ರೈಲ್ವೆ ಇಲಾಖೆ ಜೊತೆ ಸಿಎಂ ಸಭೆ; ಯಾವ ಯೋಜನೆಗೆ ಒಪ್ಪಿಗೆ
ಬೆಂಗಳೂರು, ಸೆಪ್ಟೆಂಬರ್ 10 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ವಿವಿಧ ರೈಲ್ವೆ ಯೋಜನೆ ಮತ್ತು ಮೆಟ್ರೋ ಮಾರ್ಗದ ಕುರಿತು ಸಭೆಯಲ್ಲಿ ವಿವರವಾದ ಚರ್ಚೆ ನಡೆದಿದೆ.
ಸೋಮವಾರ ಸಂಜೆ ಯಡಿಯೂರಪ್ಪ ಅಧಿಕಾರಿಗಳ ಸಭೆ ನಡೆಸಿದರು. ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಸಹ ಸಭೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಯೋಜನಗೆಳು ಮತ್ತು ಬೆಂಗಳೂರು ಸಬ್ ಅರ್ಬನ್ ಹಾಗೂ ಮೆಟ್ರೋ ಕಾಮಗಾರಿ ಕುರಿತು ಹಲವು ತೀರ್ಮಾನ ಕೈಗೊಳ್ಳಾಗಿದೆ.
ಬೆಂಗಳೂರು ನಗರದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸಬ್ ಅರ್ಬನ್ ರೈಲು ಯೋಜನೆ ಬಗ್ಗೆ ಚರ್ಚೆ ನಡೆಸಲಾಯಿತು. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಯೋಜನೆ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಲಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಕಾಮಗಾರಿಗಳಿಗೆ ಅಡಚಣೆ ಆಗದಂತೆ ರೈಲ್ವೆ ಇಲಾಖೆಯು ಅಗತ್ಯ ಸಹಕಾರ ನೀಡುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗದ ಆರಂಭಿಕ ಕೆಲಸಕ್ಕೆ ಒಪ್ಪಿಗೆ ಕೊಡಲಾಯಿತು.

ಶಿವಮೊಗ್ಗ ರಿಂಗ್ ರಸ್ತೆ ಬಳಿ ಜಾಗ
ಸಭೆಯಲ್ಲಿ ಶಿವಮೊಗ್ಗ ಔಟರ್ ರಿಂಗ್ ರಸ್ತೆ ಸಮೀಪ ರಸ್ತೆ ನಿರ್ಮಾಣಕ್ಕೆ ರೈಲ್ವೆ ಇಲಾಖೆಗೆ ಜಾಗ ನೀಡಲು ಒಪ್ಪಿಗೆ ನೀಡಲಾಯಿತು.
ಶಿವಮೊಗ್ಗ-ಶಿಕಾರಿಪುರ ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಡುವೆ ಹೊಸ ರೈಲ್ವೆ ಮಾರ್ಗದ ಆರಂಭಿಕ ಕೆಲಸಕ್ಕೆ ಸಭೆಯಲ್ಲಿ ಒಪ್ಪಿಗೆ ಸಿಕ್ಕಿತು.

ಚೆನ್ನೈ ತನಕ ರೈಲು ವಿಸ್ತರಣೆ
ಸಭೆಯಲ್ಲಿ ಶಿವಮೊಗ್ಗ-ಯಶವಂತಪುರ ನಡುವೆ ಸಂಚಾರ ನಡೆಸುತ್ತಿರುವ ಇಂಟರ್ ಸಿಟಿ ರೈಲನ್ನು ಚೆನ್ನೈ ತನಕ ವಿಸ್ತರಣೆ ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಯಿತು.
ಶಿವಮೊಗ್ಗ-ತಿರುಪತಿ ರೈಲು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲು ಒಪ್ಪಿಗೆ ಕೊಡಲಾಯಿತು.

ರೈಲಿನ ಸಮಯ ಬದಲಾವಣೆ
ಶಿವಮೊಗ್ಗ-ಯಶವಂತಪುರ ನಡುವೆ ಸಂಚಾರ ಮಾಡುವ ಶತಾಬ್ದಿ ರೈಲಿನ ಸಮಯ ಬದಲಾವಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಬೀರೂರು-ಶಿವಮೊಗ್ಗ ರೈಲು ಮಾರ್ಗದ ಡಬ್ಲಿಂಗ್ ಕಾಮಗಾರಿ ಸದ್ಯದಲ್ಲೇ ಆರಂಭಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ
ನೀಡಿದರು.

ಸಬ್ ಅರ್ಬನ್ ರೈಲು
ಬೆಂಗಳೂರು ನಗರದಲ್ಲಿ ಜಾರಿಗೆ ತರಲು ಉದ್ದೇಶಸಿರುವ ಸಬ್ ಅರ್ಬನ್ ರೈಲು ಯೋಜನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಯೋಜನೆ ಜಾರಿಗೆ ತರಲು ಬೆಂಗಳೂರು ರೈಲು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗುತ್ತಿದೆ.












Click it and Unblock the Notifications