ರಾಜ್ಯದಲ್ಲಿ ಇನ್ನೂ ಮೂರು ದಿನ ಅಬ್ಬರಿಸಲಿದೆ ಮಳೆ
ಬೆಂಗಳೂರು, ಅಕ್ಟೋಬರ್ 24: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳು ತತ್ತರಿಸಿವೆ. ರಾಜಧಾನಿ ಬೆಂಗಳೂರು ಮಲೆನಾಡಿನಂತೆ ಕಾಣಿಸುತ್ತಿದೆ. ಶುಕ್ರವಾರ ಮಧ್ಯಾಹ್ನದ ಬಳಿಕ ಸುರಿದ ಭಾರಿ ಮಳೆಗೆ ದಕ್ಷಿಣ ಬೆಂಗಳೂರು ಮುಳುಗಿಹೋಗಿವೆ. ಇನ್ನೂ ಮೂರು ದಿನ ಬೆಂಗಳೂರು, ಕರಾವಳಿ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಹುಭಾರ ಕುಸಿತದ ಕಾರಣದಿಂದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ, ರಾಜಧಾನಿ ಬೆಂಗಳುರು ಸೇರಿದಂತೆ ರಾಜ್ಯ ಬಹುತೇಕ ಭಾಗಗಳಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಸೋಮವಾರದವರೆಗೂ ಈ ಮಳೆ ಅಬ್ಬರ ಇರಲಿದೆ. ಕರಾವಳಿ ಭಾಗಗಳಲ್ಲಿ ಶನಿವಾರ ಹಾಗೂ ಭಾನುವಾರ ವ್ಯಾಪಕವಾಗಿ ಮಳೆ ಸುರಿಯಲಿದೆ. ಸೋಮವಾರ ರಾಜ್ಯದಾದ್ಯಂತ ಮಳೆ ಇನ್ನಷ್ಟು ಜೋರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ಸುರಿದ ಮಳೆಯಿಂದ ಬೆಂಗಳೂರಿನ ಜನರು ಕಂಗಾಲಾಗಿದ್ದಾರೆ. ಹೊಸಕೆರೆಹಳ್ಳಿ, ಕೆಂಗೇರಿ ಪ್ರದೇಶಗಳ ಸುತ್ತಮುತ್ತ ರಾಜಕಾಲುವೆಗೆ ಸರಿಯಾಗಿ ನೀರು ಹೋಗದೆ ಪರಿಣಾಮ ರಸ್ತೆ ಹಾಗೂ ಮನೆಗಳು ಜಲಾವೃತವಾಗಿದ್ದವು.
ರಾಜಾಜಿನಗರ, ವಿಜಯನಗರ, ಶಾಂತಿನಗರ, ಮೆಜೆಸ್ಟಿಕ್, ಯಶವಂತಪುರ, ಬಸವನಗುಡಿ, ಗಾಂಧಿನಗರ, ಮಡಿವಾಳ, ಹೆಬ್ಬಾಳ, ಹೊಸಕೆರೆಹಳ್ಳಿ, ರಾಜರಾಜೇಶ್ವರಿನಗರ, ಕೆಂಗೇರಿ, ಆರ್ಟಿನಗರ ಸೇರಿದಂತೆ ಅನೇಕ ಭಾಗಗಳಲ್ಲಿ ಜನರ ತೀವ್ರ ಪರದಾಡುವಂತಾಗಿತ್ತು. ರಾಜಕಾಲುವೆಗಳು ತುಂಬಿ ಹರಿಯುತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆಯಲ್ಲಿ ನಡೆಸಬೇಕಾಗಿದ್ದ ಕಾಮಗಾರಿಗಳನ್ನು ಮಳೆಗಾಲದಲ್ಲಿ ನಡೆಸಲಾಗುತ್ತಿದೆ. ಅನೇಕ ಕಡೆ ರಸ್ತೆಗಳನ್ನು ಅಗೆದು ತಿಂಗಳಾದರೂ ಸರಿಪಡಿಸಿಲ್ಲ. ರಾಜಕಾಲುವೆಗಳಿಗೆ ಸಂಪರ್ಕಿಸುವ ಮಾರ್ಗಗಳೂ ಕೆಟ್ಟಿವೆ. ಬಿಬಿಎಂಪಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯೇ ಈ ಅನಾಹುತಗಳಿಗೆ ಕಾರಣ ಎಂದು ಜನರು ಆರೋಪಿಸಿದ್ದಾರೆ.












Click it and Unblock the Notifications