ಬಹಳಷ್ಟು ನಿಗೂಢ ಅರ್ಥ ಒಳಗೊಂಡಿದೆಯಾ ಯಡಿಯೂರಪ್ಪ ಕೊಟ್ಟಿರುವ 'ಎರಡು ಸಾಲಿನ ರಾಜೀನಾಮೆ ಪತ್ರ'?

ಬೆಂಗಳೂರು, ಜು. 26: "ನಾನು 'ಸಂತೋಷ'ದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಬೇರೆ ಯಾರಿಗೂ ಕೊಡದ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಪಕ್ಷದ ವರಿಷ್ಠರು ನನಗೆ ಕೊಟ್ಟಿದ್ದಾರೆ. ಹೀಗಾಗಿ ಯಾವುದೇ ದುಃಖವಿಲ್ಲದೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆಯನ್ನು ಕೊಡುತ್ತಿದ್ದೇನೆ" ಎಂದು ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಧನಾ ಸಮಾವೇಶದ ಭಾಷಣದಲ್ಲಿ ಹೇಳಿದ್ದರು.

Recommended Video

      BSY ನೋವಿನಿಂದ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿಗಿಂತ ಹೆಚ್ಚು ಮರುಗಿದ ಕಾಂಗ್ರೆಸ್ | Oneindia Kannada

      ದೆಹಲಿ ಭೇಟಿ ಸಂದರ್ಭದಲ್ಲಿಯೇ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೊಡುವಂತೆ ಸೂಚಿಸಿತ್ತು. ಜೊತೆಗೆ ಮೊದಲೇ ಸೂಚಿಸಿದಂತೆ ಜುಲೈ 10ರಂದು ಯಾಕೆ ರಾಜೀನಾಮೆ ಕೊಡಲಿಲ್ಲ? ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರನ್ನು ಕೇಳಿದ್ದರು ಎಂಬ ಮಾಹಿತಿಯೂ ಇದೆ. ಅದಕ್ಕೆ ಆಷಾಢ ಮಾಸದ ಕಾರಣವನ್ನು ಯಡಿಯೂರಪ್ಪ ಆಗ ಕೊಟ್ಟಿದ್ದರು. ಆದರೆ ಅದನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಇರಲಿಲ್ಲ.

      ಹೀಗಾಗಿ ದೆಹಲಿಯಿಂದ ಬೆಂಗಳೂರಿಗೆ ಮರಳುವಾಗಲೇ ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಕೊಡುವುದು ನಿಶ್ಚಯವಾಗಿತ್ತು. ಆದರೆ ಕೊನೆಯ ಪ್ರಯತ್ನ ಎಂಬಂತೆ ಯಡಿಯೂರಪ್ಪ ಅವರು ಜುಲೈ 25 ರಂದು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲು ತೀರ್ಮಾನ ಮಾಡಿದ್ದರು. ಆ ಮೂಲಕ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ಮಾಡಿದ್ದರು. ಆದರೆ ಅದಕ್ಕೂ ಹೈಕಮಾಂಡ್ ನೋ ಎಂದಿತ್ತು. ಯಾವುದೇ ಕಾರಣಕ್ಕೂ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವಂತಿಲ್ಲ ಎಂದು ಸೂಚನೆ ಕೊಟ್ಟಿತ್ತು. ಹೀಗಾಗಿ ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೊಡದೆ ಬೇರೆ ಯಾವುದೇ ದಾರಿ ಉಳಿದಿರಲಿಲ್ಲ.

      ಮುಖ್ಯಮಂತ್ರಿ ಸ್ಥಾನಕ್ಕೆ ಸಂತೋಷದಿಂದ ರಾಜೀನಾಮೆ ಕೊಡುವುದಾಗಿ ಸಾಧನಾ ಸಮಾವೇಶದ ಭಾಷಣದಲ್ಲಿ ಯಡಿಯೂರಪ್ಪ ಹೇಳಿದ್ದರು. ಆದರೆ ಅವರು ಮುಖ್ಯಮಂತ್ರಿ ಹುದ್ದೆಗೆ ಸಲ್ಲಿಸಿರುವ ರಾಜೀನಾಮೆ ಪತ್ರ ಏನು ಸೂಚಿಸುತ್ತಿದೆ? ಮುಂದಿದೆ ಮಾಹಿತಿ!

