Basavaraj Bommai: ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಆಗಿರುತ್ತಾರೆ? : ಬಸವರಾಜ ಬೊಮ್ಮಾಯಿ ಪ್ರಶ್ನೆ
ಬೆಂಗಳೂರು, ಅಕ್ಟೋಬರ್ 11: ರಾಜ್ಯದಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದ್ರೆ ಕಾಂಗ್ರೆಸ್ ಪಾಳಯದಲ್ಲಿನ ಗೊಂದಲದಿಂದಾಗಿ ಸಿಎಂ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರಾ ಎಂಬ ಚರ್ಚೆ ಮತ್ತೆ ಮುನ್ನಲ್ಲೇಗೆ ಬಂದಿದೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಸಿಎಂ ಎಂದು ಅನುಮಾನ ಬರುವ ರೀತಿಯಲ್ಲಿ ಅವರ ಸಂಪುಟದ ಹಿರಿಯ ಸಚಿವರೇ ಮಾತನಾಡಿದರು. ಇದೂವರೆಗೂ ಸಿದ್ದರಾಮಯ್ಯ ಸಹ 5 ವರ್ಷ ನಾನೇ ಸಿಎಂ ಅಂತ ಎಲ್ಲೂ ಹೇಳಿಲ್ಲ. ಏನಿದರರ್ಥ, ಏನು ಒಳಗಡೆ ನಡೆದಿದೆ ? ಇದು ರಾಜ್ಯದ ಜನತೆಗೆ ಗೊತ್ತಾಗಬೇಕು, ಇದು ಕಾಂಗ್ರೆಸ್ ಆಂತರಿಕ ವಿಷಯ ಅಲ್ಲ. ರಾಜ್ಯದ ಆಡಳಿತ ರಾಜ್ಯದ ಜನರಿಗೆ ಬೇಕಾದ ವಿಷಯ ಇದು ಎಂದು ಹೇಳಿದರು.

ಇನ್ನು ಮೂರು ಜನ ಉಪಮುಖ್ಯಮಂತ್ರಿಗಳ ವಿಚಾರದಲ್ಲಿ ಅವರ ಬುಡಕ್ಕೆ ಇವರು, ಇವರ ಬುಡಕ್ಕೆ ಅವರು ಇಡಲು ನೋಡುತ್ತಿದ್ದಾರೆ. ಈ ಮಧ್ಯೆ ಶಾಸಕರು ನಮ್ಮ ಮಾತು ಕೇಳುವವರಿಲ್ಲ, ಅಭಿವೃದ್ಧಿ ಇಲ್ಲ ಅಂತಿದ್ದಾರೆ. ಹೀಗಾಗಿ ಈ ಸರ್ಕಾರ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಇನ್ನು ಸ್ವಲ್ಪ ದಿನದಲ್ಲಿ ಸ್ಪೋಟವಾಗಲಿದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು , ಶಾಸಕರು ಒಗ್ಗಟ್ಟಿಲ್ಲದೆ ವಿಭಿನ್ನ ಹೇಳಿಕೆ ಕೊಡುತ್ತಿದ್ದು, ಈ ಸರ್ಕಾರದಲ್ಲಿ ಸಿಎಂ ನೇಮಕ ಪ್ರಕ್ರಿಯೆಯಿಂದಲೇ ಭಿನ್ನಾಭಿಪ್ರಾಯ ಶುರುವಾಗಿದೆ. ಸಿಎಂ ಆಯ್ಕೆ ವೇಳೆಯೇ ಸಿದ್ದರಾಮಯ್ಯ ಅವರು ತಮ್ಮನ್ನು ಸಿಎಂ ಮಾಡಲಿಲ್ಲ ಎಂದು ಕೋಪಗೊಂಡು ದೆಹಲಿಯಿಂದ ಮರಳಿ ಬರುತ್ತಿದ್ದರು. ನಂತರ ಸಿದ್ದರಾಮಯ್ಯ ಅವರಿಗೆ ಕರಾರು ಖಂಡಿಷನ್ ಹಾಕಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದ್ದಾರೆ.
