ಮುಖ್ಯಮಂತ್ರಿ ಬದಲಾವಣೆ ಸುದ್ದಿ; ಮೌನ ಮುರಿದ ಯಡಿಯೂರಪ್ಪ!
ಬೆಂಗಳೂರು,ಆಗಸ್ಟ್ 10: "ಯಾರು ಏನೇ ಹೇಳಿದರೂ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವುದಾಗಿ" ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬುಧವಾರ ವದಂತಿಗಳಿಗೆ ತೆರೆ ಎಳೆದರು.
ಸಿಎಂ ಬದಲಾವಣೆ ಕಾಂಗ್ರೆಸ್ ಸೃಷ್ಟಿಸಿರುವ ಊಹಾಪೋಹ : ಎಸ್.ಟಿ. ಸೋಮಶೇಖರ್
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ತನ್ನ ಟ್ವಿಟ್ನಲ್ಲಿ ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ. 40% ಸರ್ಕಾರದಲ್ಲಿ 3ನೇ ಸಿಎಂ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ. #PuppetCM ಬಸವರಾಜ ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ ಎಂದು ಹೇಳಿತ್ತು.
ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕೇಶವ ಕೃಪಾದವರು 'ಸಂಘಪರಿವಾರಿ'ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ. ಆಡಿಸಿ ನೋಡು ಎಂದು ಗೊಂಬೆಯಂತಿದ್ದ ಬಸವರಾಜ ಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಬಿಜೆಪಿ ಹೈಕಮಾಂಡ್. ಈ ಬದಲಾವಣೆ ಯತ್ನ ಸರ್ಕಾರದ ವೈಫಲ್ಯಕ್ಕೋ, 3 ಸಿಎಂ ಎಂಬ ನಿಮ್ಮ ಸಂಪ್ರದಾಯಕ್ಕೋ ಎಂದು ಟ್ವೀಟ್ ಮಾಡಿತ್ತು.
ಸಿಎಂ ಹುದ್ದೆಗೆ 'ಕತ್ತಿ ವರಸೆ' ಶುರು
ಈ ಬೆಳವಣಿಗೆ ಮಧ್ಯೆ ಆಗಸ್ಟ್ 9ರಂದು ಆಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ 'ಕತ್ತಿ ವರಸೆ' ಶುರುವಾಗಿದೆ. ಹಾಗಾಗಿ ನೀವು ಕುರ್ಚಿಯಿಂದ ಇಳಿಯಲು ದಿನಗಳನ್ನಲ್ಲ, ಗಂಟೆಗಳನ್ನು ಎಣಿಸುತ್ತಿದ್ದೀರಿ ಎನಿಸುತ್ತಿದೆ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಬದಲಾವಣೆ ಎಂಬ ಬೆಳವಣಿಗೆಗೆ ಕಾರಣವೇನು, ನಿಮ್ಮ ಆಡಳಿತ ವೈಫಲ್ಯವೇ? ಅಥವಾ #BJPvsBJP ಕಾದಾಟವೇ? ಅಥವಾ ಯಡಿಯೂರಪ್ಪನವರ ಕೋಪವೇ? ಎಂದು ಹೇಳಿತ್ತು.
