ಚುನಾವಣೆಯಲ್ಲಿ ಅಕ್ರಮ: ಚುನಾವಣಾ ಆಯೋಗಕ್ಕೆ ಯಡಿಯೂರಪ್ಪ ಪತ್ರ
ಬೆಂಗಳೂರು, ಮೇ 22: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ವಿಜಯಪುರ ಜಿಲ್ಲೆಯ ಶೆಡ್ ಒಂದರಲ್ಲಿ ಎಂಟು ವಿವಿ ಪ್ಯಾಟ್ ಮೆಷಿನ್ಗಳು ಹಾಗೂ ಬಾಕ್ಸ್ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವರು ಈ ಪತ್ರ ಬರೆದಿದ್ದಾರೆ.
ಮುಖ್ಯ ಚುನಾವಣಾಧಿಕಾರಿ ಒ.ಪಿ. ರಾವತ್ ಅವರಿಗೆ ಬರೆದಿರುವ ಪತ್ರದಲ್ಲಿ, 'ಕರ್ನಾಟಕದ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದಿದೆ ಎಂಬ ಚುನಾವಣಾ ಆಯೋಗದ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂಬುದು ಈ ಘಟನೆ ಸಾಬೀತುಪಡಿಸಿದೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಶೆಡ್ನಲ್ಲಿ ದೊರೆತದ್ದು ಎಂಟು ವಿವಿ ಪ್ಯಾಟ್ ಸಾಗಿಸುವ ಬಾಕ್ಸ್ಗಳೇ ಹೊರತು ಯಂತ್ರಗಳಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದರು.
ವಿವಿಪ್ಯಾಟ್ಗಳ ಮೇಲೆ ವಿದ್ಯುನ್ಮಾನ ನಿಗಾ ಇರಿಸಲಾಗಿರುತ್ತದೆ. ಅದು ಆರು ಅಂಕಿಯ ಬಾರ್ಕೋಡ್ ಒಳಗೊಂಡಿರುತ್ತದೆ. ವಿಜಯಪುರದಲ್ಲಿ ದೊರೆತ ವಿವಿಪ್ಯಾಟ್ಗಳಲ್ಲಿ ಆರು ಅಂಕಿಯ ಬಾರ್ಕೋಡ್ ಇಲ್ಲ ಎಂದು ಅವರು ವಿವರಣೆ ನೀಡಿದ್ದರು.
ಗುಜರಾತ್ ಮೂಲದ ಜ್ಯೋತಿ ಪ್ಲಾಸ್ಟಿಕ್ಸ್ ಎಂಬ ಕಂಪೆನಿ ಇವುಗಳನ್ನು ತಯಾರಿಸಿತ್ತು. ಇವು ಅಸಲಿ ವಿವಿಪ್ಯಾಟ್ ಬಾಕ್ಸ್ಗಳಂತೆಯೇ ಗುಣಮಟ್ಟ ಹೊಂದಿದ್ದು, ನೋಡಲೂ ಅಸಲಿಯನ್ನೇ ಹೋಲುತ್ತದೆ. ಆದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಇದರ ಬಳಕೆ ಸಾಧ್ಯವಿಲ್ಲ.
ಇವುಗಳನ್ನು ಇಲ್ಲಿ ಇರಿಸಿ ಗೊಂದಲ ಮೂಡಿಸಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications