Zameer Ahmed Khan: ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು: ಜಮೀರ್ ಅಹಮದ್
ಬೆಂಗಳೂರು, ಜೂನ್ 12: ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಾಲೆ - ಕಾಲೇಜು, ವಸತಿ ಶಾಲೆ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು ಎಂದು ಅಧಿಕಾರಿಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಅಬುಲ್ ಕಲಾಂ ಅಜಾದ್ ಭವನದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಯಾವುದೇ ಹಂತದಲ್ಲೂ ಶಾಲೆ ಅಥವಾ ಕಾಲೇಜು ಶಿಕ್ಷಣದಿಂದ ವಂಚಿತರಾಗದಂತೆ ಪ್ರಮುಖವಾಗಿ ಉನ್ನತ ಶಿಕ್ಷಣ ವೇಳೆ ಡ್ರಾಪ್ ಔಟ್ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿ ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತದ ಸಮಗ್ರ ಮಾಹಿತಿ ಒದಗಿಸುವಂತೆ ಸೂಚಿಸಿದ ಅವರು, ಇನ್ಮುಂದೆ ಕಾಲೋನಿಗಳ ಅಭಿವೃದ್ಧಿ ಪ್ರಸ್ತಾವನೆ ಬಂದರೆ ಸ್ಥಳಕ್ಕೆ ಹೋಗಿ ಆ ಕಾಮಗಾರಿಯ ಅಗತ್ಯದ ಬಗ್ಗೆ ಪರಿಶೀಲಿಸಿ ವರದಿ ಕೊಡಲು ತಜ್ಞರ ತಂಡ ರಚನೆಗೆ ಸೂಚಿಸಿದರು.
ಕಾಮಗಾರಿ ಪೂರ್ಣ ಗೊಂಡು ಬಿಲ್ ಪಾವತಿ ಹಂತದಲ್ಲೂ ಇದೇ ತಂಡ ಪರಿಶೀಲಿಸಿ ವರದಿ ನೀಡುವಂತಾಗಬೇಕು. ರಾಜ್ಯದಲ್ಲಿರುವ 126 ಅಲ್ಪಸಂಖ್ಯಾತ ವಸತಿ ಶಾಲಾ ಕಾಲೇಜು ಪೈಕಿ 29 ಬಾಡಿಗೆ ಕಟ್ಟಡದಲ್ಲಿದ್ದು ಮುಂದಿನ ಒಂದು ವರ್ಷದಲ್ಲಿ ಎಲ್ಲವೂ ಸ್ವಂತ ಕಟ್ಟಡ ದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಅಲ್ಲಿ ವಿದ್ಯಾರ್ಥಿಗಳ ಪ್ರವೇಶ ಕಡಿಮೆ ಇದ್ದರೆ ಹೆಚ್ಚಿಸಬೇಕು. ನಿಗದಿತ ಪ್ರವೇಶಕಿಂತ ಬೇಡಿಕೆ ಹೆಚ್ಚಾಗಿದ್ದರೆ ಹೆಚ್ಚುವರಿ ಕಟ್ಟಡ ನಿರ್ಮಿಸಿ ಪ್ರವೇಶ ಕಲ್ಪಿಸಬೇಕು ಎಂದು ಸೂಚಿಸಿದರು.
ಅದೇ ರೀತಿ ವಿದ್ಯಾಸಿರಿ ಯೋಜನೆಯಡಿಯಲ್ಲಿ ಹಾಸ್ಟೆಲ್ ವ್ಯವಸ್ಥೆ ಸಿಗದ 18.800 ವಿದ್ಯಾರ್ಥಿ ಗಳಿಗೆ ವಾರ್ಷಿಕ 27 ಕೋಟಿ ರೂ. ಪಾವತಿ ಆಗುತ್ತಿದ್ದು, ಅದನ್ನು ತಪ್ಪಿಸಲು ಅಗತ್ಯ ಇರುವ ಕಡೆ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಿ ಅದಕ್ಕೆ ಬೇಕಾದ ಜಮೀನು ಗುರುತಿಸಿ ಎಂದು ನಿರ್ದೇಶನ ನೀಡಿದರು.
ಮೌಲಾನ ಅಜಾದ್ ಶಾಲೆ ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೆಲವೆಡೆ ಎರಡು ಅಂಕಿ ದಾಟ ದಿದ್ದರೂ ಶಿಕ್ಷಕರು ಹಾಗೂ ಸಿಬ್ಬಂದಿ ಹೆಚ್ಚುವರಿ ಆಗಿ ಇರುವ ಬಗ್ಗೆ ಪರಿಶೀಲಿಸಿ ಅಗತ್ಯ ಇರುವ ಕಡೆಗೆ ಶಿಫ್ಟ್ ಮಾಡುವ ಬಗ್ಗೆಯೂ ಚಿಂತನೆ ನಡೆಸಿ ಎಂದು ಸಲಹೆ ನೀಡಿದರು.
ಕೊಳೆಗೇರಿಗಳಲ್ಲೂ ಮುಸ್ಲಿಂ ಕಾಲೋನಿಗಳ ಅಭಿವೃದ್ಧಿ ಹೆಸರಿನಲ್ಲಿ ಬಿಲ್ ಪಾವತಿ ಆಗಿರುವ ಬಗ್ಗೆ ಹಾಗೂ ಬೆಂಗಳೂರಿನಲ್ಲಿಯೇ ಹೆಚ್ಚು ಅನುದಾನ ಬಳಕೆ ಆಗಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು, ಜಿಲ್ಲಾ ಹಾಗೂ ತಾಲ್ಲೂಕು ಪ್ರವಾಸದ ಸಂದರ್ಭದಲ್ಲಿ ಪ್ರತಿ ಕಾಮಗಾರಿಯ ಪರಿಶೀಲನೆ ನಡೆಸುತ್ತೇನೆ. ಸಮುದಾಯ ಭವನ ನವೀಕರಣ, ಹೊಸ ಸಮುದಾಯ ಭವನ ನಿರ್ಮಾಣ ಸೇರಿ ಯಾವುದೇ ಕಾಮಾಗಾರಿಗಳಲ್ಲಿ ದುರುಪಯೋಗ, ಲೋಪ ಕಂಡು ಬಂದರೆ ಅಲ್ಲೇ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತರ ಇಲಾಖೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹೆಲ್ಪ್ ಲೈನ್ ಸ್ಥಾಪಿಸಿ ಅದರ ನಿರ್ವಹಣೆ ಮಾಡಿದ ಒಬ್ಬರಿಗೆ ತಿಂಗಳಿಗೆ ನಾಲ್ಕು ಲಕ್ಷ ವೇತನ ನೀಡಿರುವ ಬಗ್ಗೆ, ಅದರಿಂದ ಪ್ರಯೋಜನ ಆಗದಿದ್ದರೂ ಮುಂದುವರಿಸಿದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ರಾಜ್ಯದ ಮುಖ್ಯ ಕಾರ್ಯದರ್ಶಿ ಗಿಂತ ಮೂರು ಪಟ್ಟು ವೇತನ ಒಬ್ಬರಿಗೆ ಮಾಸಿಕ ನೀಡಿದ್ದು ಹೇಗೆ, ಸಹಾಯವಾಣಿ ಕೇಂದ್ರಕ್ಕೆ ವಾರ್ಷಿಕ 2.5 ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೂ ಪ್ರತ್ಯೇಕ ವಾಗಿ ಹೆಲ್ಫ್ ಲೈನ್ ವ್ಯವಸ್ಥೆಯ ಅಗತ್ಯತೆ ಏನಿತ್ತು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಪೂರ್ಣಗೊಂಡಿರುವ 126 ಶಾದಿ ಮಹಲ್ ಗಳ ಕಾಮಗಾರಿ ಪೂರ್ಣ ಗೊಳಿಸಲು 56 ಕೋಟಿ ರೂ. ಅಗತ್ಯವಾಗಿದ್ದು ಅನುದಾನದ ಕೊರತೆ ಇರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಜತೆಗೆ ಹೊಸದಾಗಿ ಶಾದಿ ಮಹಲ್ ನಿರ್ಮಾಣಕ್ಕೆ ಬೇಡಿಕೆ ಇರುವ ಬಗ್ಗೆಯೂ ಗಮನಕ್ಕೆ ತಂದರು.ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ, ವಖ್ಫ್ ಸೇರಿದಂತೆ ಒಟ್ಟಾರೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಹಾಲಿ ಇರುವ ಯೋಜನೆ ಮುಂದುವರಿಕೆ, ಹೊಸ ಯೋಜನೆಗಳ ಅನುಷ್ಟಾನ ಸೇರಿ ಒಟ್ಟಾರೆ ವಾರ್ಷಿಕ ಅನುದಾನದ ಅಗತ್ಯ ಬಗ್ಗೆ ಬಜೆಟ್ ಪೂರ್ವಬಾವಿ ಸಭೆಗೆ ಮುನ್ನ ಪ್ರಸ್ತಾವನೆ ಸಿದ್ದಪಡಿಸಲು ಸಚಿವರು ಸೂಚಿಸಿದರು.












Click it and Unblock the Notifications