನಿರಾಶ್ರಿತರಿಗೆ ಪರಿಹಾರ ವಿತರಣೆಯಾಗದೆ ನಿರಾಶ್ರಿತರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದರು. ಪರಿಹಾರದ ನಿರೀಕ್ಷೆಯಲ್ಲಿದ್ದ ಅನೇಕರು ಪರಿಹಾರ ಸಿಗುವ ಮುನ್ನವೇ ಮೃತಪಟ್ಟಿದ್ದರೂ ಕೂಡ.
ನಿರ್ಮಲಾ ಸೀತಾರಾಮನ್ ಡಿ.28 ರಂದು ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜತೆಗೆ 10 ನಿಮಿಷ ಸಭೆ ನಡೆಸಲು ಅನುಮತಿ ನೀಡಿದ್ದರು. ಆದರೆ, ಇಲ್ಲಿನ ಸಮಸ್ಯೆಗಳ ಬಗೆಗೆ ಜಿಲ್ಲಾಧಿಕಾರಿ ವಿವರಿಸಿದಾಗ ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ಬಿಟ್ಟು 45 ನಿಮಿಷಗಳ ಕಾಲ ಚರ್ಚಿಸಿದರು. ಕಾರವಾರದಿಂದ ದೆಹಲಿಗೆ ತಲುಪುತ್ತಿದ್ದಂತೆಯೇ, ಪರಿಹಾರ ಬಿಡುಗಡೆಗೆ ಕಾರ್ಯಾಚರಿಸುವ ಪುಣೆಯಲ್ಲಿದ್ದ ಡಿಫೆನ್ಸ್ ಎಸ್ಟೇಟ್ ಅಧಿಕಾರಿಯ ಕಚೇರಿಯನ್ನು ಬೆಂಗಳೂರಿಗೆ ತಕ್ಷಣ ಸ್ಥಳಾಂತರಿಸುವಂತೆ ಸೂಚಿಸಿದರು.
ಆ ಕಚೇರಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿದರು. ಪ್ರತಿ ತಿಂಗಳು ಜಿಲ್ಲಾಧಿಕಾರಿ ಜತೆಗೆ ಪ್ರಗತಿ ಪರಿಶೀಲನಾ ಸಭೆ ಮಾಡುವಂತೆ ಸೂಚಿಸಿದರು. ಮಾರ್ಚ್ ಅಂತ್ಯದ ಒಳಗೆ ಒಂದೂ ಪ್ರಕರಣವೂ ಪರಿಹಾರ ನೀಡಲು ಬಾಕಿ ಇರಬಾರದು. ಇಲ್ಲದಿದ್ದಲ್ಲಿ ನಿಮ್ಮ ಕಿಸೆಯಿಂದ ದಂಡ ಕಟ್ಟಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಅವರ ಆದೇಶದ ಮೇರೆಗೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ನಿರಾಶ್ರಿತರ ಪರಿಹಾರದ ಹಣವನ್ನು ಬಿಡುಗಡೆಗೊಳಿಸಿದ್ದಾರೆ.
ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ಇತರ ಕೆಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಹೆಚ್ಚುವರಿ ಭೂ ಪರಿಹಾರದ 1,200 ರಷ್ಟು ಪ್ರಕರಣಗಳಿಗೆ ಒಟ್ಟು 320 ಕೋಟಿ ರೂ.ನಷ್ಟು ಪರಿಹಾರ ಬಂದಿದ್ದು, ನ್ಯಾಯಾಲಯಗಳಿಗೆ ಜಮಾ ಮಾಡಲಾಗಿದೆ. ಹಂತ ಹಂತವಾಗಿ ನ್ಯಾಯಾಲಯದಿಂದ ವಿತರಣೆ ಮಾಡಲಾಗುತ್ತಿದೆ. ನ್ಯಾಯಾಲಯಗಳಲ್ಲಿ ತೀರ್ಪಿಗೆ ಬಾಕಿ ಉಳಿದ ಕೆಲವು ಪ್ರಕರಣಗಳಿಗೆ ಮಾತ್ರ ಹಣ ಬಿಡುಗಡೆ ಬಾಕಿ ಇದೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿದ್ದ 28(ಎ) ನ 1,200 ಪ್ರಕರಣಗಳಲ್ಲಿ 840 ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಿ ಡಿಫೆನ್ಸ್ ಎಸ್ಟೇಟ್ ಕಚೇರಿಗೆ ಕಳಿಸಲಾಗಿದೆ. ಉಳಿದವು ತಿರಸ್ಕೃತಗೊಂಡಿವೆ.
