ಯಡಿಯೂರಪ್ಪ 'ಏಕಪಾತ್ರಾಭಿನಯ': ಸಂಪುಟ ವಿಸ್ತರಣೆ ಯಾವಾಗ?
Recommended Video
ಬೆಂಗಳೂರು, ಆಗಸ್ಟ್ 03: ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ 7 ದಿನಗಳಾಗಿವೆ. ಆದರೆ ಈ ವರೆಗೆ ಸಂಪುಟ ರಚನೆ ಆಗಿಲ್ಲ. 'ಯಡಿಯೂರಪ್ಪ ಸರ್ಕಾರ' ನಿಜವಾಗಿಯೇ ಏಕ ವ್ಯಕ್ತಿ ಸರ್ಕಾರವಾಗಿಬಿಟ್ಟಿದೆ.
ಯಡಿಯೂರಪ್ಪ ಅವರ ಈ ಏಕಪಾತ್ರಾಭಿನಯ ಬೇಗನೇ ಮುಗಿಯುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಆಗಸ್ಟ್ 5ನೇ ತಾರೀಖು ಸಿಎಂ ದೆಹಲಿಗೆ ತೆರಳಲಿದ್ದು, ಸತತ ಮೂರು ದಿನಗಳ ಕಾಲ ಅಲ್ಲಿಯೇ ಉಳಿಯಲಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ.
ಯಡಿಯೂರಪ್ಪ ಅವರು ದೆಹಲಿಯಿಂದ ಮರಳುವುದು ಆಗಸ್ಟ್ 8 ರಂದು. ಮರಳಿದ ನಂತರವೇ ಸಂಪುಟ ಸೇರಲಿರುವವರ ಹೆಸರು ಘೋಷಿಸಲಾಗುತ್ತದೆ. ನಂತರ ಅವರಿಗೆ ಪ್ರಮಾಣ ವಚನ ಬೋಧಿಸಿ ಅವರು ಕಾರ್ಯಾರಂಭ ಮಾಡುವಷ್ಟರಲ್ಲಿ ಇನ್ನಷ್ಟು ಸಮಯ ಕಳೆದು ಹೋಗಿರುತ್ತದೆ.
ವರದಿಗಳ ಪ್ರಕಾರ, ಯಡಿಯೂರಪ್ಪ ಅವರ ಸಂಪುಟ ಸೇರಲಿರುವವರ ಪಟ್ಟಿ ಆಗಸ್ಟ್ 10 ರಂದು ಬಿಡುಗಡೆ ಆಗುತ್ತದೆಯಂತೆ. 'ನಮ್ಮ ಹಣೆಬರಹ ತೀರ್ಮಾನವಾಗುವವರೆಗೂ ಸಂಪುಟ ರಚನೆ ಆಗಬಾರದು' ಎಂದು ಅನರ್ಹ ಶಾಸಕರು ಒತ್ತಾಯ ಮಾಡುತ್ತಿದ್ದಾರೆಂಬ ಸುದ್ದಿಯೂ ಇದೆ. ಇದರ ಭಾಗವಾಗಿಯೇ ಇಂದು ಅನರ್ಹ ಶಾಸಕ ಸುಧಾಕರ್ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಹಾಗಾಗಿ ಸಂಪುಟ ವಿಸ್ತರಣೆ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.
ಯಡಿಯೂರಪ್ಪ, ಬಿ.ಎಲ್.ಸಂತೋಶ್ ಪ್ರತ್ಯೇಕ ಪಟ್ಟಿ
ಯಡಿಯೂರಪ್ಪ ಅವರು ತಮ್ಮ ಪಾಲಿನ ಸಚಿವರ ಪಟ್ಟಿಯನ್ನು ಈಗಾಗಲೇ ಹೈಕಮಾಂಡ್ಗೆ ರವಾನಿಸಿದ್ದಾರೆ. ಇದರ ಜೊತೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಶ್ ಅವರೂ ಸಹ ಪಟ್ಟಿಯೊಂದನ್ನು ಹೈಕಮಾಂಡ್ಗೆ ನೀಡಿದ್ದಾರೆ. ಹೈಕಮಾಂಡ್, ಸಂತೋಶ್ ನೀಡಿರುವ ಪಟ್ಟಿಗೆ ಒಲವು ತೋರಿಸಿರುವ ಕಾರಣ ಯಡಿಯೂರಪ್ಪ ಸಂಪುಟ ವಿಸ್ತರಣೆ ಆಗುತ್ತಿಲ್ಲ.
ಹೈಕಮಾಂಡ್ ಮುಖಂಡರೊಂದಿಗೆ ಸಭೆ
ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಅವರು ಪಕ್ಷದ ಪ್ರಮುಖರಾದ ಅಮಿತ್ ಶಾ, ಜೆಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಅಂತಿಮ ಪಟ್ಟಿಯನ್ನು ಹೊತ್ತು ಬೆಂಗಳೂರಿಗೆ ಬರಲಿದ್ದಾರೆ.
ಆಗಸ್ಟ್ 6 ರಂದು ದೆಹಲಿಯಲ್ಲಿ ಬಿಜೆಪಿ ಸಂಸದರ ಸಭೆ
ದೆಹಲಿಗೆ ತೆರಳುವ ಯಡಿಯೂರಪ್ಪ ಇದೇ ಅವಧಿಯಲ್ಲಿ, ಆಗಸ್ಟ್ 6 ರಂದು ರಾಜ್ಯದ ಬಿಜೆಪಿ ಸಂಸದರ ಸಭೆ ಕರೆದಿದ್ದು, ರಾಜ್ಯದಲ್ಲಿ ಬಾಕಿ ಇರುವ ಕೇಂದ್ರದ ಯೋಜನೆಗಳ ಬಗ್ಗೆ ಚರ್ಚಿಸಿ ಅವುಗಳನ್ನು ಬೇಗನೇ ಮುಗಿಸಲು ಒತ್ತಾಯ ಹೇರುವಂತೆ ಸಂಸದರಿಗೆ ಸೂಚಿಸಲಿದ್ದಾರೆ. ಇದೇ ಸಮಯದಲ್ಲಿ ಪ್ರಧಾನಿ ಮೋದಿ ಭೇಟಿ ಆಗುವ ಸಾಧ್ಯತೆಯೂ ಇದೆ.
ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ
ಬಹು ವರ್ಷಗಳ ನಂತರ ಅಧಿಕಾರ ಹಿಡಿದಿರುವ ಬಿಜೆಪಿಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಡಿಯೂರಪ್ಪ ಹಾಗೂ ಹೈಕಮಾಂಡ್ಗೆ ಇದು ತಲೆನೋವಿನ ವಿಷಯವಾಗಿದೆ. ಸಂಪುಟ ರಚನೆ ತಡವಾಗುತ್ತಿರುವುದಕ್ಕೆ ಇದೂ ಒಂದು ಪ್ರಮುಖ ಕಾರಣವಾಗಿದೆ.