ಪರಿಷತ್ ಸದಸ್ಯರ ಧರಣಿಗೆ ಬೆಂಬಲ ಕೊಟ್ಟ ಯಡಿಯೂರಪ್ಪ
Recommended Video

ಬೆಂಗಳೂರು, ಸೆಪ್ಟೆಂಬರ್ 15 : ವಿಧಾನಪರಿಷತ್ ಸದಸ್ಯರ ಧರಣಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಂಬಲ ನೀಡಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 9 ದಿನಗಳಿಂದ ವಿಧಾನಪರಿಷತ್ ಸದಸ್ಯರು ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದ್ದಾರೆ.
ಶುಕ್ರವಾರ ವಿಕಾಸಸೌಧ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪರಿಷತ್ ಸದಸ್ಯರನ್ನು ಯಡಿಯೂರಪ್ಪ ಭೇಟಿ ಮಾಡಿದರು. 'ಯಾರಿಗೂ ತೊಂದರೆ ಆಗದಂತೆ ಸಂವಿಧಾನದ ಚೌಕಟ್ಟಿನಲ್ಲಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ಖಂಡನೀಯ' ಎಂದರು.

'ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು. ಮುಖ್ಯಮಂತ್ರಿಗಳು ಕೂಡಲೇ ಧರಣಿ ನಿರತರ ಜೊತೆ ಮಾತುಕತೆ ನಡೆಸಿ, ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಬೇಕು' ಎಂದು ಯಡಿಯೂರಪ್ಪ ಒತ್ತಾಯಿಸಿದರು.
ಶಿಕ್ಷಕ ಮತ್ತು ಪದವೀಧರ ಕ್ಷೇತ್ರದಿಂದ ಪರಿಷತ್ತಿಗೆ ಆಯ್ಕೆಯಾದ ಸದಸ್ಯರು ಪಕ್ಷಾತೀತವಾಗಿ ಗಾಂಧಿ ಪ್ರತಿಮೆ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. 13 ಪರಿಷತ್ ಸದಸ್ಯರು ಪಕ್ಷಭೇಧ ಮರೆತು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಧರಣಿ ಕೈ ಬಿಡುವಂತೆ ಮಾಡಿದ ಮನವಿಗೆ ವಿಧಾನಪರಿಷತ್ ಸದಸ್ಯರು ಸ್ಪಂದಿಸಿಲ್ಲ. 9 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ಬೇಡಿಕೆಗಳು
* ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ವೇತನ ತಾರತಮ್ಯ ಬಗೆಹರಿಸಬೇಕು
* ಶಿಕ್ಷಕರ ಕಡ್ಡಾಯ ವರ್ಗಾವಣೆ ನಿಯಮ ಕೈಬಿಡಬೇಕು
* ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಮಧ್ಯೆ ಇರುವ ವೇತನ, ಸೌಲಭ್ಯದ ತಾರತಮ್ಯ ನಿವಾರಣೆ ಮಾಡಬೇಕು
* ಪದವಿಪೂರ್ವ ಉಪನ್ಯಾಸಕರಿಗೆ ನೀಡುವ ವಿಶೇಷ 500 ರೂ. ಭತ್ಯೆಯನ್ನು ಪ್ರೌಢಶಾಲೆಯ ತತ್ಸಮಾನ ಶಿಕ್ಷಕರಿಗೂ ನೀಡಬೇಕು
* 1995ರ ನಂತರ ಆರಂಭವಾದ ಶಾಲಾ-ಕಾಲೇಜುಗಳಿಗೆ ವೇತನಾನುದಾನ ನೀಡಬೇಕು ಮುಂತಾದವು.












Click it and Unblock the Notifications