ನಿರುದ್ಯೋಗ; ಮೋದಿಗೆ ಅಂಕಪಟ್ಟಿ ಕಳಿಸಲಿದೆ ಕಾಂಗ್ರೆಸ್!
ಬೆಂಗಳೂರು, ಏಪ್ರಿಲ್ 07; ನಿರುದ್ಯೋಗದ ವಿರುದ್ಧ ಕರ್ನಾಟಕ ಕಾಂಗ್ರೆಸ್ ವಿನೂತನ ಮಾದರಿ ಅಭಿಯಾನ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಗೆ ಅಂಕಪಟ್ಟಿಗಳನ್ನು ಕಳಿಸಿ ಉದ್ಯೋಗಕ್ಕಾಗಿ ಒತ್ತಾಯಿಸಲಿದೆ.
ಕರ್ನಾಟಕದಲ್ಲಿನ ನಿರುದ್ಯೋಗದ ಪ್ರಮಾಣದ ಕುರಿತು ಯುವ ಕಾಂಗ್ರೆಸ್ ಸಮೀಕ್ಷೆ ನಡೆಸಲಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಕಾಂಗ್ರೆಸ್ ಕರ್ನಾಟಕದಲ್ಲಿ ಈ ರೀತಿಯ ಸಮೀಕ್ಷೆ ನಡೆಸುತ್ತಿದೆ.
ರಾಜ್ಯದ 3.7 ಲಕ್ಷ ಯುವಕರು ಪ್ರಧಾನಿ ನರೇಂದ್ರ ಮೋದಿಗೆ ಅಂಕಪಟ್ಟಿಯ ನಕಲು ಪ್ರತಿಗಳನ್ನು ಕಳಿಸಲಿದ್ದಾರೆ. ರಾಜ್ಯಾದ್ಯಂತ ಇಂತಹ ಅಭಿಯಾನವನ್ನು ಆರಂಭಿಸಲು ಯುವ ಕಾಂಗ್ರೆಸ್ ತಯಾರಿ ನಡೆಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, "ಕಳೆದ ವಾರ ಕರ್ನಾಟಕಕ್ಕೆ ಆಗಮಿಸಿದ್ದ ಪಕ್ಷದ ನಾಯಕ ರಾಹುಲ್ ಗಾಂಧಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ" ಎಂದು ಹೇಳಿದರು.
ಈ ಅಭಿಯಾನದ ಬಗ್ಗೆ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, "ರಾಜ್ಯದ 58,000 ಬೂತ್ಗಳಲ್ಲಿ ಬೂತ್ ಅಧ್ಯಕ್ಷರು ಈ ಕುರಿತು ಡೇಟಾ ಸಂಗ್ರಹಿಸಿ ನೀಡಲಿದ್ದಾರೆ" ಎಂದರು.
"ನಾವು ಸ್ಮಾರ್ಟ್ ಫೋನ್ ಹೊಂದಿರುವ ಸದಸ್ಯರನ್ನು ಆಯ್ಕೆ ಮಾಡಲಿದ್ದೇವೆ. ಮೊಬೈಲ್ ಅಪ್ಲಿಕೇಶ್ನ್ ಮೂಲಕ ಮಾಹಿತಿಯನ್ನು ಸಂಗ್ರಹ ಮಾಡಲಿದ್ದೇವೆ" ಎಂದು ಹೇಳಿದರು.
ಬೂತ್ ಅಧ್ಯಕ್ಷರು 30 ರಿಂದ 40 ನಿರುದ್ಯೋಗಿ ಯುವಕ/ ಯುವತಿಯರನ್ನು ಗುರುತಿಸಲಿದ್ದಾರೆ. ಅವರು ಪದವೀಧರಾಗಿದ್ದು, 35 ವರ್ಷದೊಳಗಿರಬೇಕು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 10 ಸಾವಿರ ನಿರುದ್ಯೋಗಿ ಯುವಕ/ ಯುವತಿಯರನ್ನು ಗುರುತಿಸಲು ಪಕ್ಷ ತೀರ್ಮಾನಿಸಿದೆ.
ನಿರುದ್ಯೋಗಿ ಯುವಕ/ ಯುವತಿಯರನ್ನು ಗುರುತಿಸಿದ ಬಳಿಕ ಅವರಿಗೆ ಅಂಕಪಟ್ಟಿಗಳ ನಕಲು ಪ್ರತಿಗಳನ್ನು ತರುವಂತೆ ಹೇಳಲಾಗುತ್ತದೆ. ಅವರು ಅಂಕಪಟ್ಟಿಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳಿಸಲು ಎನೋಲೋಪ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಪಕ್ಷವೇ ಮಾಡಲಿದೆ.
ಕಾಂಗ್ರೆಸ್ ಹೋರಾಟ ನಡೆಸುತ್ತಿದೆ; ಕಾಂಗ್ರೆಸ್ ಪಕ್ಷ ನಿರುದ್ಯೋಗ ಸಮಸ್ಯೆ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ. ಉದ್ಯೋಗ ಸೃಷ್ಟಿ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪ ಮಾಡುತ್ತಿದೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರ ಸಮಸ್ಯೆಗಳ ಬಗ್ಗೆ ಇಂದು ಚರ್ಚೆಯಾಗಬೇಕು. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ವಾಪಾಸು ಪಡೆದುಕೊಂಡರೂ ರಾಜ್ಯದಲ್ಲಿ ಏಕೆ ವಾಪಾಸು ಪಡೆದಿಲ್ಲ?" ಎಂದು ಪ್ರಶ್ನಿಸಿದ್ದರು.
"ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ನೋಟು ರದ್ದತಿ, ಜಿಎಸ್ಟಿ ಜಾರಿ ಮೊದಲು 11 ಕೋಟಿ ಉದ್ಯೋಗಗಳು ಇದ್ದವು, ಈಗದು 2.5 ಕೋಟಿಗೆ ಇಳಿದಿದೆ" ಎಂದು ಆರೋಪಿಸಿದ್ದರು.
ನಿರುದ್ಯೋಗ ಸಮಸ್ಯೆ; 2018 ರಿಂದ 2020ರ ತನಕ 25 ಸಾವಿರ ಮಂದಿ ನಿರುದ್ಯೋಗ ಹಾಗೂ ಸಾಲಭಾದೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರವೇ ರಾಜ್ಯಸಭೆಗೆ ಉತ್ತರ ನೀಡಿದೆ.
ಸುಮಾರು 9140 ಜನರು ನಿರುದ್ಯೋಗದ ಕಾರಣ ಮತ್ತು 16,091 ಜನರು ದಿವಾಳಿ ತನ ಅಥವ ಸಾಲದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಒದಗಿಸಿದ ದತ್ತಾಂಶವನ್ನು ಆಧರಿಸಿ ಸರ್ಕಾರ ಈ ಅಂಕಿ-ಅಂಶಗಳನ್ನು ನೀಡಿದೆ ಎಂದು ಸಚಿವರು ಹೇಳಿದ್ದಾರೆ. 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಿರುದ್ಯೋಗಿಗಳಲ್ಲಿ ಆತ್ಮಹತ್ಯೆ ಹೆಚ್ಚಿದೆ. 2020ರಲ್ಲಿ ಅತಿ ಹೆಚ್ಚು ಎಂದರೆ 3,548 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ 50 ವರ್ಷಗಳಲ್ಲಿಯೇ ಭಾರತದಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಆರೋಪಿಸಿದ್ದರು.












Click it and Unblock the Notifications