ಯಡಿಯೂರಪ್ಪ ಆಡಿಯೋ ವಿವಾದ; ಬಿಜೆಪಿಯ ಸ್ಪಷ್ಟನೆಗಳು
ಬೆಂಗಳೂರು, ನವೆಂಬರ್ 03 : ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಗ್ಗೆ ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಆಡಿಯೋ ವಿಚಾರವನ್ನು ರಾಜಭವನಕ್ಕೆ ತಲುಪಿಸಿದ್ದು, ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಮಾಡಿದೆ.
ಹುಬ್ಬಳ್ಳಿಯಲ್ಲಿ ಉಪ ಚುನಾವಣೆ ಬಗ್ಗೆ ನಡೆಸಿದ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ ಎಂಬ ಆಡಿಯೋ ಚರ್ಚೆಯ ಮೂಲ ವಸ್ತು. ಕೆಲವು ಖಾಸಗಿ ವಾಹಿನಿಗಳ ಸಂದರ್ಶನದಲ್ಲಿ "ಆಡಿಯೋದಲ್ಲಿರುವ ಧ್ವನಿ ನನ್ನದೇ" ಎಂದು ಯಡಿಯೂರಪ್ಪ ಹೇಳಿಕೊಂಡಿದ್ದಾರೆ.
ಆಪರೇಷನ್ ಕಮಲದ ಬಗ್ಗೆ ಆಡಿಯೋ ಬಹಿರಂಗವಾಗುತ್ತಿದ್ದಂತೆ ಕರ್ನಾಟಕ ಬಿಜೆಪಿ ಸ್ಪಷ್ಟನೆ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಆಡಿಯೋ ತುಣಕನ್ನು ಹಿಡಿದು ಸರ್ಕಾರ ವಜಾ ಮಾಡಲು ರಾಜ್ಯಪಾಲರ ಮೊರೆ ಹೋಗಿರುವುದು ಕಾಂಗ್ರೆಸ್ ನಾಯಕರ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. "ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಕನಸು ಬಿಟ್ಟು ನಿಜವಾದ ಜನಸೇವೆ ಮಾಡಲಿ" ಎಂದು ಸಲಹೆ ನೀಡಿದ್ದಾರೆ.

ಆಡಿಯೋ, ವಿಡಿಯೋ ರಾಜಕೀಯ
ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನಿಸಿ ರಾಜಭವನಕ್ಕೆ ಹೋಗಿ ಬಿ. ಎಸ್. ಯಡಿಯೂರಪ್ಪ ಸರ್ಕಾರ ವಜಾ ಮಾಡಲು ಆಗ್ರಹಿಸಿ ವರದಿ ಸಲ್ಲಿಸಿರುವುದು ಹಾಸ್ಯಾಸ್ಪ, ಆಧಾರ ರಹಿತ ಮತ್ತು ಅರ್ಥಹೀನವಾಗಿದೆ. ಕಾಂಗ್ರೆಸ್ಗೆ ಈ ರೀತಿಯ ಸುಳ್ಳು ಆಧಾರ, ಕಳ್ಳ ಆಡಿಯೋ ವಿಡಿಯೋಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವುದು ಹವ್ಯಾಸವಾಗಿದೆ ಎಂದು ಬಿಜೆಪಿ ದೂರಿದೆ.

ರಾಜಕೀಯ ಷಡ್ಯಂತ್ರವಾಗಿದೆ
ಅನರ್ಹ ಶಾಸಕರ ಪ್ರಕರಣ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವಾಗ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವುದು ರಾಜಕೀಯ ಷಡ್ಯಂತ್ರ ಮಾತ್ರವಲ್ಲದೇ ನ್ಯಾಯಾಲಯಕ್ಕೂ ಚ್ಯುತಿ ತರುವ ಅತ್ಯಂತ ಕೆಟ್ಟ ವಿಷಯವಾಗಿದೆ. ನಾಡಿನ ಜನರಲ್ಲಿ ಈ ರೀತಿ ಇಲ್ಲಸಲ್ಲದ ಗೊಂದಲ ಮಾಡುವುದನ್ನು ಇಲ್ಲಿಗೆ ಬಿಟ್ಟು, ರಾಜಕೀಯ ಪಕ್ಷವಾಗಿ ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕರ್ತವ್ಯ ಮಾಡಿದರೆ ಒಳ್ಳೆಯದು.

