'ಸಿಡಿ' ಸ್ಫೋಟ: ನಾಳೆ (ಮಾ. 03) ತುರ್ತು ಸಂಪುಟ ಸಭೆ ಕರೆದ ಯಡಿಯೂರಪ್ಪ!
ಬೆಂಗಳೂರು, ಫೆ. 02: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆಯ ಸಿಡಿ ಬಾಂಬ್ ಸ್ಫೋಟವಾದ ಬೆನ್ನಲ್ಲಿಯೇ ನಾಳೆ ತುರ್ತು ಸಂಪುಟ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೆದಿದ್ದಾರೆ. ನಾಳೆ (ಮಾ. 03) ರಂದು ಮಧ್ಯಾಹ್ನ 2ಕ್ಕೆ ವಿಧಾನಸೌಧದಲ್ಲಿ ಸಂಪುಟ ಸಭೆಯಲ್ಲಿ ನಡೆಯಲಿದ್ದು, ಎಲ್ಲ ಸಚಿವರು ಕಡ್ಡಾಯವಾಗಿ ಹಾಜರಾಗುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾರ್ಚ್ 08 ರಂದು ಮಹತ್ವದ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮೊದಲು ನಾಡಿದ್ದು ಮಾರ್ಚ್ 04ರಂದು ಬಜೆಟ್ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮೊದಲು ರಾಸಲೀಲೆಯ ಸಿಡಿ ಬಾಂಬ್ ಸ್ಫೋಟಿಸಿರುವುದು ಇಡೀ ಬಿಜೆಪಿ ಸರ್ಕಾರವನ್ನು ಮುಜುಗುರಕ್ಕೀಡು ಮಾಡಿದೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ; ಇದ್ದಕ್ಕಿದ್ದಂತೆ ಒಂದಾದ ಡಿಕೆಶಿ, ಸಿದ್ದರಾಮಯ್ಯ
ನಾಳೆ ಮಹತ್ವದ ಸಂಪುಟ ಸಭೆ
ಹೀಗಾಗಿ ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಬೇಕಾ? ಎಂಬುದರ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಆದರೆ ಬಜೆಟ್ ಅಧಿವೇಶನಕ್ಕೂ ಮೊದಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆಯದೇ ಅಧಿವೇಶ ಆರಂಭಿಸಿದಲ್ಲಿ ಅದು ಮತ್ತೊಂದು ಹಂತದ ಸಮಸ್ಯೆಗೆ ಕಾರಣವಾಗಲಿದೆ. ಹೀಗಾಗಿ ನಾಳೆ ನಡೆಯುವ ಸಂಪುಟ ಮಹತ್ವ ಪಡೆದುಕೊಂಡಿದೆ.
ಸಂಪುಟ ಸಭೆಗೂ ಮೊದಲೇ ರಾಜೀನಾಮೆ!
ನಾಳೆ ನಡೆಯುವ ಸಂಪುಟ ಸಭೆಗೂ ಮೊದಲೇ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆಯಲು ಸಿಎಂ ಯಡಿಯೂರಪ್ಪ ಅವರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಈಗಾಗಲೇ ರಾಜ್ಯ ಬಿಜೆಪಿ ಘಟಕ ಕೂಡ ತಕ್ಷಣವೇ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡ ರಾಜೀನಾಮೆ ಕೊಡುವಂತೆ ಈಗಾಗಲೇ ಸೂಚಿಸಿದ್ದಾರೆ. ಆ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಆಗುವ ಕಳಂಕವನ್ನು ಆದಷ್ಟು ಬೇಗ ತೊಳೆದುಕೊಳ್ಳಲು ಬಿಜೆಪಿ ಮುಂದಾಗಿದೆ.
