ಯುವ ಪತ್ರಕರ್ತರ ತಂಡವೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ
ಬುಧವಾರ, ಆಗಸ್ಟ್ 17ರಂದು ಸಂಜೆ ಆರು ಗಂಟೆಗೆ, ಸಾಂಸ್ಕೃತಿಕ ಸಮುಚ್ಛಯ, ರಂಗಾಯಣ, ಧಾರವಾಡದಲ್ಲಿ ಮಾಧ್ಯಮರಂಗ ಅನ್ನೋ ತಂಡದಿಂದ ಸೈಕಲ್ ಡ್ರೀಮ್ಸ್ ನಾಟಕ ಪ್ರದರ್ಶನಗೊಳ್ಳಲಿದೆ.
ಮಾಧ್ಯಮ ಕ್ಷೇತ್ರದಲ್ಲಿ ಇದ್ದುಕೊಂಡು ಏನಾದರೂ ಹೊಸತು ಮಾಡುವುದು ಅಂದರೆ, ಒಂದಿಷ್ಟು ಸವಾಲಿನ ಕೆಲಸವೇ ಸರಿ. ಯಾಕಂದ್ರೆ, ಸದಾ ಕೆಲಸದ ಒತ್ತಡ. ಹೀಗಾಗಿ ಅನೇಕರಲ್ಲಿ ಪ್ರತಿಭೆ ಇದ್ದರೂ, ಅದನ್ನ ಅಭಿವ್ಯಕ್ತ ಪಡಿಸಲು ಆಗೋದಿಲ್ಲ.
ಹೀಗಿರುವಾಗ ಬೆಂಗಳೂರು ಎಂಬ ಮಹಾನಗರದಲ್ಲಿ ಕೆಲಸ ಮಾಡುವ ಯುವ ಪತ್ರಕರ್ತರ ತಂಡವೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಎಲ್ಲಿಂದಲೋ ಬಂದು ಸಿಲಿಕಾನ್ ಸಿಟಿಯಲ್ಲಿ ಬದುಕು ಕಟ್ಟಿಕೊಂಡಿರುವ ಕೆಲಯುವ ಪತ್ರಕರ್ತರು, ಕಳೆದೊಂದು ವರ್ಷದ ಹಿಂದೆ 'ಮಾಧ್ಯಮರಂಗ' ಅನ್ನೋ ತಂಡ ಕಟ್ಟಿಕೊಂಡು, ಸಾಹಿತ್ಯ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ವಿಷಯದ ಕುರಿತು ಮೌಖಿಕ ಚರ್ಚೆಯಲ್ಲಿ ತೊಡಗಿಕೊಂಡಿತ್ತು.

ಮಾಧ್ಯಮರಂಗ ತಂಡದಲ್ಲಿ ಬರಹಗಾರರು, ವಿಮರ್ಶಕರು, ಚಿಂತನಶೀಲರು, ರಂಗಭೂಮಿ ಹಿನ್ನೆಲೆಯುಳ್ಳ ಸುಮಾರು 15 ಜನರಿದ್ದಾರೆ. ಈ ತಂಡದ ಸದಸ್ಯರಾದ ಯುವ ಬರಹಗಾರ ನಾಗೇಶ್ ತಳವಾರ ಅವರ ಎರಡನೇ ಕೃತಿ 'ದಂದುಗ' ಆಗಸ್ಟ್ 16 ರಂದು ಧಾರವಾಡದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.
ಈ ಹೊತ್ತಿನಲ್ಲಿ ಮಾಧ್ಯಮರಂಗ ತಂಡ, ತನ್ನ ಮೊದಲ ಪ್ರಯತ್ನವಾಗಿ ನಾಗೇಶ್ ತಳವಾರ ಅವರ 'ಕಾಡು' ಕಥೆ ಆಧರಿತ 'ಸೈಕಲ್ ಡ್ರೀಮ್ಸ್' ಅನ್ನೋ ನಾಟಕ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಕಳೆದೊಂದು ತಿಂಗಳಿನಿಂದ ತಾಲೀಮು ನಡೆಸಿದ್ದಾರೆ.
ಕೆಲಸದ ಒತ್ತಡದ ನಡುವೆಯೂ, ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನೋ ತವಕ. ಹೀಗಾಗಿ ನಿಂತ ನೀರಾಗದೆ, ಹರಿಯುವ ನದಿಯಾಗಲು ಹೊರಟಿದ್ದಾರೆ.
ಮೈಸೂರು ರಂಗಾಯಣದಲ್ಲಿ ಎರಡ್ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಇರುವ ಯಶವಂತ್ ಕಾರ್ಗಳ್ಳಿ ಎಂಬುವವರು 'ಸೈಕಲ್ ಡ್ರೀಮ್ಸ್' ನಾಟಕ ನಿರ್ದೇಶನ ಮಾಡಿದ್ದಾರೆ. ಬೇರೆ ಬೇರೆ ದೃಶ್ಯ ಮಾಧ್ಯಮದಲ್ಲಿ, ಪತ್ರಿಕೆಯಲ್ಲಿ, ವೆಬ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭೆಗಳು ಒಂದೆಡೆ ಸೇರಿ, ಹೊಸ ದಿಕ್ಕಿನತ್ತ ಸಾಗುತ್ತಿದ್ದಾರೆ.

ನಾಗೇಶ್ ತಳವಾರ, ಯಶವಂತ್ ಕಾರ್ಗಳ್ಳಿ, ತೀರ್ಥಪ್ರಸಾದ್, ಪ್ರಶಾಂತ ಆರಾಧ್ಯ, ಮಂಜು ಪಿಕೆ, ಅಮರೇಶ, ರಾಜು ಅಷೇ, ಉಮೇಶ್ ಮೈಸೂರು, ಪ್ರವೀಣ್ ಸಣ್ಣಮನಿ, ಶಬ್ಬೀರ್ ಸೂಡಿ, ಶಿಶಿರಂಜನ್, ಕುಮಾರ್, ವನಿತಾ ಜೈನ್, ಪೂರ್ಣಿಮಾ ಪವಾರ್, ಜ್ಯೋತಿ ದಫೇದಾರ್ ಸೇರಿದಂತೆ 15 ಜನರ ತಂಡ ನಾಟಕ ಪ್ರದರ್ಶನ ನೀಡಲಿದೆ.
ಇದೇ ಬರುವ ಬುಧವಾರ, ಆಗಸ್ಟ್ 16ರಂದು ಸಂಜೆ ಆರು ಗಂಟೆಗೆ, ಸಾಂಸ್ಕೃತಿಕ ಸಮುಚ್ಛಯ, ರಂಗಾಯಣ, ಧಾರವಾಡದಲ್ಲಿ ಸೈಕಲ್ ಡ್ರೀಮ್ಸ್ ನಾಟಕ ಪ್ರದರ್ಶನಗೊಳ್ಳಲಿದೆ. ಯುವ ಪತ್ರಕರ್ತರ ತಂಡಕ್ಕೊಂದು ಆಲ್ ದಿ ಬೆಸ್ಟ್.












Click it and Unblock the Notifications