ಹಿರಿಯ ಕವಿ, ಲೇಖಕ ಬಿಎ ಸನದಿ ನಿಧನ
ಕಾರವಾರ, ಮಾರ್ಚ್ 31: ಹಿರಿಯ ಕವಿ ಡಾ. ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿಯವರು (86) ಭಾನುವಾರ ಬೆಳಗಿನ ಜಾವ ಕುಮಟಾದ ನಿವಾಸದಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಭಾನುವಾರ ಬೆಳಗಿನ ಜಾವ ಕುಮಟಾದ ಹೆರವಟ್ಟಾದಲ್ಲಿ ಅವರು ವಿಧಿವಶರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಳಗಾವಿಯ ಸಿಂದೋಳಿಯ ಮೂಲ ನಿವಾಸಕ್ಕೆ ಸಾಗಿಸಲಾಗುತ್ತಿದೆ. ಅಲ್ಲಿ ಸಂಜೆ 5ಕ್ಕೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಸಿಂಧೋಳಿ ಎಂಬಲ್ಲಿ 1933 ರ ಆಗಸ್ಟ್ 18 ರಂದು ಜನಿಸಿದ್ದ ಅವರು, ಕಥೆಗಾರ, ಅನುವಾದಕ, ವಿಮರ್ಶಕ, ನಾಟಕಕಾರ ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ಶಿಕ್ಷಕರೆನಿಸಿದ್ದರು. ರಾಜ್ಯ ಸರಕಾರದ ಹುದ್ದೆಗೆ ಆಯ್ಕೆಯಾಗಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ವಾರ್ತಾ ಇಲಾಖೆಗೆ ಸೇರಿ (ಬೆಂಗಳೂರು) ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಕಲಬುರ್ಗಿಗೆ ವರ್ಗಾವಣೆಗೊಂಡು ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ಅಹಮದಾಬಾದಿಗೆ ವರ್ಗವಾಗಿ ಪಶ್ಚಿಮ ವಲಯದ ಪ್ರದರ್ಶನಾಧಿಕಾರಿಯಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ, ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿ 1991ರಲ್ಲಿ ಅವರು ನಿವೃತ್ತರಾಗಿದ್ದರು.

ಸನದಿ ಅವರು 'ಆಶಾಕಿರಣ', 'ನೆಲಸಂಪಿಗೆ', 'ತಾಜಮಹಲು', 'ಹಿಮಗಿರಿಯ ಮುಡಿಯಲ್ಲಿ'ಯಿಂದ ಹಿಡಿದು 'ನಮ್ಮ ಪ್ರೀತಿ'ಯವರೆಗೆ 18 ಕವನ ಸಂಕಲನಗಳು ಮತ್ತು THIRSTY WORDS ಎಂಬ ಒಂದು ಇಂಗ್ಲಿಷ್ ಕವನ ಸಂಕಲನವನ್ನು ಪ್ರಕಟಿಸಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸನದಿಯವರ ವೈವಿಧ್ಯಮಯ ಸಾಹಿತ್ಯ ಕೊಡುಗೆಗಾಗಿ ರಾಜ್ಯ ಸರಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಭಾರತ ಸರಕಾರದ ಪುರಸ್ಕಾರ, ಕಾವ್ಯಾನಂದ ಪುರಸ್ಕಾರ ಮುಂತಾದ ಪ್ರಶಸ್ತಿಗಳಲ್ಲದೆ, ದೆಹಲಿಯ ಕರ್ನಾಟಕ ಸಂಘದಿಂದ ದೆಹಲಿ ಕನ್ನಡಿಗ ಪರವಾಗಿ 'ಶ್ರೇಷ್ಠ ಹೊರನಾಡ ಕನ್ನಡಿಗ' ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಎಸ್.ಎನ್.ಭೂಸನೂರಮಠ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಅವರಿಗೆ ದೊರೆತಿತ್ತು.












Click it and Unblock the Notifications