ಪರಮೇಶ್ವರ ಅವರು ಸಿದ್ದರಾಮಯ್ಯ ಸಂಪುಟ ಸೇರೋಲ್ವಾ?
ಬೆಂಗಳೂರು, ಅಕ್ಟೋಬರ್ 28 : ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಇನ್ನೂ ಬಗೆಹರಿದಿಲ್ಲ. ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸಂಪುಟ ಸೇರಲಿದ್ದಾರೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.
ಸಚಿವ ಸಂಪುಟ ಸೇರುವುದಾದದರೆ ಉಪ ಮುಖ್ಯಮಂತ್ರಿಯಾಗಿ ಮಾತ್ರ ಎಂಬುದು ಪರಮೇಶ್ವರ ಅವರ ನಿಲುವು. ಆದರೆ, ಡಿಸಿಎಂ ಹುದ್ದೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರು ತಮ್ಮ ಪಟ್ಟನ್ನು ಮುಂದುವರೆಸಿದ್ದು, ಅಂತಿಮ ಚಿತ್ರಣ ಲಭ್ಯವಾಗಲು ವಿಳಂಬವಾಗುತ್ತಿದೆ. [ಸಂಪುಟ ಪುನರ್ ರಚನೆ ಇಲ್ಲ]

ಬುಧವಾರ ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇಂದು ಸಂಜೆಯ ವೇಳೆಗೆ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ಚಿತ್ರಣ ದೊರೆಯುವ ನಿರೀಕ್ಷೆ ಇದೆ. [ಐವರು ಸಂಪುಟ ಸೇರಲಿದ್ದಾರೆ?]
ಖಾತೆಗಾಗಿ ಬೇಡಿಕೆ : ಒಂದು ವೇಳೆ ಡಿಸಿಎಂ ಹುದ್ದೆ ಸೃಷ್ಟಿ ಮಾಡಲು ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡದಿದ್ದರೆ ಪರಮೇಶ್ವರ ಅವರು ಹಣಕಾಸು ಅಥವ ಬೇರೆ ಯಾವುದೇ ಪ್ರಬಲ ಖಾತೆಗೆ ಬೇಡಿಕೆ ಇಡಬಹುದಾಗಿದೆ. ಡಿಸಿಎಂ ಹುದ್ದೆ ಇಲ್ಲವಾದಲ್ಲಿ ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿ ಎಂಬ ಬೇಡಿಕೆಯನ್ನು ಪರಮೇಶ್ವರ ಅವರು ಮುಂದಿಟ್ಟಿದ್ದಾರೆ ಎಂಬುದು ಪಕ್ಷದ ಮೂಲಗಳ ಮಾಹಿತಿ.
ಸಂಪುಟ ಸೇರುವುದಾದದರೆ ಡಿಸಿಎಂ ಆಗಿ ಮಾತ್ರ. ಇಲ್ಲವಾದಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುವ ಎಂದು ಪರಮೇಶ್ವರ ಅವರು ಹೈಕಮಾಂಡ್ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ದಿಗ್ವಿಜಯ್ ಸಿಂಗ್ ಜೊತೆಗಿನ ಇಂದಿನ ಭೇಟಿ ಸಂದರ್ಭದಲ್ಲಿ ಈ ಕುರಿತು ಮಾತುಕತೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications