ಭಟ್ಕಳದಲ್ಲಿ ಬಾಂಬ್ ಸ್ಪೋಟ ಮಾಡುವುದಾಗಿ ಬೆದರಿಕೆ: ಆರೋಪಿಯನ್ನ ಬಂಧಿಸಿದ ಚೆನ್ನೈ ಪೊಲೀಸರು
ಕಾರವಾರ, ಜನವರಿ, 05: ಹೊಸ ವರ್ಷಾಚರಣೆ ವೇಳೆ ಭಟ್ಕಳದಲ್ಲಿ ಸ್ಫೋಟ ಮಾಡುವುದಾಗಿ ಪೊಲೀಸ್ ಠಾಣೆಗೆ ಬೆದರಿಕೆ ಪತ್ರ ಬರೆದಿರುವ ವಿಚಾರವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಚೆನ್ನೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸ್ಫೋಟ ಮಾಡುವುದಾಗಿ "ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 & ಹ್ಯಾಪಿ ನ್ಯೂ ಇಯರ್ 2023" ಎಂದು ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬರೆದ ಪೋಸ್ಟ್ ಕಾರ್ಡ್ವೊಂದು ಭಟ್ಕಳ ಠಾಣೆಗೆ ತಲುಪಿತ್ತು. ಸೂಕ್ಷ್ಮ ವಿಷಯವಾಗಿದ್ದರಿಂದ ಬಹಿರಂಗಪಡಿಸದೇ ಪೊಲೀಸರು ತನಿಖೆ ನಡೆಸಿದ್ದರು. ಇನ್ನು ಈ ಬಗ್ಗೆ ಚೆನ್ನೈ ಪೊಲೀಸರನ್ನು ವಿಚಾರಿಸಿದಾಗ ಅಲ್ಲಿಯೂ ಇಂತಹುದೇ ಬೆದರಿಕೆ ಪತ್ರ ಬಂದಿರುವುದು ಬೆಳಕಿಗೆ ಬಂದಿದೆ. ಲ್ಯಾಪ್ಟಾಪ್ ಕಳ್ಳತನ ಮಾಡಿದ ಆರೋಪಿಯೋರ್ವ ಅದನ್ನು ಅಂಗಡಿಗೆ ಮಾರಲು ಮುಂದಾಗಿದ್ದ. ಆತ ಸಿಕ್ಕಿಬಿದ್ದಾಗ ಕಳ್ಳತನದ ವಿಷಯ ಮುಚ್ಚಿಡಲು ಈ ರಿತಿ ಹುಸಿ ಬೆದರಿಕೆ ಪತ್ರ ಬರೆದಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ.
ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಕಾರವಾರ ಸರ್ಕಾರಿ ಕಚೇರಿಗಳು
ಭಟ್ಕಳ ಸ್ಫೋಟಿಸುವ ಬೆದರಿಕೆ, ಆರೋಪಿ ಅಂದರ್
ಲ್ಯಾಪ್ಟಾಪ್ ಮಾರಾಟ ಮಾಡಲು ತೆರಳಿದ್ದ ಅಂಗಡಿ ಮಾಲೀಕನ ನಂಬರ್ ಹಾಕಿ ಪತ್ರ ಬರೆದಿರುವುದು ಬೆಳಕಿದೆ ಬಂದಿತ್ತು. ಆಗ ಆ ಪತ್ರವನ್ನು ಆಧರಿಸಿ ತನಿಖೆ ನಡೆಸಿದ್ದ ಚೆನ್ನೈ ಪೊಲೀಸರು ಆರೋಪಿಯನ್ನು ಬಲೆಗೆ ಕೆಡವಿದ್ದಾರೆ. ಹೊಸಪೇಟೆ ಮೂಲದ ಹನುಮಂತಪ್ಪ ಹುಸಿ ಬೆದರಿಕೆ ಪತ್ರ ಬರೆದಿರುವ ಆರೋಪಿಯಾಗಿದ್ದಾನೆ. ಮಂಗಳೂರಿನ ಸುಬ್ರಹ್ಮಣ್ಯದಿಂದ ಪತ್ರವನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದ್ದು, ಇದೀಗ ಕಳ್ಳನನ್ನು ಬಾಡಿ ವಾರಂಟ್ ಮೇಲೆ ಭಟ್ಕಳಕ್ಕೆ ತರಲು ಪೊಲೀಸರು ತಯಾರಿ ನಡೆಸಿದ್ದಾರೆ.
ಸೂಕ್ತ ಭದ್ರತೆ ಕಲ್ಪಿಸುವಂತೆ ಮನವಿ
ಇತ್ತೀಚೆಗಷ್ಟೇ ಉಗ್ರರ ಟಾರ್ಗೆಟ್ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಎನ್ನುವುದು ಗೊತ್ತಾಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು. ಅತೀ ಹೆಚ್ಚು ಭಕ್ತರು ಆಗಮಿಸುವ ಕದ್ರಿ ಕ್ಷೇತ್ರದಲ್ಲಿ ಭಕ್ತರಿಗೆ ರಕ್ಷಣೆ ಕೊಡುವಂತೆ ದೇವಸ್ಥಾನದ ಆಡಳಿತ ಸಮಿತಿ ಪೊಲೀಸರ ಮೊರೆ ಹೋಗಿತ್ತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದು ಭದ್ರತೆಯನ್ನು ಕಲ್ಪಿಸಲಾಗಿತ್ತು. ಮಂಗಳೂರಿನ ನಾಗುರಿಯಲ್ಲಿ ನಡೆದ ಬಾಂಬ್ ಸ್ಪೋಟ ಕದ್ರಿ ಮಂಜುನಾಥ ದೇವಸ್ಥಾನದ ಟಾರ್ಗೆಟ್ ಎನ್ನುವುದು ಈಗ ಬೆಳಕಿಗೆ ಬಂದಿತ್ತು. ಐಆರ್ಸಿ ಎನ್ನುವ ಉಗ್ರ ಸಂಘಟನೆಯ ಹೆಸರಿನಲ್ಲಿ ಡಾರ್ಕ್ ವೆಬ್ ಮೂಲಕ ಹರಿದಾಡಿದ ಪೋಸ್ಟರ್ನಲ್ಲಿ ಈ ಆಘಾತಕಾರಿ ವಿಚಾರವನ್ನು ಬಂಹಿರಂಗಪಡಿಸಿದ್ದು, ಸ್ಪೋಟದ ರೂವಾರಿ ನಾವೇ ಎಂದು ಸಂಘಟನೆ ಹೇಳಿಕೊಂಡಿತ್ತು.
ಬಾಂಬ್ ಸ್ಫೋಟ ವಿಫಲವಾಗಿದ್ದರೂ ಮುಂದಿನ ದಿನದಲ್ಲಿ ನಮ್ಮ ಟಾರ್ಗೆಟ್ ಕಂಪ್ಲೀಟ್ ಮಾಡುತ್ತೇವೆ ಎಂದು ಹೇಳಿಕೊಂಡಿದ್ದರು. ಇದರಿಂದ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ಹೀಗಾಗಿ ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಭದ್ರತೆಯನ್ನು ಕೇಳಿತ್ತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪ್ರತಿನಿತ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಸೂಕ್ತ ಭದ್ರತೆ ಕಲ್ಪಿಸಲು ದೂರಿನಲ್ಲಿ ತಿಳಿಸಲಾಗಿತ್ತು.