      ರಾಜೀನಾಮೆ ಪತ್ರದಲ್ಲಿ ಕಾಣದ 'ಸಂತೋಷ'

      ರಾಜೀನಾಮೆ ಪತ್ರದಲ್ಲಿ ಕಾಣದ 'ಸಂತೋಷ'

      ಐದು ದಶಕಗಳ ಹೊರಾಟದಿಂದ ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಕೇವಲ ಎರಡು ಸಾಲಿನ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಅವರು 'ಸಂತೋಷ'ದಿಂದ ರಾಜೀನಾಮೆ ಕೊಟ್ಟಿದ್ದಾರೊ? ಇಲ್ಲವೊ? ಎಂಬುದನ್ನು ರಾಜೀನಾಮೆ ಪತ್ರ ಓದಿಯೇ ತೀರ್ಮಾನ ಮಾಡಬೇಕಾಗುತ್ತದೆ.

      "ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ" ಎಂದು ಸಾಧನಾ ಸಮಾವೇಶದಲ್ಲಿ ಹೇಳುವಾಗಲೇ ಯಡಿಯೂರಪ್ಪ ಗದ್ಗದಿತರಾಗಿದ್ದರು. ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡಿದ್ದ ರಾಜೀನಾಮೆ ಪತ್ರದೊಂದಿಗೆ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದರು. ಹೀಗಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಿಂದ ನೇರವಾಗಿ ರಾಜಭವನಕ್ಕೆ ತೆರಳಿದ ಅವರು, ರಾಜ್ಯಪಾಲರಿಗೆ ಎರಡು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆ ಕೊಟ್ಟ ಬಳಿಕ ರಾಜಭವನದಿಂದ ಹೊರಗೆ ಬಂದು ಮಾತನಾಡಿದರು. ರಾಜೀನಾಮೆ ಪತ್ರದಲ್ಲಿ ಯಡಿಯೂರಪ್ಪ ಅವರು ಏನು ಹೇಳಿದ್ದಾರೆ? ಎಂಬುದು ಮುಂದಿದೆ.

      ರಾಜೀನಾಮೆ ಪತ್ರದಲ್ಲೇನಿದೆ?

      ರಾಜೀನಾಮೆ ಪತ್ರದಲ್ಲೇನಿದೆ?

      ತಮ್ಮ ರಾಜೀನಾಮೆ ಪತ್ರವನ್ನು ಯಡಿಯೂರಪ್ಪ ಅವರು ಕೇವಲ ಎರಡೇ ಸಾಲಿನಲ್ಲಿ ಮುಗಿಸಿದ್ದಾರೆ. "I hereby tender my resignation as the Chief Minister of the state of Karnataka. The same may kindly accepted" ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. "ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಅಂಗೀಕರಿಸಿ" ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ರಾಜೀನಾಮೆ ಸಲ್ಲಿಸುವಾಗ ಯಾವುದೇ ಕಾರಣವನ್ನೂ ಉಲ್ಲೇಖಿಸುವಂತಿಲ್ಲ ಎಂಬ ನಿಯಮವಿದೆ. ಆದರೂ ಯಡಿಯೂರಪ್ಪ ಇಂದು ಸಲ್ಲಿಸಿರುವ ರಾಜೀನಾಮೆ ಪತ್ರ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂಚ ಚಿಕ್ಕದು ಎನ್ನಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ.