3ನೇ ಸಿಎಂ ಪ್ರತಿಷ್ಠಾಪನೆಗೆ ಕಸರತ್ತು
ಮುಂದುವರಿದು ರಾಜ್ಯಕ್ಕೆ ಸಂಕಟ, ಬಿಜೆಪಿಗೆ ಅಧಿಕಾರದಾಟ. ಅತಿವೃಷ್ಟಿಯಿಂದ ಜನತೆ ಪರದಾಡುತ್ತಿರುವಾಗ ಸಮರೋಪಾಧಿಯಲ್ಲಿ ನೆರವಿನ ಕಾರ್ಯ ಮಾಡುವುದನ್ನು ಬಿಟ್ಟು ಕರ್ನಾಟಕ ಬಿಜೆಪಿ ಪಕ್ಷ 3ನೇ ಸಿಎಂ ಪ್ರತಿಷ್ಠಾಪನೆಗೆ ಕಸರತ್ತು ನಡೆಸುತ್ತಿದೆ. ರಾಜ್ಯ ಸಂಕಷ್ಟಕ್ಕೆ ಎದುರಾದಾಗಲೆಲ್ಲ ಬಿಜೆಪಿ ರಾಜಕೀಯದಾಟಕ್ಕೆ ಚಾಲನೆ ಕೊಡುತ್ತದೆ ಎಂದು ಹೇಳಿದೆ. ಬೊಮ್ಮಾಯಿಯವರ ಆಡಳಿತದಲ್ಲಿ 'ಆಕ್ಷನ್' ಇಲ್ಲದಕ್ಕೆ ಸಿಎಂ ಬದಲಾವಣೆಯ 'ರಿಯಾಕ್ಷನ್' ಸೃಷ್ಟಿಯಾಗಿದೆ. ಪ್ರವೀಣ್ ಹತ್ಯೆ, ಕಾರ್ಯಕರ್ತರ ರಾಜೀನಾಮೆ, ಬಲಪಂತೀಯ ಸಂಘಟನೆಗಳ ಆಕ್ರೋಶ, ಗೃಹಸಚಿವರ ಮನೆ ಮೇಲೆ ದಾಳಿ, ಎಲ್ಲವೂ ಬಿಜೆಪಿಯ ಒಳಗಿನ ಅತೃಪ್ತ ಆತ್ಮಗಳ ಕುರ್ಚಿ ಕಸಿಯುವ ಪೂರ್ವನಿಯೋಜಿತ ಕೃತ್ಯಗಳಾಗಿರಬಹುದೇ ಬಸವರಾಜ ಬೊಮ್ಮಾಯಿ ಅವರೇ ಎಂದು ಕೇಳಿದೆ.
ಮಾಜಿ ಶಾಸಕ ಸುರೇಶ್ ಗೌಡ ಕನ್ಫರ್ಮೇಷನ್
ಹಿಂದೆ ಸಿ. ಟಿ. ರವಿ, ಸಚಿವ ಅಶ್ವಥ್ ನಾರಾಯಣ, ಆರ್. ಅಶೋಕ, ಉಮೇಶ್ ಕತ್ತಿ, ಬಸವನಗೌಡ ಯತ್ನಾಳ್ ಅವರು ಸಿಎಂ ಆಸೆಯನ್ನು ಬಿಚ್ಚಿಟ್ಟಿದ್ದರು. ಈಗ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸಿಎಂ ಬದಲಾವಣೆಯ ಸುದ್ದಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಜನೋತ್ಸವ ಮಾಡಲಾಗದ ಬಸವರಾಜ ಬೊಮ್ಮಾಯಿ ಅವರು ಈಗ ಆತಂಕೋತ್ಸವ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿತ್ತು. ಶಾಸಕ ಯತ್ನಾಳ್ ಅವರು ಬಿಜೆಪಿಯ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್ ಇದ್ದಂಗೆ. ಯಡಿಯೂರಪ್ಪ ಅವರ ಪದಚ್ಯುತಿಯ ಬಗ್ಗೆ ಹೇಳಿದ್ದು ನಿಜವಾಗಿತ್ತು. ಈಗ ಬೊಮ್ಮಾಯಿಯವರ ಬಗ್ಗೆ ಹೇಳುವುದೂ ನಿಜವಾಗುವಂತಿದೆ. ಅವರು ಹೇಳುವಂತೆ ಅಮಿತ್ ಶಾ ಅವರು #PuppetCM ಬದಲಾವಣೆಯ ನಿರ್ಣಯ ತೆಗೆದುಕೊಳ್ಳುವ 'ಕಾಲ' ಸನ್ನಿಹಿತವಾಗಿದೆ ಅಲ್ಲವೇ ಬಿಜೆಪಿ ಎಂದು ಕೇಳಿದೆ.
ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆ
ಇದಕ್ಕೆ ಬಿಜೆಪಿ ಪಕ್ಷದ ಸಚಿವರು ಸಿಎಂ ಬದಲಾವಣೆ ಸುದ್ದಿಯನ್ನು ತಿರಸ್ಕರಿಸಿದ್ದರು. ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ. ಸುಳ್ಳು ಆರೋಪ ಮಾಡುವುದೇ ಕಾಂಗ್ರೆಸ್ ಕೆಲಸವಾಗಿದೆ. ಬಿಜೆಪಿ ಕುಟುಂಬ ಆಧಾರಿತ ಪಕ್ಷವಲ್ಲ. ಸಿಎಂ ಬೊಮ್ಮಾಯಿ ಪ್ರಮಾಣಿಕ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.