ವಿಶೇಷ ವರದಿ; ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಅನುಷ್ಠಾನವಾಗಿದ್ದು?

ಕಾರವಾರ, ಜನವರಿ 20: 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಯಾರಿ ನಡೆಸುತ್ತಿದ್ದಾರೆ. ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗಲಿದೆ. ಕಳೆದ ಬಾರಿ ಅವರು ಮಂಡಿಸಿದ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದರು. ಉತ್ತರ ಕನ್ನಡ ಜಿಲ್ಲೆಗೆ ಅವರು ಘೋಷಣೆ ಮಾಡಿದ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆಯೇ?.

ಮೀನುಗಾರರಿಗೆ ಹಾಗೂ ಮೀನುಗಾರಿಕೆಗೆ ಉತ್ತೇಜನ ನೀಡಲು ಕಳೆದ ಸಾಲಿನ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿತ್ತು. ಆದರೆ, ಈ ಪೈಕಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು ಕೆಲವೇ ಕೆಲವು ಮಾತ್ರ. ಕಳೆದ ಸಾಲಿನಲ್ಲಿ ಘೋಷಣೆಯಾಗಿದ್ದ 'ಸಾಗರ ಮಿತ್ರ' ಯೋಜನೆ ಜಿಲ್ಲೆಯಲ್ಲಿ ಇನ್ನೂ ಪರಿಚಯವೇ ಆಗಿಲ್ಲ.

'ಮತ್ಸ್ಯ ಸಂಪದ' ಯೋಜನೆಯನ್ನು ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ಎಂಫೆಡಾದಂಥ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮೀನುಗಾರರಿಗೆ ತರಬೇತಿಗಳನ್ನು ನೀಡಲಾಗಿದೆ. ಶಿರಸಿ, ಮುಂಡಗೋಡ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಮೀನು ಕೃಷಿಗೆ ಪ್ರೋತ್ಸಾಹ ನೀಡಲಾಗಿದ್ದು, ಸೀಗಡಿ ಸೇರಿದಂತೆ ವಿವಿಧ ಜಾತಿಯ ಮೀನುಗಳನ್ನು ಬೆಳೆಸುವ ಮೂಲಕ ಮೀನು ಕೃಷಿಕರ ಜೊತೆಗೆ ಮೀನುಗಾರಿಕಾ ಇಲಾಖೆಯ ಆದಾಯ ಕೂಡ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಮೀನು ಮರಿ ಪಾಲನಾ ಕೇಂದ್ರ ಪ್ರಾರಂಭ

ಮೀನು ಮರಿ ಪಾಲನಾ ಕೇಂದ್ರ ಪ್ರಾರಂಭ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮುಂಡಗೋಡ ತಾಲೂಕಿನ ಪಾಳಾದ ಕೂಡಂಬಿ ಭದ್ರಾಪುರ ಗ್ರಾಮದಲ್ಲಿ ನಂದನವನ ಹೆಸರಿನ ನೋಂದಾಯಿತ ಖಾಸಗಿ ಮೀನು ಮರಿ ಪಾಲನಾ ಕೇಂದ್ರ ಪ್ರಾರಂಭಿಸಲಾಗಿದೆ. ಮೊದಲ ಹಂತವಾಗಿ ಸುಮಾರು 50 ಸಾವಿರ ಗೌರಿ ತಳಿಯ ಬಲಿತ ಮೀನು ಮರಿಗಳನ್ನು ಮುಂಡಗೋಡ ತಾಲೂಕಿನ ಧರ್ಮಾ ಜಲಾಶಕ್ಕೆ ಬಿಡಲಾಗಿದೆ.

ಈ ಮೊದಲು ಮೀನು ಮರಿಗಳನ್ನು ಮೀನುಗಾರಿಕೆ ಇಲಾಖೆ ಸೇರಿದಂತೆ ಶಿರಸಿ, ಸಿದ್ದಾಪುರ ಮತ್ತು ಮುಂಡಗೋಡ ಭಾಗದ ಆಸಕ್ತ ಮೀನುಗಾರರು ಶಿವಮೊಗ್ಗ, ಇಲ್ಲವೇ ಭದ್ರಾವತಿಗೆ ಹೋಗಿ ತರುತ್ತಿದ್ದರು. ಆದರೆ, ಮೀನುಮರಿ ಪಾಲನಾ ಕೇಂದ್ರ ಜಿಲ್ಲೆಯಲ್ಲಿಯೇ ಆರಂಭವಾಗಿರುವುದು ದೂರದ ಊರುಗಳಿಗೆ ಹೋಗದೇ, ಹತ್ತಿರದಲ್ಲಿಯೇ ಖರೀದಿಸುವ ವ್ಯವಸ್ಥೆಯಾಗಿದೆ.

