ರೆಡ್ಡಿ ಸಹೋದರರಿಗೆ ಟಿಕೆಟ್, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಭಟ್ಕಳ, ಏಪ್ರಿಲ್ 27: ಬಳ್ಳಾರಿಯ ರೆಡ್ಡಿ ಸಹೋದರರಿಗೆ ಟಿಕೆಟ್ ನೀಡಿರುವ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಭಟ್ಕಳದಲ್ಲಿ ಮಾತನಾಡಿದ ಅವರು ಸಿಬಿಐ ಹೆಸರನ್ನು ಮೋದಿ ಸೆಂಟ್ರಲ್ ಬ್ಯೂರೋ ಆಫ್ ಇಲ್ಲೀಗಲ್ ಮೈನಿಂಗ್ (ಕೇಂದ್ರ ಅಕ್ರಮ ಗಣಿಗಾರಿಗೆ ದಳ) ಎಂದು ಬದಲಾಯಿಸಿದ್ದಾರೆ ಎಂದು ಕಿಡಿಕಾರಿದರು.
ಭಟ್ಕಳದಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ದ್ವಂದ್ವ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ತಾವು ಭ್ರಷ್ಟಾಚಾರದ ವಿರುದ್ಧ ಇದ್ದೇವೆ ಎನ್ನುತ್ತಾರೆ. ಇನ್ನೊಂದು ಕಡೆ ಜೈಲಿಗೆ ಹೋಗಿ ಬಂದವರು (ಬಿ.ಎಸ್. ಯಡಿಯೂರಪ್ಪ) ಅವರ ಹಿಂದೆಯೇ ನಿಂತಿರುತ್ತಾರೆ. ರೆಡ್ಡಿ ಸಹೋದರರ ವಿಚಾರವನ್ನೇ ತೆಗೆದುಕೊಳ್ಳಿ, ಅವರಿಗೆ ಪ್ರಧಾನಿ ಮಂತ್ರಿಗಳು ಕ್ಲೀನ್ ಚಿಟ್ ನೀಡಿದ್ದಾರೆ, ಜೊತೆಗೆ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಲು 8 ಜನರಿಗೆ ಟಿಕೆಟ್ ನೀಡಲಾಗಿದೆ. ನೀರವ್ ಮೋದಿ ಸೇರಿ ಹಲವರು ಸಾರ್ವಜನಿಕರ ಹಣವನ್ನು ಲೂಟಿ ಹೊಡೆದು ದೇಶದಿಂದ ಪರಾರಿಯಾಗಿದ್ದಾರೆ. ಆದರೆ ಮೋದಿ ಇದರ ಬಗ್ಗೆ ಒಂದು ಮಾತನ್ನೂ ಆಡುವುದಿಲ್ಲ," ಎಂದು ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ರೈತರ ಸಾಲ ಮನ್ನಾ, ಮಹಿಳೆಯರ ಮೇಲೆ ದೇಶದಲ್ಲಿ ಹೆಚ್ಚುತ್ತಿರುವ ದೌರ್ಜನ್ಯದ ವಿಚಾರದಲ್ಲಿ ಮೋದಿಯ ಮೌನವನ್ನು ಇದೇ ಸಂದರ್ಭದಲ್ಲಿ ರಾಹುಲ್ ಪ್ರಶ್ನಿಸಿದ್ದಾರೆ.
"ರೈತರ ಸಾಲ ಮನ್ನಾಕ್ಕಾಗಿ ಮನವಿ ಸಲ್ಲಿಸಲು ಸಚಿವರ ನಿಯೋಗದೊಂದಿಗೆ ನಾನು ಅವರನ್ನು (ಪ್ರಧಾನಿ ಮೋದಿ) ಸಂಪರ್ಕಿಸಿದೆ. ಆದರೆ ಈ ವಿಷಯದ ಬಗ್ಗೆ ಅವರು ಒಂದೇ ಒಂದು ಹೇಳಿಕೆಯನ್ನೂ ನೀಡಲಿಲ್ಲ. ಹಲವು ರಾಜ್ಯಗಳಲ್ಲಿ ಈ ರೀತಿ ಸಾಲ ಮನ್ನಾ ಮಾಡಿದ್ದರೂ ಅವರು ಈ ಬಗ್ಗೆ ಮಾತನಾಡಲಿಲ್ಲ. ಉತ್ತರ ಪ್ರದೇಶದಲ್ಲಿ, ತನ್ನ ಪಕ್ಷದ ವ್ಯಕ್ತಿ ಒಬ್ಬ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದಾನೆ ಈ ಬಗ್ಗೆಯೂ ಪ್ರಧಾನಿ ಒಂದು ಪದವನ್ನೂ ಹೇಳಲಿಲ್ಲ. ಸತ್ಯ ಏನೆಂದರೆ ಅವರು ಪ್ರಶ್ನಿಸಲಾರರು ಮತ್ತು ಯಾವತ್ತೂ ಮೌನವಾಗಿದ್ದಾರೆ," ಎಂದು ಅವರು ಹೇಳಿದರು.












Click it and Unblock the Notifications