ದೆಹಲಿಯಲ್ಲಿ ಬಿಎಸ್ವೈ ಜೊತೆ 'ಇಡೀ' ವರಿಷ್ಠರ ತಂಡದ ಕ್ಲೋಸ್ ಡೋರ್ ಮೀಟಿಂಗ್: ನಾಯಕತ್ವ ಬದಲಾವಣೆಯ ಗುಮ್ಮ!
ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ತಮ್ಮ ಪಕ್ಷದ ಹೈಕಮಾಂಡ್ ಗೆ ಮನವರಿಕೆ ಮಾಡಿ..ಮಾಡಿ ಸುಸ್ತಾಗಿ ಹೋಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದೆಹಲಿಗೆ ಬಂದು ಕಾಣುವಂತೆ ವರಿಷ್ಠರ ಸೂಚನೆ ಬರುತ್ತದೆ. ಅದರಂತೆ, ಭಾನುವಾರ (ಜ 10) ಬೆಳಗ್ಗಿನ ವಿಮಾನದಲ್ಲಿ ಬಿಎಸ್ವೈ ದೆಹಲಿಗೆ ಪ್ರಯಾಣಿಸುತ್ತಾರೆ.
ದೆಹಲಿಗೆ ತೆರಳುವ ವೇಳೆ ಖುಷಿಯಲ್ಲೇ ಇದ್ದ ಮುಖ್ಯಮಂತ್ರಿಗಳು, ವರಿಷ್ಠರ ಜೊತೆಗಿನ ಮಾತುಕತೆಯ ನಂತರ ಅವರಲ್ಲಿ ಎಂದಿನ ಲವಲವಿಕೆ ಕಾಣೆಯಾಗುತ್ತದೆ. ಇನ್ನು, ಅದೇ ವೇಳೆ, ಬಿ.ವೈ.ವಿಜಯೇಂದ್ರ ಕೂಡಾ ದೆಹಲಿಯಲ್ಲಿ ಇದ್ದದ್ದು ಹಲವು ಊಹಾಪೋಹ ಸುದ್ದಿಗಳಿಗೆ ನಾಂದಿ ಹಾಡುತ್ತದೆ.
ಯಾರಿಂದಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು, ಅವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಲಬೇಕು ಎನ್ನುವುದರ ವಿಚಾರದಲ್ಲಿ ಹಲವು ಬಾರಿ ದೆಹಲಿಗೆ ಹೋಗಿ ಯಡಿಯೂರಪ್ಪ, ವರಿಷ್ಠರಿಗೆ ವಿವರಿಸಿದ್ದರು. ಆದರೆ, ಅದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ.
ಇದಾದ ನಂತರ, ಶಿವಮೊಗ್ಗದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯ ನಂತರ ಉಸ್ತುವಾರಿ ನೀಡಿದ ಹೇಳಿಕೆಯಿಂದಾಗಿ, ಬಿಎಸೈ ಮತ್ತೆ ಸ್ಟ್ರಾಂಗ್ ಆಗುತ್ತಾರೆ, ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಶುರುವಾಗುತ್ತೆ ಎನ್ನುವಷ್ಟರಲ್ಲಿ ಆ ಸುದ್ದಿ ಮಠ ಸೇರುತ್ತದೆ. ಇವೆಲ್ಲದರ ನಡುವೆ, ಬಿಎಸ್ವೈಗೆ ವರಿಷ್ಠರಿಂದ ಬುಲಾವ್ ಬರುತ್ತದೆ...

ಯಡಿಯೂರಪ್ಪನವರನ್ನು ಯಾತಕ್ಕಾಗಿ ದೆಹಲಿಗೆ ಕರೆಸಿಕೊಳ್ಳಲಾಯಿತು
ಇದರಿಂದಾಗಿ, ಯಡಿಯೂರಪ್ಪನವರನ್ನು ಯಾತಕ್ಕಾಗಿ ದೆಹಲಿಗೆ ಕರೆಸಿಕೊಳ್ಳಲಾಯಿತು ಎನ್ನುವ ಚರ್ಚೆ ಆರಂಭವಾಗುತ್ತದೆ. ಅದರಲ್ಲಿ, ಸಂಪುಟ ವಿಸ್ತರಣೆ, ಗ್ರಾಮ ಪಂಚಾಯಿತಿ ಚುನಾವಣೆ, ಮುಂಬರುವ ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಂತಿಮಗೊಳಿಸುವ ವಿಚಾರ ಇರಬಹುದೇ ಎನ್ನುವ ಅಂಶ ಚರ್ಚೆಯಲ್ಲಿ ಪ್ರಮುಖ ಅಂಶಗಳಾಗಿರುತ್ತದೆ. ಆದರೆ, ಇವೆಲ್ಲವನ್ನೂ ಮೀರಿ, ಇನ್ನೊಂದು ವಿಚಾರ ಇರಬಹುದೇ ಎನ್ನುವುದು, ವರಿಷ್ಠರ ಭೇಟಿಯ ನಂತರ ಉದ್ಭವವಾಗುವ ಪ್ರಶ್ನೆಯಾಗುತ್ತದೆ..

