ಆಹಾರ ಜಾಗೃತಿಗಾಗಿ ದೇಶಪರ್ಯಟನೆ ಹೊರಟ ಯುವಕ ಕಾರವಾರದಲ್ಲಿ
ಕಾರವಾರ, ಸೆಪ್ಟೆಂಬರ್ 26 : ಹೊಟೇಲ್, ಮನೆ, ಅನೇಕ ಸಭೆ ಸಮಾರಂಭಗಳಲ್ಲಿ ದಿನನಿತ್ಯ ಎಷ್ಟೊಂದು ಆಹಾರ ವ್ಯರ್ಥವಾಗುತ್ತದೆ. ಆದರೆ ಆ ಬಗ್ಗೆ ಯಾರೂ ಕೂಡ ಯೋಚನೆ ಮಾಡೋದಿಲ್ಲ. ಸಾವಿರಾರು ಜನ ಅನ್ನ ಆಹಾರವಿಲ್ಲದೇ ಅಸುನೀಗುತ್ತಿದ್ದಾರೆ. ಅಂಥವರ ಉಳಿವಿಗೆ ಏನು ಮಾಡಬೇಕು ಅಂತಲೂ ಕೂಡ ಯಾರೂ ಯೋಚಿಸೋದಿಲ್ಲ. ಆದರೆ ಇಲ್ಲೊಬ್ಬ ಯುವಕ ಆಹಾರ ಮತ್ತು ನೀರನ್ನು ವ್ಯರ್ಥಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಲು ಕಾಲ್ನಡಿಗೆಯಲ್ಲಿ ದೇಶಪರ್ಯಟನೆ ಕೈಗೊಂಡಿದ್ದಾನೆ.
ಹೌದು, ಕನ್ಯಾಕುಮಾರಿಯ ತೂತೂರಿನ ನಿಗಿನ್ ಬಿನೀಷ್ ಈ ಕಾರ್ಯಕ್ಕೆ ಇಳಿದವರು. ಬಿಟೆಕ್ ಪದವಿ ಪಡೆದಿರುವ ನಿಗಿನ್ ಆಗಸ್ಟ್ 24ರಂದು ತಮಿಳುನಾಡಿನ ಕೊಯಮತ್ತೂರಿನಿಂದ ತನ್ನ ದೇಶಪರ್ಯಟನೆ ಪ್ರಾರಂಭಿಸಿದ್ದರು. ಒಂದು ಬ್ಯಾಗ್, ಮೊಬೈಲ್ ಹಾಗೂ ರಾಷ್ಟ್ರಧ್ವಜದೊಂದಿಗೆ ಹೊರಟಿರುವ ಇವರು ತಾವು ಸಾಗುವ ದಾರಿಯಲ್ಲಿ ಸಿಗುವ ಶಾಲೆ, ಕಾಲೇಜು, ಚರ್ಚ್ ಗಳಲ್ಲಿ ಆಹಾರ ಹಾಗೂ ನೀರನ್ನು ವ್ಯರ್ಥ ಮಾಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಈಗಾಗಲೇ ಕೆರಳ, ಪಾಂಡಿಚೇರಿ ಮೂಲಕ ಸುಮಾರು 700 ಕಿ.ಮೀ ಕ್ರಮಿಸಿ ಕಾರವಾರ ಪ್ರವೇಶಿಸಿರುವ ಇವರು ನಿತ್ಯ 23 ಕಿ.ಮೀ ಕ್ರಮಿಸುತಿದ್ದಾರೆ. ಅಲ್ಲದೆ ನಿಗಿನ್ ಇನ್ನು ಒಂದು ವರ್ಷದಲ್ಲಿ ದೇಶ ಪರ್ಯಟನೆ ಮಾಡಿ ಮರಳಿ ಚೆನೈಗೆ ತೆರಳುವ ಗುರಿ ಹೊಂದಿದ್ದಾರೆ.

