ಆನೆ ಬಂತೊಂದಾನೆ: ಹಳಿಯಾಳಕ್ಕೆ ದಾರಿ ತಪ್ಪಿ ಬಂದ ಕಾಡಾನೆ
ಹಳಿಯಾಳ, ಜೂನ್ 08: ಕಾಡಿನಲ್ಲಿರಬೇಕಾದ ಕಾಡಾನೆಯೊಂದು ಶುಕ್ರವಾರ ಬೆಳಗಿನ ಜಾವ ಹಳಿಯಾಳ ಪಟ್ಟಣಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿತು. ಹಾಗೆಯೇ ಭಯದ ವಾತಾವರಣ ಕೂಡ ಸೃಷ್ಟಿಸಿತು.
ಧಾರವಾಡ ರಸ್ತೆಯಿಂದ ಹಳಿಯಾಳ ಪಟ್ಟಣ ಪ್ರವೇಶ ಮಾಡಿರುವ ಒಂಟಿ ಸಲಗ ಸರ್ಕಾರಿ ಆಸ್ಪತ್ರೆ, ಅರಣ್ಯ ಇಲಾಖೆ ಎದುರಿನಿಂದಲೇ ರಾಜಾರೋಷವಾಗಿ ಸುತ್ತಾಡುತ್ತಾ ನಾನು ನಡೆದದ್ದೆ ದಾರಿ ಎಂದು ಸಾಗುತ್ತಾ ಶಿವಾಜಿ ವೃತ್ತ, ಪೋಲಿಸ್ ಠಾಣೆ ಎದುರುಗಡೆಯಿಂದ ದುರ್ಗಾದೇವಿ ದೇವಸ್ಥಾನ ಗೇಟ್ ಪ್ರವೇಶಿಸಿ ಅಲ್ಲಿಂದ ಹೊರ ಬಂದು ದುರ್ಗಾನಗರದಲ್ಲಿಯೇ ಹೆಚ್ಚು ಸಮಯ ಸುತ್ತಾಡಿತು.
ಅಲ್ಲಿಂದ ಮುಂದೆ ಆಲೊಳ್ಳಿ ರಸ್ತೆ ಮೂಲಕ ಸಾಗಿ ದೇಶಪಾಂಡೆ ಆಶ್ರಯ ನಗರದ ಪಕ್ಕದಿಂದ ಹಳಿಯಾಳದ ಹುಲ್ಲಟ್ಟಿ ಭಾಗದಲ್ಲಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಬಳಿಯ ಪರಿಸರದಲ್ಲಿ ಹೋಗಿ ನಿಂತು ಮುಂದೆ ಸಾಗಿತು.

ಜನರ ಅದೃಷ್ಟವೆಂದರೆ ಆನೆಗೆ ಮದವೇರದೆ ಇರುವುದು. ಯಾವುದೇ ಅವಘಡ ಸಂಭವಿಸಿಲ್ಲ. ಈ ಆನೆ ಬೆಳಗ್ಗೆ 6 ಗಂಟೆಗೆ ಹಳಿಯಾಳ ಪ್ರವೇಶ ಮಾಡಿದೆ ಎಂದು ಹೇಳಲಾಗಿದ್ದು, ಸುಮಾರು 30 ನಿಮಿಷಗಳ ಕಾಲ ದುರ್ಗಾನಗರದಲ್ಲಿಯೇ ಕಳೆದಿದೆ.
ಬಳಿಕ ಅರಣ್ಯ ಇಲಾಖೆಯವರು ಆನೆ ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸಿ ಆನೆ ಮತ್ತೆ ಪಟ್ಟಣ ಪ್ರವೇಶ ಮಾಡದಂತೆ ಹೊರಗಿನ ದಾರಿ ಹಿಡಿಯುವಂತೆ ಮಾಡಿದ್ದರಿಂದ ಅದು ಅಲೊಳ್ಳಿ ರಸ್ತೆ ಮಾರ್ಗವಾಗಿ ಕೃಷಿ ಜಮೀನಿನ ಸಾಗಿ ಕೆಸರೊಳ್ಳಿ ಬಳಿ ಬಂದು ನಿಂತಿದೆ.

ಅರಣ್ಯ ಇಲಾಖೆ ಅಧಿಕಾರಿಗಳಾದ ಎಸಿಎಫ್ ಸಂತೋಷ ಕೆಂಚಪ್ಪನವರ, ಆರ್ ಎಫ್ ಓ ಪ್ರಸನ್ನ ಸುಬೇದಾರ , ಪೋಲಿಸ್ ಇಲಾಖೆಯ ಸಿಪಿಐ ಸುಂದ್ರೇಶ, ಹೊಳೆನ್ನವರ, ಪಿಎಸ್ ಐ ಆನಂದ ಮೂರ್ತಿ ಇತರ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ನೂರಾರು ಜನತೆ ಜಮಾಯಿಸಿದ್ದರು.












Click it and Unblock the Notifications