ಯಡಿಯೂರಪ್ಪ ದೆಹಲಿಗೆ: ರಾಜ್ಯ ರಾಜಕಾರಣದ ಬಗ್ಗೆ ಬಿಸಿ-ಬಿಸಿ ಚರ್ಚೆ
ನವದೆಹಲಿ, ಸೆಪ್ಟೆಂಬರ್ 07: ರಾಜ್ಯ ರಾಜಕೀಯ ಬೆಳವಣಿಗೆ, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮತ್ತು ಲೋಕಸಭೆ ಚುನಾವಣೆ ಟಿಕೆಟ್ ಬಗ್ಗೆ ಚರ್ಚೆ ನಡೆಸಲು ನಾಳೆ ಯಡಿಯೂರಪ್ಪ ಅವರು ದೆಹಲಿಗೆ ತೆರಳಲಿದ್ದಾರೆ.
ನಾಳೆಯಿಂದ ಎರಡು ದಿನಗಳ ಕಾಲ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಲೋಕಸಭೆ ಚುನಾವಣೆ ನಡೆಯುತ್ತಿರುವ ಪ್ರಮುಖ ಸಭೆ ಇದಾಗಿದೆ.
ಕಾರ್ಯಕಾರಿಣಿ ಸಭೆಯ ನಡುವೆಯೇ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆ ಟಿಕೆಟ್ ವಿತರಣೆ, ರಾಜ್ಯ ರಾಜಕಾರಣದ ಬೆಳವಣಿಗೆಗಳು ಹಾಗೂ ಇತ್ತೀಚೆಗೆ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಬದಲಾವಣೆ?
ಸಿದ್ದರಾಮಯ್ಯ ಯೂರೋಪ್ಗೆ ತೆರಳಿರುವುದು, ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಮುಖ ತಲೆಗಳ ನಡುವೆ ಎದ್ದಿರುವ ಬಿರುಕು, ರಮೇಶ್ ಜಾರಕಿಹೊಳಿ ಅವರ ಪಕ್ಷ ಬಿಡುವ ಎಚ್ಚರಿಕೆ, ಕುಮಾರಸ್ವಾಮಿ ಅವರ 'ಬಿಜೆಪಿಯಿಂದ ಸರ್ಕಾರ ಅಸ್ಥಿರಗೊಳಿಸುವ ಯತ್ನ' ಹೇಳಿಕೆ ಇವೆಲ್ಲದರ ನಡುವೆ ಯಡಿಯೂರಪ್ಪ ದೆಹಲಿಗೆ ತೆರಳುತ್ತಿರುವುದನ್ನು ಸಮೀಕರಿಸಿ ನೋಡಿದರೆ ರಾಜ್ಯ ರಾಜಕಾರಣದಲ್ಲಿ ಪ್ರಮುಖವಾದುದ್ದೇನೋ ಘಟಿಸಬಹುದು ಎಂಬ ಅನುಮಾನ ಮೂಡುತ್ತಿದೆ.

ಚುನಾವಣೆಗೆ ಬೀಳಲಿದೆಯೇ ಸರ್ಕಾರ?
ಲೋಕಸಭೆ ಚುನಾವಣೆ ವೇಳೆಗೆ ಸರ್ಕಾರವನ್ನು ಉರುಳಿಸಿ ಮತ್ತೆ ಚುನಾವಣೆ ನಡೆಸುವಲ್ಲಿ ಸಫಲವಾದರೆ ಬಿಜೆಪಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರವೂ ಕೇಂದ್ರ ಬಿಜೆಪಿಯ ತಲೆಯಲ್ಲಿದೆ. ಅದಾಗದಿದ್ದ ಪಕ್ಷದಲ್ಲಿ ಶಾಸಕರ ಬೆಂಬಲವನ್ನು ತೆಗೆದುಕೊಂಡು ಸರ್ಕಾರ ರಚಿಸುವ ಉಮೇದು ಸಹ ಬಿಜೆಪಿಗಿದೆ. ಈಗಾಗಲೇ 13 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಗಾಳಿ ಸುದ್ದಿಯೂ ಸಹ ಹರಿದಾಡುತ್ತಿದೆ.

ಬಿಜೆಪಿಯಲ್ಲಿ ಟಿಕೆಟ್ ರಾಜಕಾರಣ ಶುರು
ಈಗಾಗಲೇ ಲೋಕಸಭೆ ಚುನಾವಣೆ ಟಿಕೆಟ್ ಕಾದಾಟ ಕಾಂಗ್ರೆಸ್ಗಿಂತಲೂ ಬಿಜೆಪಿಯಲ್ಲಿ ಬಿರುಸಾಗಿ ನಡೆಯುತ್ತಿದೆ. ಯಡಿಯೂರಪ್ಪ ಅವರ 'ಆಪ್ತರಿಗೆ ಮಣೆ' ನಿಯಮ ಇಲ್ಲೂ ಅನ್ವಯಿಸುವ ಸಾಧ್ಯತೆಯ ಬಗ್ಗೆ ಈಗಾಗಲೇ ಬಿಜೆಪಿಯಲ್ಲಿಯೇ ಗುಸು-ಗುಸು ಶುರುವಾಗಿದೆ. ಈ ನಡುವೆ ಲೋಕಸಭೆ ಚುನಾವಣೆಗೆ ಟಿಕೆಟ್ ವಿತರಿಸುವ ಬಗ್ಗೆ ನಾಳೆ ಅಮಿತ್ ಶಾ ಜತೆ ಮೊದಲ ಹಂತದ ಮಾತುಕತೆ ನಡೆಯಲಿದೆ.

ಲೋಕಸಭೆ ಚುನಾವಣೆಗಾಗಿ ಸಭೆ
ಎರಡು ದಿನ ನಡೆವ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ರಾಜ್ಯದ ಬಿಜೆಪಿ ಪ್ರಮುಖರು ಭಾಗವಹಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ತಯಾರಿಗೆಂದು ನಡೆಯುತ್ತಿರುವ ಈ ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆ ಪ್ರಚಾರ ಮತ್ತು ಟಿಕೆಟ್ ವಿತರಣೆ ನಿಯಮಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.












Click it and Unblock the Notifications