ಅದರಲ್ಲಿ 15 ಪ್ರಕರಣಗಳಿಗೆ 19 ಕೋಟಿ ಹಣ ಬಿಡುಗಡೆಯಾಗಿದ್ದು, 70 ಚೆಕ್ಗಳನ್ನು ನಿರಾಶ್ರಿತರ ಕುಟುಂಬಕ್ಕೆ ನೇರವಾಗಿ ನೀಡಲಾಗುತ್ತಿದೆ. ಸೀಬರ್ಡ್ ನೌಕಾ ಯೋಜನೆಯ ಹೆಚ್ಚುವರಿ ಪರಿಹಾರ ವಿತರಣೆಗೆ ಸುಪ್ರೀಂ ಕೋರ್ಟ್ ಆದೇಶದ ನಂತರವೂ ಕೆಳ ಹಂತದ ನ್ಯಾಯಾಲಯಗಳಲ್ಲಿದ್ದ ಸಾವಿರಾರು ಪ್ರಕರಣಗಳಿಗೆ ಪರಿಹಾರ ದೊರಕುವುದು ವಿಳಂಬವಾಗಿತ್ತು. ಆಗಿನ ರಕ್ಷಣಾ ಸಚಿವರಾಗಿದ್ದ ಮನೋಹರ ಪರಿಕ್ಕರ್, ರಕ್ಷಣಾ ಇಲಾಖೆಗೆ ಸೂಚನೆ ನೀಡಿ, ಕೆಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಸೀಬರ್ಡ್ ನೌಕಾನೆಲೆ ಹೆಚ್ಚುವರಿ ಭೂ ಪರಿಹಾರದ ಪ್ರಕರಣಗಳಿಗೆ ಮೇಲ್ಮನವಿ ಮಾಡದಂತೆ ಆದೇಶಿಸಿದ್ದರು.
ಆದರೂ ಪರಿಹಾರ ಪ್ರಕ್ರಿಯೆ ವಿಳಂಬವಾಗಿತ್ತು. ಅಲ್ಲದೆ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿದ್ದ 28ಎ ಪ್ರಕರಣಗಳಿಗೆ ಪರಿಹಾರ ನೀಡುವ ಬಗೆಗೆ ರಕ್ಷಣಾ ಇಲಾಖೆ ನಿರ್ಣಯ ಕೈಗೊಂಡಿರಲಿಲ್ಲ. ಇದೀಗ ಮುತುವರ್ಜಿ ವಹಿಸಿ, 32 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಹಾರದ ಹಣ ವಿತರಣೆಗೆ ಸ್ವತಃ ರಕ್ಷಣಾ ಸಚಿವರೇ ನಿರಾಶ್ರಿತರ ಬಳಿ ಬರುತ್ತಿರುವುದು ಐತಿಹಾಸಿಕವಾಗಿದೆ.
ಸುಮಾರು 32 ವರ್ಷಗಳ ಹಿಂದೆ ರಕ್ಷ ಣಾ ಇಲಾಖೆಯು ಸೀಬರ್ಡ್ ಯೋಜನೆಗೆ ಕಾರವಾರ- ಅಂಕೋಲಾ ಭಾಗದ ನೂರಾರು ಕುಟುಂಬಗಳ ಜಮೀನನ್ನು ವಶಪಡಿಸಿಕೊಂಡಿತ್ತು. ಆದರೆ ಭೂ ಸಂತ್ರಸ್ಥರಿಗೆ ನೀಡಬೇಕಾದ ಸೂಕ್ತ ಪರಿಹಾರವನ್ನು ನೀಡದೇ ನಿರಾಶ್ರಿತರಿಗೆ ರಕ್ಷಣಾ ಇಲಾಖೆ ಸತಾಯಿಸುತ್ತಿತ್ತು. ಪರಿಹಾರವೂ ಇಲ್ಲದೇ, ಭೂಮಿಯೂ ಇಲ್ಲದೇ ನಿರಾಶ್ರಿತರು ಸಂಕಷ್ಟ ಅನುಭವಿಸುವಂತಾಗಿತ್ತು. ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಭೂಮಿಯನ್ನು ಮರಳಿಸಿ ಎಂದು ಅನೇಕ ಬಾರಿ ನಿರಾಶ್ರಿತರು ಉಗ್ರ ಹೋರಾಟ ಕೂಡ ನಡೆಸಿದ್ದರು.