      "ರಾಜೀನಾಮೆ ಕೊಡಲು ನನ್ನ ಮೇಲೆ ಯಾವುದೇ ಒತ್ತಡಗಳು ಇರಲಿಲ್ಲ" ಎಂದು ರಾಜಭವನದ ಬಳಿಯೂ ಹಂಗಾಮಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಆದರೆ ರಾಜೀನಾಮೆ ಕೊಡುವುದಕ್ಕಿಂತ ಮೊದಲು ಸಾಧನಾ ಸಮಾವೇಶದಲ್ಲೂ ಯಡಿಯೂರಪ್ಪ ಗದ್ಗದಿರಾಗಿದ್ದರು. ಹೀಗೆ ಯಡಿಯೂರಪ್ಪ ಅವರು ಭಾವನಾತ್ಮಕವಾಗಿದ್ದ ಸನ್ನಿವೇಶ ಬೇರೆಯ ಮುನ್ಸೂಚನೆಯನ್ನು ಕೊಡುತ್ತಿದೆ.

      ರಾಜ್ಯಪಾಲರಾಗಲು ಒಪ್ಪದ ಯಡಿಯೂರಪ್ಪ!

      ರಾಜ್ಯಪಾಲರಾಗಲು ಒಪ್ಪದ ಯಡಿಯೂರಪ್ಪ!

      "ಯಾವುದೇ ಕಾರಣಕ್ಕೂ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ" ಎಂದು ಹಂಗಾಮಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇದು ಕೂಡ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆಯ ಗಂಟೆಯಾಗಿದೆ. ಯಾವುದಾದರು ಒಂದು ರಾಜ್ಯಕ್ಕೆ ಯಡಿಯೂರಪ್ಪ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಲ್ಲಿ ಬಿಜೆಪಿ ಹೈಕಮಾಂಡ್‌ಗೆ ದೊಡ್ಡ ಅಪಾಯ ತಪ್ಪುತ್ತಿತ್ತು. ಆದರೆ "ನಾನು ಸಾಮಾನ್ಯ ಕಾರ್ಯಕರ್ತನಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ಹೀಗಾಗಿ ನಾಳೆಯಿಂದಲೇ ಪಕ್ಷ ಸಂಘಟನೆ ಕೆಲಸ ಆರಂಭಿಸುತ್ತೇನೆ" ಎಂದು ಯಡಿಯೂರಪ್ಪ ಅವರು ದೃಢವಾಗಿ ಹೇಳಿದ್ದಾರೆ.

      ಯಡಿಯೂರಪ್ಪ ಅವರು ಪಕ್ಷ ಸಂಘಟನೆಗೆಯಲ್ಲಿ ತೊಡಗಿಸಿಕೊಂಡಲ್ಲಿ ಬಿಜೆಪಿಯಲ್ಲಿನ ಯಾವುದೇ ಶಾಸಕ ಅಥವಾ ನಾಯಕರಿಗೆ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಳ್ಳುವುದು ಅಸಾಧ್ಯ. ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್ ಮಣಿಸಲು ಅವರು ಸಕ್ರಿಯ ರಾಜಕಾರಣದಲ್ಲಿದ್ದರೆ ಸಾಕು. ಬೇರೆ ಯಾವುದೇ ಅಸ್ತ್ರವನ್ನು ಬಳಸುವ ಅಗತ್ಯವೇ ಇಲ್ಲ. ಇದೀಗ ಸಿಎಂ ಹುದ್ದೆ ರೇಸ್‌ನಲ್ಲಿರುವ ಯಾವುದೇ ನಾಯಕನಿಗೂ ರಾಜ್ಯದಲ್ಲಿ ಬಿಜೆಪಿಗೆ ತಂದುಕೊಡುವ ಶಕ್ತಿ ಇಲ್ಲ ಎಂಬುದು ಹೈಕಮಾಂಡ್‌ಗೂ ಗೊತ್ತಿದೆ. ಹೀಗಾಗಿ ಯಡಿಯೂರಪ್ಪ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದಷ್ಟೂ ಹೈಕಮಾಂಡ್‌ಗೆ ಆತಂಕ ಇದ್ದೆ ಇರುತ್ತದೆ.

      ಸಂಪುಟ ರಚಿಸಲು 2 ತಿಂಗಳು ಬಿಡಲಿಲ್ಲ!

      ಸಂಪುಟ ರಚಿಸಲು 2 ತಿಂಗಳು ಬಿಡಲಿಲ್ಲ!

      ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಬಿಜೆಪಿಗೆ ವರವಾಗುವ ಬದಲು ಶಾಪವಾಗುವ ಸಾಧ್ಯತೆಗಳೇ ಹೆಚ್ಚು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸಾಧನಾ ಸಮಾವೇಶದಲ್ಲಿ ಯಡಿಯೂರಪ್ಪ ತಮ್ಮ ರಾಜೀನಾಮೆ ಘೋಷಣೆ ಮಾಡಿ ಕಣ್ಣೀರು ಹಾಕಿರುವುದು ಅವರ ಮುಂದಿನ ನಡೆಯನ್ನು ಸ್ಪಷ್ಟವಾಗಿ ಸೂಚಿಸಿದೆ.

      ಜೊತೆಗೆ ಹೈಕಮಾಂಡ್ ಮೇಲೆ ಪರೋಕ್ಷ ವಾಗ್ದಾಳಿಯನ್ನೂ ಯಡಿಯೂರಪ್ಪ ಮಾಡಿದ್ದಾರೆ. ಅದು ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಸಂಪುಟ ರಚನೆ ಮಾಡಲು 2 ತಿಂಗಳುಗಳ ಕಾಲ ಅವಕಾಶ ಮಾಡಿಕೊಡಲಿಲ್ಲ ಎಂದಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಂಪುಟ ವಿಸ್ತರಣೆ ಮಾಡದಂತೆ ತಡೆದಿದ್ದು ಬಿಜೆಪಿ ಹೈಕಮಾಂಡ್, ಅದರಲ್ಲೂ ಮೋದಿ ಹಾಗೂ ಅಮಿತ್ ಶಾ ಜೋಡಿ ಎಂಬ ಅರ್ಥ ಕೊಡುವಂತಿದೆ.

      ಹೀಗಾಗಿ ದೆಹಲಿ ಪ್ರವಾಸದ ನಂತರ ಶುರುವಾಗಿ ಇಂದು ರಾಜೀನಾಮೆ ಕೊಡುವವರೆಗೆ ಎಲ್ಲವನ್ನೂ ಅಳೆದು ತೂಗಿ ಯಡಿಯೂರಪ್ಪ ಅವರು ಮಾಡಿ ಮುಗಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಇಂತಹುದೇ ಪರಿಸ್ಥಿತಿಯನ್ನು ಯಡಿಯೂರಪ್ಪ ಎದುರಿಸಿ ಗೆದ್ದಿದ್ದಾರೆ. ಹೀಗಾಗಿ ಇಂದು ಸಾಧನಾ ಸಮಾವೇಶದಲ್ಲಿ ಮಾತನಾಡಿದ್ದು, ಕೇವಲ ಎರಡು ಸಾಲುಗಳ ರಾಜೀನಾಮೆ ಪತ್ರ ಕೊಟ್ಟಿದ್ದು ಹಾಗೂ ನಾನು ಸಕ್ರಿಯ ರಾಜಕೀಯದಿಂದ ದೂರವಾಗುವುದಿಲ್ಲ ಎಂಬುದು ಅವರ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದೆ.

      ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಅವರನ್ನು ಹೈಕಮಾಂಡ್ ಬದಲಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಸ್ಥಳೀಯ ಲೀಡರ್‌ಗಳು ಇರುವುದು ಬೇಡವಾಗಿದೆ. ಈ ಎಲ್ಲದರ ಫಲಿತಾಂಶವನ್ನು ಇನ್ನು ಎರಡು ವರ್ಷಗಳ ಬಳಿಕ ವಿಧಾನಸಭೆ ಚುನಾವಣೆ ಅಥವಾ ಅದರ ನಂತರ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಣಬಹುದಾಗಿದೆ. ಆಗಲೇ ಯಡಿಯೂರಪ್ಪ ಅವರ ಎರಡು ಸಾಲಿನ ರಾಜೀನಾಮೆ ಪತ್ರದ ರಹಸ್ಯವೂ ಬದಲಾಗುತ್ತದೆ!

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+