ಕಾರವಾರದಲ್ಲೊಂದು ಬಲೂನ್ ಜಾತ್ರೆ, ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ
ಕಾರವಾರ, ನವೆಂಬರ್, 11: ಸಾಮಾನ್ಯವಾಗಿ ಜಾತ್ರೆಗಳಲ್ಲಿ ನಡೆಯುವ ಆಚರಣೆಗಳು, ಸಂಪ್ರದಾಯಗಳು ಒಂದಕ್ಕೊಂದು ಭಿನ್ನವಾಗಿರುತ್ತವೆ. ಪಲ್ಲಕ್ಕಿ ಉತ್ಸವ, ತೇರು ಎಳೆಯುವುದು, ತುಲಾಭಾರ ಸೇವೆಯನ್ನು ಸಾಮಾನ್ಯವಾಗಿ ಎಲ್ಲ ಜಾತ್ರೆಗಳಲ್ಲೂ ನೋಡಬಹುದು. ಅಲ್ಲದೇ ಮಳೆ-ಬೆಳೆ ಚೆನ್ನಾಗಿ ಆಗಲಿ, ಊರಿಗೆ ಒಳ್ಳೆಯದಾಗಲಿ ಅಂತಾ ಕುರಿ, ಕೋಳಿ ಬಲಿ ಕೊಡುವುದನ್ನು ನೋಡಿದ್ದೇವೆ. ಆದರೆ ಕಾರವಾರ ತಾಲೂಕಿನ ಮಾಜಾಳಿಯ ಊರಿನ ಜನರು ತಮ್ಮ ಕಷ್ಟಗಳೆಲ್ಲಾ ದೂರ ಆಗಲಿ ಎಂದು ಬೃಹತ್ ಬಲೂನಿನೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ. ಬೃಹತ್ ಬಲೂನಿನಲ್ಲಿ ಬಿಸಿ ಹೊಗೆ ತುಂಬಿ ಆಕಾಶದೆತ್ತರಕ್ಕೆ ಹಾರಿಬಿಡುವ ಮೂಲಕ ಆಚರಣೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.
ಕಾರವಾರ ತಾಲೂಕಿನ ಮಾಜಾಳಿಯ ರಾಮನಾಥ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಪ್ರತಿವರ್ಷ ಕಾರ್ತಿಕ ಮಾಸದ ಎರಡನೇ ದಿನದಂದು ಈ ಜಾತ್ರೆ ನಡೆಯುತ್ತಿದ್ದು, ರಾಮನಾಥ ದೇವರ ಮೂರ್ತಿಯನ್ನು ಗುರುವಾರ ರಾತ್ರಿ ಸಾತೇರಿದೇವಿ ದೇವಸ್ಥಾನಕ್ಕೆ ತರಲಾಯಿತು. ನಂತರ ಶುಕ್ರವಾರ ಬೆಳಗ್ಗೆ ದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು. ಇನ್ನು ಕುಳಾವಿ ಜನರು ಪಲ್ಲಕ್ಕಿಯನ್ನು ಕಟ್ಟಿರುವ ತೋರಣಗಳ ಬಳಿ ಕೊಂಡೊಯ್ದಾಗ ಪಲ್ಲಕ್ಕಿಗೆ ಆರತಿ ಬೆಳಗಿ ಹೂವು ಹಣ್ಣು ನೀಡಿ ಪೂಜೆ ಸಲ್ಲಿಸಿದರು.
ಉತ್ತರಕನ್ನಡದಲ್ಲಿ ವಿಭಿನ್ನ ರೀತಿಯ ದೀಪಾವಳಿ ಆಚರಣೆ, ಇಲ್ಲಿದೆ ವಿವರ
ಕೊನೆಯ ದಿನದಂದು ಬಲೂನ್ ಹಾರಾಟ
ಇನ್ನು ಜಾತ್ರೆಯ ವಿಶೇಷ ಆಕರ್ಷಣೆ ಆಗಿದ್ದ ಬೃಹತ್ ಗಾತ್ರದ ವಾಫರ್ ಬಲೂನ್ ಅನ್ನು ಜಾತ್ರೆಯ ಕೊನೆಯ ದಿನ ಬಿಡಲಾಗುತ್ತದೆ. ಅದರಂತೆಯೇ ಗ್ರಾಮದ ಯುವಕರು ಒಟ್ಟಾಗಿ ಸೇರಿ ಬೃಹತ್ ಬಲೂನಿಗೆ ಕೆಳಗಡೆ ಬೆಂಕಿಯಿಂದ ಬಿಸಿ ಗಾಳಿ ತುಂಬಿ ಬಳಿಕ ಅದನ್ನು ಪಲ್ಲಕ್ಕಿ ಬಂದ ಸಂದರ್ಭದಲ್ಲಿ ಹಾರಿ ಬಿಟ್ಟಿದ್ದಾರೆ. ಸುಮಾರು 12 ಅಡಿ ಉದ್ದ ದೊಡ್ಡದಾದ ಬಲೂನನ್ನು ಹಾರಿ ಬಿಡುವ ಮೂಲಕ ತಲ ತಲಾಂತರದಿಂದ ನಡೆದುಕೊಂಡು ಬಂದಿರುವ ಆಚರಣೆಯನ್ನು ಭಕ್ತಿ ಭಾವದಿಂದ ಮುನ್ನಡೆಸಲಾಯಿತು. ಈ ದೃಶ್ಯ ನೋಡುವುದಕ್ಕಾಗಿಯೇ ನೂರಾರು ಸಂಖ್ಯೆಯಲ್ಲಿ ದೇವಸ್ಥಾನದ ಬಳಿ ಜನರು ಸೇರಿದ್ದರು. ಬಲೂನಿಗೆ ಗಾಳಿ ತುಂಬುವ ಸಂದರ್ಭದಲ್ಲಿ ಹರ ಹರ ಮಹಾದೇವ್ ಎಂದು ಜೈಕಾರ ಹಾಕುತ್ತಾ ದೃಶ್ಯವನ್ನು ಕಣ್ತುಂಬಿಕೊಂಡು ಜನರು ಸಂಭ್ರಮಿಸಿದರು.