ಕಸದಬುಟ್ಟಿಯಿಂದ ಆಹಾರ ತೆಗೆದು ತಿಂದ ಮಹಿಳೆ ಪ್ರೇರಣೆ
ಒಮ್ಮೆ ಹೊಟೇಲ್ ಒಂದರಲ್ಲಿ ಊಟಕ್ಕೆ ಕುಳಿತಾಗ ಮಹಿಳೆಯೊಬ್ಬಳು ಕಸದಬುಟ್ಟಿಯಿಂದ ಆಹಾರವನ್ನು ತೆಗೆದುಕೊಂಡು ಮೂಲೆಯಲ್ಲಿ ಕುಳಿತು ತಿನ್ನುತ್ತಿರುವುದನ್ನು ನೋಡಿದ್ದೆ. ಇದು ಮನಕಲುಕುವಂತಿತ್ತು. ಅಂದು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಭಾವನೆ ಬಂದಿತ್ತು. ಅದರಂತೆ ನಡಿಗೆಯಲ್ಲಿಯೇ ದೇಶ ಸುತ್ತಿ ಈ ಬಗ್ಗೆ ಅರಿವು ಮೂಡಿಸುತ್ತೇನೆ ಎನ್ನುತ್ತಾರೆ ನಿಗಿನ್.
ಹಣ ಪಡೆಯೋದಿಲ್ಲ
ನಿಗಿನ್ ಯಾರಿಂದಲೂ ಹಣ ಪಡೆಯುತ್ತಿಲ್ಲ. ಹೋಟೆಲ್, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಹಣ ನೀಡಲು ಬರುವವರ ಬಳಿ ಕೇವಲ ಊಟ, ತಿಂಡಿ ಪಡೆಯುತ್ತಾರೆ ನಿಗಿನ್.
ಕಾರವಾರಕ್ಕೆ ಆಗಮಿಸುತ್ತಿದ್ದ ಇವರನ್ನು ವಾಹನದಲ್ಲಿ ಕುಳಿತುಕೊಳ್ಳುವಂತೆ ಆಹ್ವಾನ ನೀಡಿದ್ದೆವು. ಆದರೆ ಇದಕ್ಕೆ ಒಪ್ಪಿರಲಿಲ್ಲ. ಕೊನೆಗೆ ವಿಚಾರಿಸಿದಾಗ ಈ ವಿಷಯವನ್ನು ತಿಳಿಸಿದರು. ಅದರಂತೆ ರಾತ್ರಿ ಉಳಿದುಕೊಳ್ಳುವ ಮತ್ತು ಊಟದ ವ್ಯವ್ಯಸ್ಥೆಯನ್ನು ಮಾಡುವುದಾಗಿ ವಿನಾಯಕ ಹರಿಕಂತ್ರ ಹಾಗೂ ಇನ್ನಿತರ ತಿಳಿಸಿದ್ದಾರೆ.
ಒಟ್ಟಾರೆ, ಯಾವುದಾದರೊಂದು ಕಂಪನಿಯಲ್ಲಿ ಸಾವಿರಾರು ರೂಪಾಯಿ ಸಂಬಳ ಪಡೆದು ಆರಾಮವಾಗಿ ಜೀವನ ನಡೆಸಬಹುದಿದ್ದ ನಿಗಿನ್ ಜನಜಾಗೃತಿಗಾಗಿ ಕಾಲ್ನಡಿಗೆ ಹಮ್ಮಿಕೊಂಡಿದ್ದು ಮಾತ್ರ ಶ್ಲಾಘನೀಯವೆ. ಇನ್ನಾದರು ನಮ್ಮ ಜನ ಆಹಾರವನ್ನು ವ್ಯರ್ಥ ಮಾಡುವ ಬದಲು, ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಂಡು, ಅದರಿಂದ ಇತರ ಬಡವರಿಗೆ ಉಪಯೋಗವಾಗುವ ರೀತಿಯಲ್ಲಿ ಯೋಜನೆ ಹಾಕಿಕೊಳ್ಳಬೇಕಿದೆ.












Click it and Unblock the Notifications