ಉಸ್ತುವಾರಿ ಅರುಣ್ ಸಿಂಗ್ ಕೂಡಾ ಸ್ಪಷ್ಟನೆ
ಮುಖ್ಯಮಂತ್ರಿ ಬದಲಾವಣೆ ಎನ್ನುವ ವಿಚಾರ, ಸದ್ಯದ ರಾಜ್ಯ ರಾಜಕೀಯದಲ್ಲಿ ಹೊಸ ವಿಚಾರವೇನೂ ಅಲ್ಲ. ಮುಖ್ಯಮಂತ್ರಿಗಳು ಹಲವು ಬಾರಿ ಸ್ಪಷ್ಟ ಪಡಿಸಿದ್ದರೂ, ಉಸ್ತುವಾರಿ ಅರುಣ್ ಸಿಂಗ್ ಕೂಡಾ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರೂ, ಅವರ ಹೇಳಿಕೆಗಳು, ಸುಮ್ಮನೆ ಮೂಗಿಗೆ ತುಪ್ಪ ಒರೆಸುವ ಕೆಲಸವೇ ಎನ್ನುವ ಸಂಶಯ ಕಾಡುವುದಕ್ಕೆ ಕಾರಣ ಇಲ್ಲದೇ ಇರುವುದಿಲ್ಲ.

ರಾಜ್ಯದ ಎಲ್ಲಾ ಆಗುಹೋಗುಗಳ ಮೇಲೆ, ವರಿಷ್ಠರ ಸಂಪೂರ್ಣ ಹಿಡಿತ
ಸಂಪುಟ ವಿಸ್ತರಣೆ ಎನ್ನುವುದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದು ಉಸ್ತುವಾರಿ ಹೇಳಿದ್ದರೂ, ಹೈಕಮಾಂಡ್ ಅನುಮತಿ ಕೊಟ್ಟರೆ ಆ ಕೆಲಸ ನಡೆಯುತ್ತೆ ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ಇದರಿಂದ, ರಾಜ್ಯದ ಎಲ್ಲಾ ಆಗುಹೋಗುಗಳ ಮೇಲೆ, ವರಿಷ್ಠರು ಸಂಪೂರ್ಣ ಹಿಡಿತವನ್ನು ಮುಂದುವರಿಸಿದ್ದಾರೆ ಎನ್ನುವಷ್ಟರಲ್ಲಿ ಸಿಎಂಗೆ ದೆಹಲಿಯಿಂದ ಬುಲಾವ್ ಬರುತ್ತದೆ.

ಬಿಎಸ್ವೈ ಜೊತೆ ವರಿಷ್ಠರ ತಂಡದ ಕ್ಲೋಸ್ ಡೋರ್ ಮೀಟಿಂಗ್
ಸಾಮಾನ್ಯವಾಗಿ, ಅಮಿತ್ ಶಾ, ನಡ್ಡಾ ಅವರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಭೇಟಿಯಾಗುವ ಸಿಎಂ ಯಡಿಯೂರಪ್ಪನವರನ್ನು ಇಂದು ವರಿಷ್ಠರ ತಂಡವೇ ಭೇಟಿಯಾಗಿತ್ತು. ಸಿಎಂ ಜೊತೆ ಸುಮಾರು ಮೂವತ್ತು ನಿಮಿಷ ನಡೆದ ಕ್ಲೋಸ್ ಡೋರ್ ಮೀಟಿಂಗ್ ನಲ್ಲಿ, ಅಮಿತ್ ಶಾ, ಜೆ.ಪಿ.ನಡ್ಡಾ ಮತ್ತು ಅರುಣ್ ಸಿಂಗ್ ಭಾಗಿಯಾಗಿದ್ದರು. ಆ ವೇಳೆ, ನಾಯಕತ್ವ ಬದಲಾವಣೆಯ ವಿಚಾರ ಪ್ರಮುಖವಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿದೆ.

ವಿಜಯೇಂದ್ರ ಅದೇ ವೇಳೆ ರಾಜಧಾನಿಯಲ್ಲಿ ಕಾಣಿಸಿಕೊಂಡಿದ್ದಾರೆ
ನಾಯಕತ್ವ ಬದಲಾವಣೆ, ಶಾಸಕರು ಮತ್ತು ಸಚಿವರಿಂದ ಬರುತ್ತಿರುವ ದೂರಿನ ವಿಚಾರ ಯಡಿಯೂರಪ್ಪನವರ ಮುಂದೆ ಇಡಲಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿದೆ. ವೈಯಕ್ತಿಕ ವಿಚಾರಕ್ಕಾಗಿ ದೆಹಲಿಗೆ ಬಂದಿದ್ದೆ ಎಂದು ವಿಜಯೇಂದ್ರ ಅದೇ ವೇಳೆ ರಾಜಧಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಸಂಪುಟ ವಿಸ್ತರಣೆ ವಿಚಾರ ಅತ್ಲಾಗಿರಲಿ, ನಾಯಕತ್ವ ಬದಲಾವಣೆಯ ವಿಚಾರದಲ್ಲಿ ವರಿಷ್ಠರು ಯಡಿಯೂರಪ್ಪನವರನ್ನು ದೆಹಲಿಗೆ ಕರೆಸಿಕೊಂಡರೇ ಎನ್ನುವ ಪ್ರಶ್ನೆಗೆ ಉತ್ತರ ಸದ್ಯದಲ್ಲೇ ಸಿಕ್ಕರೂ ಸಿಗಬಹುದು.












Click it and Unblock the Notifications