ಉಡಾನ್ ನಲ್ಲಿ ವಿಮಾನ ನಿಲ್ದಾಣ

ಉಡಾನ್ ನಲ್ಲಿ ವಿಮಾನ ನಿಲ್ದಾಣ

'ಉಡಾನ್' ಯೋಜನೆ ಹಳೆಯದ್ದಾದರೂ ಕಳೆದ ಸಾಲಿನ ಬಜೆಟ್ ನಲ್ಲಿ ಮರು ಪ್ರಸ್ತಾವಿಸಿ, ಕಾರವಾರದಲ್ಲಿ ‌ನಾಗರಿಕ ವಿಮಾನ ನಿಲ್ದಾಣ ಸ್ಥಾಪಿಸಲು ಘೋಷಣೆ ಮಾಡಲಾಗಿತ್ತು. ಯೋಜನೆ ಆರಂಭವಾದಾಗಿನಿಂದ, ಅಂದರೆ 2017ರಿಂದಲೂ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಜಾಗ ಹಾಗೂ ಅನುದಾನದ ಕೊರತೆ ಎದುರಾಗಿತ್ತು. ಆದರೆ, ‌ಕಳೆದ ಸಾಲಿನಲ್ಲಿ ಮರು ಘೋಷಣೆಯಾದ ಬಳಿಕ ವಿಮಾನ ನಿಲ್ದಾಣ ಸ್ಥಾಪನೆಯ ಹೊಣೆ ರಕ್ಷಣಾ ಇಲಾಖೆಗೆ ವಹಿಸಲಾಗಿದೆ. ಅಂದರೆ, ಕಾರವಾರದ ಅರಗಾದಲ್ಲಿರುವ ಸೀಬರ್ಡ್ ನೌಕಾನೆಲೆಗೆ ಹೊಂದಿಕೊಂಡು ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.

ಹಣ ಬಿಡುಗಡೆಯಾಗಿದೆ

ಹಣ ಬಿಡುಗಡೆಯಾಗಿದೆ

ಒಟ್ಟು 93.29 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಮೊದಲ ಕಂತಾಗಿ ಸರ್ಕಾರ 7.88 ಕೋಟಿ ಬಿಡುಗಡೆ ಮಾಡಿದೆ. ಬೇಲೆಕೇರಿ ಹೋಬಳಿಯ ಅಲಗೇರಿ, ಬೇಲೆಕೇರಿ ಹಾಗೂ ಭಾವಿಕೇರಿ ಗ್ರಾಮದ ಒಟ್ಟೂ 93 ಎಕರೆ 29 ಗುಂಟೆ ಹಾಗೂ 5 ಆಣೆ ಕ್ಷೇತ್ರ ಸ್ವಾಧೀನಪಡಿಸಿಕೊಳ್ಳಲು ಹಣವನ್ನು ಸರ್ಕಾರ ಕೆಎಸ್‌ಐಐಡಿಸಿ ನಿಗಮದ ಮುಖ್ಯ ಹಣಕಾಸು ಹಾಗೂ ಲೆಕ್ಕಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರ ಈಗಾಗಲೇ ವಿಮಾನ ನಿಲ್ದಾಣಕ್ಕೆ ಸಮ್ಮತಿ ಸೂಚಿಸಿದೆ. ಈ ನಡುವೆ ವಿಮಾನ ನಿಲ್ದಾಣಕ್ಕೆ ಭೂಮಿ ಕೊಡುವುದಿಲ್ಲ ಎಂಬ ಕೂಗು ಸ್ಥಳೀಯರಿಂದ ಎದ್ದಿದ್ದು, ಈಗಾಗಲೇ ನಡೆದಿರುವ ಅಹವಾಲು ಸಭೆಯಲ್ಲಿ ಕೂಡ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಮುಂದೇನು? ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕಿದೆ.

ಯೋಜನೆಗಳ ಅನುಷ್ಠಾನಕ್ಕೆ ಕೋವಿಡ್ ಹೊಡೆತ

ಯೋಜನೆಗಳ ಅನುಷ್ಠಾನಕ್ಕೆ ಕೋವಿಡ್ ಹೊಡೆತ

ಫೆಬ್ರವರಿಯಲ್ಲಿ ಬಜೆಟ್ ಮಂಡನೆಯಾಗಿ ಹಲವು ಯೋಜನೆಗಳು ಘೋಷಣೆಯಾಯಿತಾದರೂ, ಮಾರ್ಚ್‌ ತಿಂಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡು ಹಲವು ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಯಿತು.

'ಮತ್ಸ್ಯ ಸಂಪದ'ದ ಅಡಿಯಲ್ಲಿ ಮೀನಿನ ರಫ್ತಿಗೆ ಹೆಚ್ಚು ಒತ್ತು ನೀಡಲು ತಿಳಿಸಲಾಗಿತ್ತು. ಆದರೆ ಕೋವಿಡ್ ನಿಂದಾಗಿ ಮೀನುಗಾರಿಕೆಯೇ ನಡೆಯದೇ ಮೀನಿನ ವಹಿವಾಟಿನಲ್ಲಿ ಅಷ್ಟೇನು ಪ್ರಗತಿ ಕಂಡಿಲ್ಲ.

ಕೃಷಿಯಲ್ಲಿ ಸೋಲಾರ್ ಬಳಕೆಗೆ ನಿರಾಸಕ್ತಿ

ಕೃಷಿಯಲ್ಲಿ ಸೋಲಾರ್ ಬಳಕೆಗೆ ನಿರಾಸಕ್ತಿ

ಕೃಷಿ ಕ್ಷೇತ್ರದಲ್ಲಿ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ಸೋಲಾರ್ ಗ್ರಿಡ್ ಆಧಾರಿತ ಪಂಪ್ ಸೆಟ್ ಒದಗಿಸಲು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಸೋಲಾರ್ ಪಂಪ್ ಖರೀದಿಗೆ ಜಿಲ್ಲೆಯಲ್ಲಿ ಕೆಲವೇ ಕೆಲವು ರೈತರು ಅರ್ಜಿ ಸಲ್ಲಿಸಿದ್ದು, ಯಾರಿಗೂ ಮಂಜೂರಾಗಿಲ್ಲ. ಈ ಯೋಜನೆಯಲ್ಲಿ ಶೇ 25ರಷ್ಟು ಹಣವನ್ನು ರೈತರು ಭರಿಸಬೇಕಾಗಿದ್ದು, ಉಳಿದ ಪಾಲನ್ನು ಸರ್ಕಾರ ನೀಡಲಿದೆ. ಆದರೆ, ಲಕ್ಷಗಟ್ಟಲೆ ವೆಚ್ಚ ತಗಲುವ ಕಾರಣ ಹಾಗೂ ಸೋಲಾರ್ ಕುರಿತು ಹೆಚ್ಚು ತಿಳಿವಳಿಕೆ ಇನ್ನೂ ಅಷ್ಟಾಗಿ ರೈತರಲ್ಲಿ ಇರದ ಕಾರಣ ರೈತರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ.

Recommended Video

    ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada
    ಸದ್ದೇ ಇಲ್ಲದ ತೇಜಸ್ ರೈಲು ವಿಸ್ತರಣೆ

    ಸದ್ದೇ ಇಲ್ಲದ ತೇಜಸ್ ರೈಲು ವಿಸ್ತರಣೆ

    ಅತಿ ವೇಗದ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ತೇಜಸ್ ಎಕ್ಸ್‌ಪ್ರೆಸ್‌ ರೈಲನ್ನು ಹೆಚ್ಚು ಪ್ರವಾಸಿ ತಾಣಗಳಿಗೆ ಸಂಪರ್ಕಿಸಲಾಗುವುದು ಎಂದು ಕಳೆದ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಉತ್ತರ ಕನ್ನಡ ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದ್ದು, ಕೊಂಕಣ ರೈಲ್ವೆ ಮಾರ್ಗ ಈಗಾಗಲೇ ಹಲವು ಪ್ರವಾಸಿ ತಾಣಗಳನ್ನು ಸಂಪರ್ಕಿಸುತ್ತಿವೆ. ತೇಜಸ್ ಎಕ್ಸ್‌ಪ್ರೆಸ್‌ ಮುಂಬೈನಿಂದ ಗೋವಾದವರೆಗೆ ಚಲಿಸುತ್ತಿದ್ದು, ಅದನ್ನು ಜಿಲ್ಲೆಗೂ ವಿಸ್ತರಿಸುವ ನಿರೀಕ್ಷೆ ವ್ಯಕ್ತಪಡಿಸಲಾಗಿತ್ತು. ಆದರೆ, ಅನುಷ್ಠಾನಗೊಂಡಿಲ್ಲ.

    ಈಗಾಗಲೇ ಜಿಲ್ಲೆಯ ವ್ಯಾಪ್ತಿಯಲ್ಲಿನ ಕೊಂಕಣ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ 50ಕ್ಕಿಂತಲೂ ಹೆಚ್ಚು ಕಾಮಗಾರಿ ನಡೆದಿದೆ. ಕೆಲವೇ ತಿಂಗಳುಗಳಲ್ಲಿ ಈ ಕಾಮಗಾರಿ ಕೂಡ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+