10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬಂದ ದಿನಕರ ಶೆಟ್ಟಿ
ಕಾರವಾರ, ಮೇ 15 : ಹತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಕೇವಲ 20 ಮತಗಳ ಅಂತರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ದಿನಕರ ಶೆಟ್ಟಿ, ಈ ಬಾರಿ ಕುಮಟಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.
2013ರಲ್ಲಿ 420 ಮತಗಳಿಂದ ಕಾಂಗ್ರೆಸ್ನ ಶಾರದಾ ಶೆಟ್ಟಿ (36,756) ಎದುರು ಅವರು ಸೋತಿದ್ದರು. 2008ರಲ್ಲಿ ಜೆಡಿಎಸ್ ನಿಂದ ದಿನಕರ ಶೆಟ್ಟಿ ಕಾಂಗ್ರೆಸ್ ಶಾಸಕ ಮೋಹನ ಶೆಟ್ಟಿ ಅವರ ವಿರುದ್ಧ ಗೆದ್ದಾಗ ಅದು ರಾಜ್ಯದ ಮಟ್ಟಿಗೆ ದಾಖಲೆಯಾಗಿತ್ತು.
ಆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎನ್ನುವ ಕಾರಣದಿಂದ ಬಿಜೆಪಿ ಪರ ದಟ್ಟ ಅನುಕಂಪದ ಅಲೆಯಿತ್ತು. ಅದನ್ನು ಮೀರಿ ಶೆಟ್ಟಿ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.

ರಾಮಕೃಷ್ಣ ಹೆಗಡೆ ಅವರ ಆಪ್ತ ಶಿಷ್ಯರಾಗಿದ್ದ ಆರ್.ವಿ.ದೇಶಪಾಂಡೆ 1984ರ ಹೊತ್ತಿಗಾಗಲೇ ಶಾಸಕರಾಗಿದ್ದ ಸಮಯ. ಆಗ ಜಿಲ್ಲೆಯ ರಾಜಕೀಯದಲ್ಲಿ ಆರ್.ವಿ.ಡಿ.ಗೆ ಹಿಡಿತವಿತ್ತು. ಅಂದು ಪುರಸಭೆ ಸದಸ್ಯರಾಗಿ ಅನುಭವ ಹೊಂದಿದ್ದ ದಿನಕರ ಶೆಟ್ಟಿಯನ್ನು ಗುರುತಿಸಿದ ಆರ್.ವಿ.ಡಿ, 1994ರ ವಿಧಾನಸಭೆ ಚುನಾವಣೆಗೆ ಕುಮಟಾ-ಹೊನ್ನಾವರ ಕ್ಷೇತ್ರದಿಂದ ಸ್ಪರ್ಧಿಸಲು ಜನತಾ ದಳದಿಂದ ಟಿಕೆಟ್ ಕೊಡಿಸಿದ್ದರು.
ಜನತಾದಳದಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಎಚ್.ಡಿ.ದೇವೇಗೌಡ ಇಬ್ಬರೂ ಇದ್ದರು. ಆದರೂ ಬಿಜೆಪಿಯ ಡಾ.ಎಂ.ಪಿ.ಕರ್ಕಿ ಅವರ ವಿರುದ್ಧ ಅಂದು ದಿನಕರ ಶೆಟ್ಟಿ ಸೋತಿದ್ದರು. ಬಳಿಕ 1999ರಲ್ಲಿ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಲ್ಲಿ ಗುರುತಿಸಿಕೊಂಡ ಅವರು, ಹೆಗಡೆಯವರ ನಿಧನ ನಂತರ ಜನತಾ ಪರಿವಾರದಲ್ಲಿ ವಿಲೀನಗೊಂಡಿದ್ದರು.
2004ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ. ಇದರ ಬಳಿಕ 2008ರಲ್ಲಿ ಜೆಡಿಎಸ್ ನಿಂದ ಗೆದ್ದು, 2013ರಲ್ಲಿ ಸೋತ ಬಳಿಕ ಈ ಬಾರಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.












Click it and Unblock the Notifications