'ಶಾಸಕರು ಬಯಸಿದರೆ ಕರ್ನಾಟಕ ರಾಜಕಾರಣಕ್ಕೆ ಮರಳುವೆ'
ಬೆಂಗಳೂರು, ಜುಲೈ 22 : 'ಶಾಸಕರು ಬಯಸಿದರೆ ರಾಜ್ಯ ರಾಜಕಾರಣಕ್ಕೆ ಬರುವೆ' ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಖರ್ಗೆ ಅವರು ರಾಜ್ಯ ರಾಜಕೀಯಕ್ಕೆ ವಾಪಸ್ ಆಗುವ ಕುರಿತು ಮಾತನಾಡಿದ್ದಾರೆ.
ಮಂಗಳವಾರ 74ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಬಳಿಕ ಬೆಂಗಳೂರಿನ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ. ಖರ್ಗೆ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್ನಲ್ಲಿನ ಅತೃಪ್ತ ಶಾಸಕರಿಗೆ ಶಕ್ತಿ ತುಂಬಿದೆ. [ರಮ್ಯಾ ರಾಜಕಾರಣಕ್ಕೆ ಮರಳುವುದೇ ಬೇಡ]
'ನಾನು ರಾಜ್ಯ ರಾಜಕಾರಣಕ್ಕೆ ಬರುವಂತೆ ಬಯಸುತ್ತಿರುವ ಶಾಸಕರ ಪಟ್ಟಿ ಕೊಡಿ. ಶಾಸಕರು ಬಯಸಿದರೆ ನಾನು ರಾಜ್ಯ ರಾಜಕಾರಣಕ್ಕೆ ಹಿಂತಿರುಗುವೆ, ಆದರೆ, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು' ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರವಹಿಸಿಕೊಂಡ ಬಳಿಕ ಮೂಲ ಕಾಂಗ್ರೆಸ್ನ ಕೆಲವು ನಾಯಕರು ಮೂಲೆ ಗುಂಪಾಗಿದ್ದಾರೆ ಎಂಬ ದೂರುಗಳಿವೆ. ಖರ್ಗೆ ಹೇಳಿಕೆಯಿಂದ ಇಂತಹ ಅತೃಪ್ತರಿಗೆ ಇದೇ ಮೊದಲ ಬಾರಿಗೆ ನಾಯಕರೊಬ್ಬರು ಸಿಕ್ಕಿದಂತಾಗಿದೆ. ಆದರೆ, ಸಿದ್ದರಾಮಯ್ಯ ಅವರು ಖರ್ಗೆ ನಡುವಿನ ಬಾಂಧವ್ಯ ಉತ್ತಮವಾಗಿದೆ ಎನ್ನುವುದನ್ನು ಗಮನಿಸಬೇಕಾಗಿದೆ. ಖರ್ಗೆ ಹೇಳಿಕೆಯಿಂದ ಏನಾಗಬಹುದು?...
ರಾಜ್ಯಕ್ಕೆ ಬರುವ ಮಾತನಾಡಿದ ಖರ್ಗೆ
'ಶಾಸಕರು ಬಯಸಿದರೆ ರಾಜ್ಯ ರಾಜಕಾರಣಕ್ಕೆ ಬರುವೆ. ಆದರೆ, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಇದೇ ಮೊಲದ ಬಾರಿಗೆ ಖರ್ಗೆ ಅವರು ರಾಜ್ಯಕ್ಕೆ ಹಿಂತಿರುಗುವ ಮಾತನಾಡಿದ್ದಾರೆ.
ಅತೃಪ್ತ ಶಾಸಕರಿಗೆ ಆನೆ ಬಲ
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಮೂಲ ಕಾಂಗ್ರೆಸಿಗರು ಮೂಲೆಗುಂಪಾಗಿದ್ದಾರೆ ಎಂಬ ಆರೋಪಗಳಿವೆ. ಸುಮಾರು 40 ಶಾಸಕರು ಸರ್ಕಾರದ ವಿರುದ್ಧ ಅತೃಪ್ತಗೊಂಡಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದು, ಖರ್ಗೆ ಅವರ ಹೇಳಿಕೆಯಿಂದ ಅತೃಪ್ತರಿಗೆ ನಾಯಕತ್ವ ಸಿಕ್ಕಂತಾಗಿದೆ.
ಖರ್ಗೆ ಅಸಮಾಧಾನ ಹೊರ ಹಾಕಿದ್ದರು
ಕೆಲವು ದಿನಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ ನಂತರ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ವಿಫಲವಾಗಿದೆ ಎಂಬುದು ಖರ್ಗೆ ಅಸಮಾಧಾನಕ್ಕೆ ಕಾರಣವಾಗಿತ್ತು.
ಸಿದ್ದರಾಮಯ್ಯ-ಖರ್ಗೆ ಬಾಂಧವ್ಯ ಉತ್ತಮವಾಗಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಡುವಿನ ಬಾಂಧವ್ಯ ಉತ್ತಮವಾಗಿದೆ. ಆದರೆ, ಕರ್ನಾಟಕದ ಕಾಂಗ್ರೆಸ್ನಲ್ಲಿ ಪರ್ಯಾಯ ನಾಯಕರ ಹುಡುಕಾಟ ನಡೆಸಿದರೆ ಖರ್ಗೆ ಅವರ ಹೆಸರೇ ಮೊದಲಿಗೆ ಕೇಳಿಬರುತ್ತದೆ.
ನಾಯಕತ್ವ ಬದಲಾವಣೆ ಪ್ರಶ್ನೆ ಸದ್ಯಕ್ಕಿಲ್ಲ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವಂತಹ ಪ್ರಯತ್ನಕ್ಕೆ ಹೈಕಮಾಂಡ್ ನಾಯಕರು ಸದ್ಯಕ್ಕೆ ಕೈ ಹಾಕುವುದಿಲ್ಲ. ಶಾಸಕರ ತೀವ್ರ ಒತ್ತಡ ಬಂದರೆ ಈ ಬಗ್ಗೆ ನಾಯಕರು ಗಮನಹರಿಸಬಹುದು. ಆದರೆ, ಈ ಸಾಧ್ಯತೆ ತುಂಬಾ ಕಡಿಮೆ. ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯ ಕಾಂಗ್ರೆಸ್ ನಾಯಕರಾಗಿದ್ದು, ಅಲ್ಲಿ ಸಕ್ರಿಯರಾಗಿದ್ದಾರೆ.