ಹಿಂದಿ ಸಮರ್ಥನೆ: ಸಾಹಿತಿ ದೊಡ್ಡರಂಗೇಗೌಡ ಕ್ಷಮಾಪಣೆ
ಬೆಂಗಳೂರು, ಜನವರಿ 27: ಹಿಂದಿ ಭಾಷೆಯ ಬಳಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ತುತ್ತಾಗಿದ್ದ ಹಿರಿಯ ಕವಿ, 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ತಮ್ಮ ಹೇಳಿಕೆಗೆ ಕ್ಷಮಾಪಣೆ ಕೋರಿದ್ದಾರೆ.
ಮುಂದಿನ ತಿಂಗಳು ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದೊಡ್ಡರಂಗೇಗೌಡ ಅವರು, ಕನ್ನಡ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿಕೆ ನೀಡಿದ್ದರು. ವಿದೇಶದ ಇಂಗ್ಲಿಷ್ಅನ್ನು ಒಪ್ಪುವುದಾದರೆ ದೇಶದ್ದೇ ಆದ ಭಾಷೆಗೆ ವಿರೋಧ ಏಕೆ. ಇದು ಅರ್ಥವಾಗದ ಸಂಗತಿ ಎಂದಿದ್ದರು. ಬಳಿಕ ಬೇರೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿಯೂ ಅವರು ಹಿಂದಿ ಭಾಷೆಯ ಹೇರಿಕೆಯಾಗುತ್ತಿಲ್ಲ. ಹಿಂದಿಗೆ ಮಹತ್ವ ನೀಡುವುದರಲ್ಲಿ ತಪ್ಪಿಲ್ಲ ಎಂದಿದ್ದರು.
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಆಯ್ಕೆ; ಪರ-ವಿರೋಧ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯಂತಹ ಮಹತ್ವದ ಗೌರವ ಪಡೆದುಕೊಂಡ ವ್ಯಕ್ತಿ, ಹಿಂದಿ ಹೇರಿಕೆಯಿಂದ ಆಗುತ್ತಿರುವ ಸಮಸ್ಯೆಗಳು, ಕನ್ನಡ ಭಾಷೆಯ ಮೇಲಾಗುತ್ತಿರುವ ದಬ್ಬಾಳಿಕೆ ಮತ್ತು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳನ್ನು ಅರಿತುಕೊಳ್ಳದೆ, ಹಿಂದಿಯನ್ನು ರಾಷ್ಟ್ರಭಾಷೆ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಟೀಕಿಸಿದ್ದರು. ಮುಂದೆ ಓದಿ.
ಕನ್ನಡವನ್ನು ಆರಾಧಿಸುತ್ತೇನೆ
ಅದಕ್ಕೆ ತಮ್ಮದೇ ಕೈ ಬರಹದಲ್ಲಿ ಕ್ಷಮಾಪಣೆ ಹಾಗೂ ಸ್ಪಷ್ಟನೆ ನೀಡಿರುವ ದೊಡ್ಡರಂಗೇಗೌಡರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. 'ನಾನೇನೂ ಯಾವುದೇ ಭಾಷೆಯನ್ನು ನನ್ನ ತಲೆಯ ಮೇಲೆ ಹೊತ್ತು ಮೆರೆಸುತ್ತಿಲ್ಲ. ನಾನು ಭಕ್ತಿಪೂರ್ವಕವಾಗಿ-ನನ್ನ ಅಂತರಾಳದಿಂದ ಕನ್ನಡವನ್ನು ಆರಾಧಿಸುತ್ತೇನೆ. ಕನ್ನಡವನ್ನೇ ನನ್ನ ತಲೆಯ ಮೇಲೆ ಹೊತ್ತು ಮೆರೆಸುತ್ತೇನೆ' ಎಂದು ಅವರು ತಿಳಿಸಿದ್ದಾರೆ.
ಕ್ಷಮೆ ಯಾಚಿಸುತ್ತೇನೆ
'ಕನ್ನಡಿಗರ ಮೇಲೆ ಹಿಂದಿ ಭಾಷೆಯ ಮತ್ತು ಇಂಗ್ಲಿಷ್ ಹೇರಿಕೆಯ ರೀತಿ-ನೀತಿಯನ್ನು ನಾನು ಸಹಿಸುವುದಿಲ್ಲ. ನನ್ನ ಮಾತುಗಳು ಕನ್ನಡ ಜನರ ಮನಸ್ಸನ್ನು ನೋಯಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ' ಎಂದು ದೊಡ್ಡರಂಗೇಗೌಡ ತಿಳಿಸಿದ್ದಾರೆ.
ಎಂಇಎಸ್, ಉದ್ಧ(ಟ)ವ್ ಠಾಕ್ರೆ ಇಷ್ಟು ಬೆಳೆಯಲು ಕಾರಣ ಬಿಜೆಪಿಯ ಸಲುಗೆ
ಹಿಂದಿಯನ್ನು ತಿರಸ್ಕರಿಸುವುದು ಏಕೆ?
ಇಂಗ್ಲೀಷಿಗೆ ನಾವು ಮಣೆ ಹಾಕುತ್ತೇವೆ. ಹಿಂದಿಯನ್ನು ಏಕೆ ತಿರಸ್ಕಾರ ಮಾಡಬೇಕು. ಹಿಂದಿ ನಮ್ಮ ರಾಷ್ಟ್ರ ಭಾಷೆ, ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಹೆಚ್ಚಿನ ಸ್ಥಾನಮಾನವಿದೆ ಎಂದು ಹೇಳಿದ್ದಾರೆ. ಇಂಗ್ಲೀಷ್ ಒಪ್ಪುವ ನಾವು, ಹಿಂದಿ ಭಾಷೆಯನ್ನು ಏಕೆ ಒಪ್ಪಿಕೊಳ್ಳಬಾರದು ಎಂದು ದೊಡ್ಡರಂಗೇಗೌಡ ಪ್ರಶ್ನಿಸಿದ್ದರು.
Recommended Video
ಯಾವ ದೇಶಕ್ಕೆ ರಾಷ್ಟ್ರಭಾಷೆ?
ಹಿಂದಿ ಯಾವ ದೇಶಕ್ಕೆ ರಾಷ್ಟ್ರಭಾಷೆ? ಭಾರತದಲ್ಲಿರುವ ಎಲ್ಲವೂ ರಾಷ್ಟ್ರಭಾಷೆಗಳೇ. ದೊಡ್ಡರಂಗೇಗೌಡರಿಗೆ ಕನ್ನಡ ಎದುರಿಸುತ್ತಿರುವ ಸವಾಲು ಅರ್ಥವಾಗುತ್ತಿಲ್ಲ. ಅಥವಾ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮರೆತಿದ್ದಾರೆ. ಕನ್ನಡಕ್ಕೆ ಸಂಚಕಾರ ಬರುತ್ತಿರುವುದು ಹಿಂದಿಯಿಂದಲೇ ಹೊರತು ಇಂಗ್ಲಿಷ್ನಿಂದ ಅಲ್ಲ. ಕರ್ನಾಟಕದ ಎಲ್ಲ ಕಡೆಯೂ ಹಿಂದಿಯವರು ತುಂಬಿಕೊಳ್ಳುತ್ತಿದ್ದಾರೆ. ಹಿಂದಿಯಿಂದ ಆಗುತ್ತಿರುವ ಆಕ್ರಮಣದ ಬಗ್ಗೆ ದನಿ ಎತ್ತಬೇಕಾದವರೇ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.