ಮೋದಿಯ ಭೇಟಿಯಾದರೂ ಕೊಡಗು ವಿಷಯ ಮಾತನಾಡಲಿಲ್ಲ ಯಡಿಯೂರಪ್ಪ
ಬೆಂಗಳೂರು, ಆಗಸ್ಟ್ 22: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ಭೇಟಿ ಮಾಡಿದ್ದರೂ ಸಹ ಯಡಿಯೂರಪ್ಪ ಅವರು ಕೊಡಗು ವಿಷಯ ಮಾತನಾಡಿಲ್ಲ.
ಹೌದು, ಇಂದು ನವದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಪ್ರಧಾನಿ ಅವರನ್ನು ನೇರವಾಗಿ ಭೇಟಿ ಮಾಡಿದ್ದರು ಆದರೆ ಕೊಡಗು ವಿಷಯ ಪ್ರಸ್ತಾಪಿಸಲಿಲ್ಲ. ಈ ವಿಷಯವನ್ನು ಯಡಿಯೂರಪ್ಪ ಅವರೇ ಹೇಳಿದ್ದಾರೆ.
ಮೋದಿ ಅವರನ್ನು ಭೇಟಿ ಆಗಿದ್ದೆನಾದರೂ ಕೊಡಗಿನ ವಿಷಯ ಪ್ರಸ್ತಾಪಿಸಲು ಸಮಯಾವಕಾಶ ಸಿಗಲಿಲ್ಲ ಎಂದು ಯಡಿಯೂರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೆ ದೈವಾದೀನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿಯನ್ನು ಪಡೆಯಲು ನವದೆಹಲಿಗೆ ತೆರಳಿದ್ದ ಯಡಯೂರಪ್ಪ ಖುದ್ದು ಮೋದಿ ಅವರಿಂದಲೇ ಅಸ್ತಿಯ ಕಳಶ ಪಡೆದರು. ಅದಕ್ಕೂ ಮುಂಚೆ ಮೋದಿ ಅವರೊಂದಿಗೆ ಕೆಲ ಕಾಲ ಕುಶಲೋಪರಿಯನ್ನೂ ನಡೆಸಿದ್ದರು.
ಮೋದಿ ಅವರನ್ನು ಭೇಟಿ ಆಗಲು ತೆರಳಿದ್ದ ಯಡಿಯೂರಪ್ಪ ಅವರು ಕೊಡಗಿನ ವಿಚಾರ ಪ್ರಸ್ತಾಪ ಮಾಡಿ, ವೈಮಾನಿಕ ಸಮೀಕ್ಷೆ ನಡೆಸಿ, ಪರಿಹಾರ ಘೋಷಿಸುವಂತೆ ಮನವಿ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು ಆದರೆ ಇದು ಈಗ ಹುಸಿಯಾಗಿದೆ.
ಯಡಿಯೂರಪ್ಪ ಅವರು ಅಟಲ್ ಜೀ ಅವರ ಅಸ್ತಿಯನ್ನು ದೆಹಲಿಯಿಂದ ರಾಜ್ಯಕ್ಕೆ ತಂದಿದ್ದಾರೆ. ಇಲ್ಲಿ ಅಸ್ತಿ ಕಳಶದ ಮೆರವಣಿಗೆ ನಡೆಸಿ ರಾಜ್ಯದ ಕರ್ನಾಟಕದ ಕಾವೇರಿ, ನೇತ್ರಾವತಿ, ಮಲಪ್ರಭ, ಕೃಷ್ಣ, ಕಾರಂಜಾ, ತುಂಗಭದ್ರಾ, ಶರಾವತಿ, ತುಂಗಾ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ರಾಜ್ಯ ಮಾತ್ರವಲ್ಲದೆ ದೇಶದ ಹಲವು ನದಿಗಳಲ್ಲಿ ವಾಜಪೇಯಿ ಅವರ ಅಸ್ತಿಯ ವಿಸರ್ಜನೆ ನಡೆಯಲಿದೆ.












Click it and Unblock the Notifications