ಮೈತ್ರಿ ಸರ್ಕಾರ ಬಂದ್ರೂ ಮುಸ್ಲಿಂರನ್ನೇ ಸಿಎಂ ಮಾಡಲಿ; ಕುಮಾರಸ್ವಾಮಿಗೆ ಜಮೀರ್ ಸವಾಲ್
ಬೆಂಗಳೂರು, ಡಿಸೆಂಬರ್ 5: ಸಮ್ಮಿಶ್ರ ಸರ್ಕಾರ ಬಂದರೂ ಮುಸ್ಲಿಮರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಗೆ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅವಕಾಶ ಸಿಕ್ಕದರೆ ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ನೂರು ಸೀಟು ದಾಟಲ್ಲ. ಅವ್ರು 113 ಸೀಟು ಗೆದ್ದು ಅಧಿಕಾರಕ್ಕೆ ಬರಲ್ಲ, ಮತ್ತೆಲ್ಲಿಂದ ಮುಸ್ಲಿಮರನ್ನು ಸಿಎಂ ಮಾಡುತ್ತಾರೆ. ಸಮ್ಮಿಶ್ರ ಸರ್ಕಾರ ಆದರೂ ಮುಸ್ಲಿಮರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ನೋಡೋಣ, ಇದು ನನ್ನ ಒಪನ್ ಚಾಲೆಂಜ್ ಎಂದಿದ್ದಾರೆ.
ಜೆಡಿಎಸ್ಗೆ 113 ಸೀಟ್ ಬರಲು ಸಾಧ್ಯನಾ? ಅವರು ಹಗಲು ಕನಸು ಕಾಣುತ್ತಿದ್ದಾರೆ. ಅವ್ರದ್ದು ಏನಿದ್ದರೂ 25 - 30 ಸೀಟ್ ಗಳಿಗಷ್ಟೇ ಸೀಮಿತ, ಅವ್ರು ಅಷ್ಟು ಗೆದ್ದು ಅಧಿಕಾರಕ್ಕೆ ಬರಲ್ಲ, ಅದಕ್ಕೆ ಇವ್ರು ಆ ಮಾತು ಹೇಳಿದ್ದಾರೆ. ಏನು ಯಾತ್ರೆ ಮಾಡಿದರೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಚಾಮರಾಜ ಪೇಟೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿ,ನಾನು ಚಾಮರಾಜಪೇಟೆಯ ಮನೆ ಮಗ. ಸಿದ್ದರಾಮಯ್ಯ ಚಾಮರಾಜ ಪೇಟೆ ಅಳಿಯ. ಮಗನನ್ನು ಇಷ್ಟಪಡುವ ರೀತಿಯಲ್ಲಿ ಅಳಿಯನನ್ನು ಇಷ್ಟ ಪಡುತ್ತಾರೆ. ಮಾಧ್ಯಮದಲ್ಲಿ ಸಿದ್ದರಾಮಯ್ಯ ಅವರಿಗೆ ಅಲ್ಲಿ ಸ್ಪರ್ಧೆ ಮಾಡಲು ಆಹ್ವಾನ ಕೊಟ್ಟಿದ್ದೆ. ಇವಾಗಲೂ ಅಲ್ಲಿಂದಲೇ ಸ್ಪರ್ಧೆ ಮಾಡಲಿ ಎಂದು ಆಹ್ವಾನ ನೀಡುತ್ತಿದ್ದೇನೆ. ಚಾಮರಾಜಪೇಟೆ ಯಲ್ಲಿ ಸಿದ್ದರಾಮಯ್ಯ ನಿಂತ್ರೆ ಗೆದ್ದೆ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಆ ಮಾತಿಗೆ ಇವಾಗ್ಲೂ ನಾನು ಬದ್ದನಿದ್ದೇನೆ. ಸಿದ್ದರಾಮಯ್ಯನೇ ಮತ್ತೆ ಮುಂದಿನ ಮುಖ್ಯಮಂತ್ರಿ ಆಗಬೇಕು. ಆದರೆ ಇದರಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ, ಅವ್ರು ಗೆರೆ ಹಾಕಿದಾಗ ಅದನ್ನು ದಾಟೋಕೆ ಆಗೋದಿಲ್ಲ ಎಂದು ಜಮ್ಮೀರ್ ಅಹ್ಮದ್ ತಿಳಿಸಿದರು.
ಚಾಮರಾಜಪೇಟೆಯಲ್ಲಿ ಜಮೀರ್ ಸೋಲಿಸಲು ಪ್ರಯತ್ನ ನಡೆಸುತ್ತಿರುವ ವಿಚಾರವಾಗಿ ಮಾತನಾಡಿ, ಚಾಮರಾಜಪೇಟೆಯಲ್ಲಿ 2018ರಲ್ಲಿ ಜಮೀರ್ ಗೆ ಕಷ್ಟ ಇದೆ ಎಂದಿದ್ದರು. ಆದರೆ, ಫಲಿತಾಂಶ ಏನಾಯ್ತು? 6000 ಮತಗಳ ಜಾಸ್ತಿ ಲೀಡ್ನಲ್ಲಿ ಗೆಲುವು ಸಾಧಿಸಿದ್ದೆ. ನನ್ನ ವಿರುದ್ಧ ಎಚ್ಡಿ ದೇವೇಗೌಡರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದರು. ಆದರೆ, ಕರ್ನಾಟಕದ ಮುಸ್ಲಿಮರಿಂದ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಬದಲಾಗಿ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನು ನಿಲ್ಲಿಸಿ ಎಂದು ಸವಾಲು ಹಾಕಿದ್ದೆ ಎಂದರು.
ಇನ್ನೂ ಚಾಮರಾಜಪೇಟೆಗೆ ಯಾರು ಬೇಕಾದರೂ ಅಭ್ಯರ್ಥಿ ಹಾಕಲಿ. ಚಾಮರಾಜಪೇಟೆ ಮತದಾರರಿಗೆ ಜಮೀರ್ ಅಹ್ಮದ್ ಖಾನ್ ಮನೆ ಮಗ. ಮನೆ ಮಗನನ್ನು ಯಾರಾದರೂ ಬಿಟ್ಟುಕೊಡಲು ಸಾಧ್ಯವೇ? ಯಾರಾದರೂ ಬರಲಿ ಎಂದರು. ಚಾಮರಾಜಪೇಟೆಯಲ್ಲಿ ಯಾವ ಪಕ್ಷದವರು ಯಾರನ್ನಾದರೂ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಿ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಬಂದವರು ಮೂವತ್ತು ಸಾವಿರ ಓಟ್ ದಾಟಲಿ ನೋಡೋಣ ಎಂದು ಸವಾಲು ಹಾಕಿದರು