ರಾಮನಾಥನ ಮೇಲೆ ಅಪಾರ ನಂಬಿಕೆ
ಗ್ರಾಮದಲ್ಲಿ ಯಾವುದೇ ತೊಂದರೆ ಇದ್ದರೂ ನಿವಾರಣೆ ಆಗಬೇಕು. ಮುಂದೆ ಕಷ್ಟಗಳು ಬಾರದಂತೆ ರಕ್ಷಣೆ ನೀಡಬೇಕು. ಇರುವ ರೋಗ ರುಜಿನಗಳೆಲ್ಲವೂ ಗ್ರಾಮದಿಂದ ದೂರಾಗಿ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಂಡು ಈ ಬೃಹತ್ ಬಲೂನನ್ನು ಮೇಲಕ್ಕೆ ಹಾರಿ ಬಿಡಲಾಗುತ್ತದೆ. ಇದರಿಂದ ಗ್ರಾಮಸ್ಥರ ನೋವು, ಕಷ್ಟ-ನಷ್ಟಗಳು ಹೊಗೆ ರೂಪದಲ್ಲಿ ಹಾರಿ ಹೋಗಿ ಗ್ರಾಮಕ್ಕೆ ಒಳ್ಳೆಯದಾಗತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಪ್ರತಿವರ್ಷವೂ ಜಾತ್ರೆಯಲ್ಲಿ ಬೃಹತ್ ಗಾತ್ರದ ಬಲೂನ್ ಹಾರಿಸಲಾಗುತ್ತದೆ. ಇದು ಹಲವು ತಾಸುಗಳ ಕಾಲ ಆಕಾಶದಲ್ಲಿದ್ದು, ಕೊನೆಗೆ ಸಮುದ್ರಕ್ಕೆ ಬೀಳುತ್ತದೆ. ಹೀಗೆ ಬಿದ್ದಲ್ಲಿ ಗ್ರಾಮದಲ್ಲಿನ ಸಮಸ್ಯೆಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಸ್ಥಳೀಯರಾದ ಶೀತಲ್ ಪವಾರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಎರಡು ದಿನಗಳ ಕಾಲ ದೇವರ ಉತ್ಸವವ
ಇನ್ನು ಬಲೂನ್ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ಅಕ್ಕಪಕ್ಕದ ಗ್ರಾಮಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಎರಡು ದಿನಗಳ ಕಾಲ ಊರಿನ ಜನರು ಶ್ರದ್ಧಾ ಭಕ್ತಿಯಿಂದ ದೇವರ ಉತ್ಸವವನ್ನು ಆಚರಿಸಿ ಗಮನ ಸೆಳೆದರು.
ಪಲ್ಲಕ್ಕಿಗೆ ಜನರಿಂದ ಆರತಿ, ಪೂಜೆ
ಈ ಹಿಂದೆಯೂ ಸಹ ಮಾಜಾಳಿಯ ರಾಮನಾಥ ದೇವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದ್ದರು. ಅದರಂತೆಯೇ ಈ ಬಾರಿಯೂ ಇಲ್ಲಿನ ರಾಮನಾಥ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ರಾಮನಾಥ ದೇವರ ಮೂರ್ತಿಯನ್ನು ತರಲಾಯಿತು. ದೇವರ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಕುಳಾವಿ ಜನರು ಕಟ್ಟಿರುವ ತೋರಣಗಳ ಬಳಿ ತೆರಳಿದ ಪಲ್ಲಕ್ಕಿಗೆ ಜನರು ಆರತಿ ಬೆಳಗಿ, ಹೂವು ಹಣ್ಣು ನೀಡಿ ಪೂಜೆ ಸಲ್ಲಿಸಿದರು. ಹೀಗೆ ಬಲೂನ್ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸಿರುವುದು ವಿಶೇಷವಾಗಿದೆ.