ಸಹಿ ಮಾಡದೆ ಇಂಗ್ಲಿಷ್ ಕಡತ ವಾಪಸ್ ಕಳಿಸಿದ ಸಿಎಂ
ಬೆಂಗಳೂರು, ನ.7 : ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿರಬೇಕು ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಸ್ವತಃ ಅದನ್ನು ಜಾರಿಗೆ ತಂದಿದ್ದಾರೆ. ಆಂಗ್ಲ ಭಾಷೆಯಲ್ಲಿ ಕಳುಹಿಸಿದ್ದ ಕಡತವನ್ನು ಸಹಿ ಮಾಡದೆ ತಿರಸ್ಕರಿಸಿದ್ದಾರೆ. ಕಡತವನ್ನು ಕನ್ನಡದಲ್ಲೇ ಕಳುಹಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ಕಳುಹಿಸಿದ್ದ ಕಡತವನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ತಮ್ಮ ಬಳಿ ಬರುವ ಎಲ್ಲಾ ಕಡತಗಳು ಕನ್ನಡದಲ್ಲೇ ಇರಬೇಕು, ಇಂಗ್ಲಿಷ್ನಲ್ಲಿ ಕಳುಹಿಸಿದರೆ ಸಹಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. [ಅಧಿಕಾರಿಗಳೇ ಕನ್ನಡ ಕಲಿಯಿರಿ]
ಯಾವುದೇ ಇಲಾಖೆ ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ಕಡತ ಕಳುಹಿಸಿದರೆ ಸಂಬಂಧಿಸಿದ ಅಧಿಕಾರಿಗೆ ನೋಟಿಸ್ ಜಾರಿ ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ನಾನು ಈ ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದೆ. ಎಲ್ಲಾ ಇಲಾಖೆಗಳಲ್ಲಿ ಕನ್ನಡದಲ್ಲೇ ಆಡಳಿತ ನಡೆಯಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೆ ಎಂದು ಸಿಎಂ ಹೇಳಿದ್ದಾರೆ.
ಈಗ ನಾನು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ನನ್ನ ಮುಂದೆಯೇ ಆಂಗ್ಲ ಭಾಷೆಯ ಕಡತಗಳು ಬಂದರೆ, ಅದಕ್ಕೆ ಹೇಗೆ ಸಹಿ ಮಾಡಲಿ. ಆದ್ದರಿಂದ ಇನ್ನು ಮುಂದೆ ನನ್ನ ಮುಂದೆ ಬರುವ ಎಲ್ಲಾ ಕಡತಗಳು ಕನ್ನಡ ಭಾಷೆಯಲ್ಲೇ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಯಾವ ಇಲಾಖೆ ಕಡತ : ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ, ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದ ಕಡತವನ್ನು ಆಂಗ್ಲ ಭಾಷೆಯಲ್ಲಿ ಕಳುಹಿಸಲಾಗಿತ್ತು. ಈ ಕಡತಕ್ಕೆ ಮುಖ್ಯಮಂತ್ರಿಗಳು ಸಹಿ ಮಾಡಬೇಕಿತ್ತು.
ಆದರೆ, ಕಡತ ಆಂಗ್ಲಭಾಷೆಯಲ್ಲಿ ಇದ್ದುದನ್ನು ಗಮನಿಸಿದ ಮುಖ್ಯಮಂತ್ರಿಗಳು, ಆರಂಭದಿಂದಲೂ ಕನ್ನಡದಲ್ಲೇ ಕಡತ ಕಳುಹಿಸುವಂತೆ ಸೂಚನೆ ನೀಡಿದ್ದರೂ ಆಂಗ್ಲ ಭಾಷೆಯಲ್ಲಿ ಕಳುಹಿಸಿದ್ದೇಕೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಈ ಕಡತವನ್ನು ಕನ್ನಡದಲ್ಲಿ ಸಿದ್ಧಪಡಿಸಿ ಸಲ್ಲಿಸಿ ಎಂದು ವಾಪಸ್ ಕಳುಹಿಸಿದರು.