ನಾನು ಬಿಜೆಪಿಗೆ ಬಂದ ಬಳಿಕವೇ ಸೋತಿದ್ದು ಎಂಬ ಮಾಜಿ ಸಚಿವ ವಿ.ಸೋಮಣ್ಣ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅನುಭವ, ಅದು ಸತ್ಯ ಕೂಡ ಇದೆ. ಅದಕ್ಕೆ ಕಾರಣಗಳು ಬೇರೆ ಬೇರೆ ಇವೆ. ವಿ. ಸೋಮಣ್ಣ ಅವರು ಕ್ಷೇತ್ರ ಬದಲಾವಣೆ ಮಾಡಿರುವ ಕಾರಣಗಳೂ ಇವೆ ಎಂದರು.
ಶೀಘ್ರ ವಿಪಕ್ಷ ನಾಯಕನ ಆಯ್ಮೆ
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಪಕ್ಷ ನಾಯಕನ ಆಯ್ಕೆ ವಿಳಂಬದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ರಾಜ್ಯಾಧ್ಯಕ್ಷ ಇದ್ದಾರೆ, ಕೆಲಸ ಮಾಡುತ್ತಿದ್ದಾರೆ. ಅಧ್ಯಕ್ಷ, ವಿಪಕ್ಷ ನಾಯಕ ಎರಡನ್ನೂ ಒಟ್ಟಿಗೆ ನೇಮಕ ಮಾಡಲು ವಿಳಂಬ ಆಗಿರುವುದು ನಿಜ. ಆದರೆ, ನಾನು ಈಗಾಗಲೇ ದೆಹಲಿ ನಾಯಕರೊಟ್ಟಿಗೆ ಮಾತಾಡಿದ್ದೇನೆ. ಐದು ರಾಜ್ಯಗಳ ಟಿಕೆಟ್ ಫೈನಲ್ ಆದ ನಂತರ ಮಾಡುದಾಗಿ ತಿಳಿಸಿದ್ದಾರೆ. ಆದಷ್ಟು ಬೇಗ ವಿಪಕ್ಷ ನಾಯಕ ಆಯ್ಕೆ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬರ ಪರಿಹಾರ ವಿಚಾರಕ್ಕೆ ಆಗಲೇ ಕೇಂದ್ರ ಸರ್ಕಾರ ಮೊದಲ ಕಂತಿನ ಹಣ, ಎರಡು ತಿಂಗಳ ಹಿಂದೆಯೇ 350 ಕೋಟಿ ರೂ. ರಿಲೀಸ್ ಮಾಡಿದೆ. ಜಿಲ್ಲಾಧಿಕಾರಿಗಳ ಅಕೌಂಟ್ನಲ್ಲೂ ದುಡ್ಡಿದೆ. ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಮನಸ್ಸಿಲ್ಲ. ಈಗ ಬರದಲ್ಲಿರುವವರಿಗೆ ಕೊಟ್ಟರೆ ಮತ್ತೆ ಮುಂದೆ ಏನಾದರೂ ಕೇಳಿದರೆ ಕಷ್ಟ ಅಂತ. ಗ್ಯಾರಂಟಿಗಳಿಗೆ ದುಡ್ಡು ಕೊಟ್ಟಿರುವುದರಿಂದ, ಮೀನಾ, ಮೇಷ ನೋಡುತ್ತಿದ್ದಾರೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ ಮೊದಲ ತಿಂಗಳಲ್ಲಿ ಬಂದವರಿಗೆ ಎರಡನೇ ತಿಂಗಳದ್ದು ದುಡ್ಡು ಬಂದಿಲ್ಲ. ಇದರಲ್ಲಿ ಬಹಳಷ್ಟು ಗೊಂದಲ ಇದೆ. ಇನ್ನೊಂದು ತಿಂಗಳಾದರೆ ಮೂರು ತಿಂಗಳಲ್ಲೇ ಗೃಹಲಕ್ಷ್ಮಿ ಯೋಜನೆ ಮುಕ್ತಾಯ ಆಗುತ್ತದೆ. ಗೃಹಲಕ್ಷ್ಮಿ ಕೊಟ್ಟು ಮತ ಬ್ಯಾಂಕ್ ಮಾಡಬೇಕು ಅಂದುಕೊಂಡಿದ್ದರು. ಅದೆ ಕಾಂಗ್ರೆಸ್ ಸರ್ಕಾರಕ್ಕೆ ತಿರುಗುಬಾಣ ಆಗುತ್ತದೆ ಎಂದು ಹೇಳಿದರು.












Click it and Unblock the Notifications