ಕಾವೇರಿಗೆ ಹಿಂದಿರುಗಿದ ಬಳಿಕ ಮಾಹಿತಿ
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಬರುವವರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಸಲೀಲೆ ಸಿಡಿ ಬಿಡುಗಡೆ ಆಗಿರುವ ಸಂಪೂರ್ಣ ವಿವರ ತಿಳಿದಿರಲಿಲ್ಲ ಎಂಬ ಮಾಹಿತಿ ಬಂದಿದೆ. ಬಜೆಟ್ ಸಭೆಯನ್ನು ಅತ್ಯಂತ ಗಂಭೀರವಾಗಿ ಯಡಿಯೂರಪ್ಪ ಅವರು ಪರಿಗಣಿಸುತ್ತಾರೆ. ಅಂತಹ ಸಂದರ್ಭದಲ್ಲಿ ಯಾರಾದರೂ ಡಿಸ್ಟರ್ಬ್ ಮಾಡಿದರೆ ಸಿಎಂ ರೇಗುತ್ತಾರೆ. ಹೀಗಾಗಿ ಈ ವಿಚಾರವನ್ನು ಅವರ ಗಮನಕ್ಕೆ ತರಲಾಗಿರಲಿಲ್ಲ ಎಂಬ ಮಾಹಿತಿ ಬಂದಿದೆ. ಆದರೆ ಕಾವೇರಿಗೆ ತೆರಳಿದ ಬಳಿಕ ಪ್ರಾಥಮಿಕ ಮಾಹಿತಿಯನ್ನು ಸಿಎಂ ಯಡಿಯೂರಪ್ಪ ಪಡೆದುಕೊಂಡರಂತೆ.
ರಾಜೀನಾಮೆ ಕೊಟ್ಟರೂ ಅಧಿವೇಶನದಲ್ಲಿ ಪ್ರಸ್ತಾಪ
ಒಂದೊಮ್ಮೆ ಮಾ. 04 ರಂದು ಆರಂಭವಾಗುವ ಬಜೆಟ್ ಅಧಿವೇಶನಕ್ಕೂ ಮೊದಲೇ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟರೂ ಕಾಂಗ್ರೆಸ್ ಸದಸ್ಯರು ಈ ವಿಚಾರವನ್ನು ಉಭಯ ಸದನಗಳಲ್ಲಿ ಪ್ರಸ್ತಾಪಿಸದೇ ಇರುವುದಿಲ್ಲ. ಯಾಕೆಂದರೆ ತಮ್ಮ ಹುದ್ದೆಯ ಪ್ರಭಾವ ಬೀರಿ ಸಚಿವರು ಯುವತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವಳಿಗೆ ಆಮೀಷ ಒಡ್ಡಿದ್ದಾರೆ. ಲೈಂಗಿಕವಾಗಿ ಬಳಸಿಕೊಂಡ ಬಳಿಕ ಜೀವ ಬೆದರಿಕೆ ಹಾಕಿದ್ದಾರೆಂದು ದೂರು ದಾಖಲಾಗಿದೆ.
ಆ ದೂರನ್ನು ಉಲ್ಲೇಖಿಸಿ ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪಿಸುತ್ತಾರೆ. ಆ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೊಡುವಂತೆ ಸ್ಪೀಕರ್ ಅವರ ಅನುಮತಿ ಕೇಳುತ್ತಾರೆ. ಚರ್ಚೆಗೆ ಅನುಮತಿ ಸಿಕ್ಕರೂ, ಸಿಗದಿದ್ದರೂ ಬಿಜೆಪಿ ಸರ್ಕಾರಕ್ಕೆ ಮುಜುಗುರ ತಪ್ಪಿದ್ದಲ್ಲ. ಹೀಗಾಗಿ ಆದಷ್ಟು ಬೇಗ ಅವರ ರಾಜೀನಾಮೆ ಪಡೆದು ಪಕ್ಷಕ್ಕಾಗುವ ಮುಜುಗುರವನ್ನು ಬಿಜೆಪಿ ಪಡೆಯುವುದು ಖಚಿತ ಎಂಬ ಮಾಹಿತಿ ಬಂದಿದೆ.