ಅನಗತ್ಯ ರದ್ದಾಂತ ಮಾಡಿದ್ದು ಈಗ ಇತಿಹಾಸ
ಸುಳ್ಳು ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್ ನಾಯಕರುಗಳ ದಿನನಿತ್ಯದ ಚಾಳಿಯಾಗಿದ್ದು ಇದು ಅವರ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಈ ಹಿಂದೆ ಇದೇ ಕಾಂಗ್ರೆಸ್ ನಾಯಕರುಗಳು ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಮಾತನಾಡಿದ ಧ್ವನಿ ಸುರುಳಿ ಬಿಡುಗಡೆ ಮಾಡಿ ಅನಗತ್ಯ ರದ್ದಾಂತ ಮಾಡಿದ್ದು ಈಗ ಇತಿಹಾಸ.

ರಾಜೀನಾಮೆ ಕೊಟ್ಟಿದ್ದರಿಂದ ಸರ್ಕಾರ ಬಂದಿದೆ
ಅನರ್ಹರ ಮತ್ತು ಧ್ವನಿ ಸುರುಳಿ ಬಗ್ಗೆ ಮುಖ್ಯಮಂತ್ರಿಗಳು ಇಂದು ಪತ್ರಿಕೆಗಳಿಗೆ ಮತ್ತು ಮಾಧ್ಯಮಗಳಿಗೆ ಹೇಳಿದ್ದು 17 ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ನಮ್ಮ ಸರ್ಕಾರ ಬಂದಿದೆ. ಅವರುಗಳು ರಾಜೀನಾಮೆ ಏಕೆ ಕೊಟ್ಟರು. ಯಾರಿಗಾಗಿ ಕೊಟ್ಟರು ಎಂಬುದು ಇಲ್ಲಿ ಅನಾವಶ್ಯಕ.
ಈ ವಿಷಯವು ಈಗಾಗಲೇ ಸರ್ವೋಚ್ಚ ನ್ಯಾಯಾಲಯದಲ್ಲಿರುವುದು ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ತೀರ್ಪು ಬರುವುದಕ್ಕೆ ಮೊದಲು ಚರ್ಚೆ ಮಾಡುವುದು ಸರಿಯಲ್ಲ ಮತ್ತು ಅನಗತ್ಯ. ಮುಂದಿನ ದಿನಗಳಲ್ಲಿ ಇವರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ.

ಕಾನೂನಿನ ಜ್ಞಾನದ ಬಗ್ಗೆ ಅನುಮಾನ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿದ್ದು ಕಾನೂನಿನಲ್ಲಿ ಯಾವುದೇ ಮೌಲ್ಯವಲ್ಲದ ವಿಷಯದ ಬಗ್ಗೆ ಮಾತನಾಡುವುದು ಅವರ ಕಾನೂನಿನ ಜ್ಞಾನದ ಬಗ್ಗೆ ಜನರಿಗೆ ಅನುಮಾನ ಮೂಡಿಸುತ್ತದೆ. ಇಂತಹ ಧ್ವನಿ ಸುರುಳಿ ಮತ್ತು ಜನರ ಹೇಳಿಕೆಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಕೊಟ್ಟ ತೀರ್ಪುಗಳನ್ನು ಒಮ್ಮೆ ಅವಲೋಕಿಸಿ ನೋಡಲಿ ಆಗ ಅವರಿಗೆ ಧ್ವನಿ ಸುರುಳಿಯ ಕಾನೂನಿನ ಮೌಲ್ಯ ಗೊತ್ತಾಗುತ್ತದೆ.












Click it and Unblock the Notifications