ಗಂಟಲೊಣಗಿ ನಿತ್ರಾಣವಾಗಿರುವ ಪ್ರಾಣಿಗಳು: ಪಶ್ಚಿಮ ಘಟ್ಟಗಳ ಸ್ಥಿತಿ ಗತಿ
ಬೆಂಗಳೂರು, ಜೂನ್ 29: ಪಶ್ಚಿಮ ಘಟ್ಟವೆಂದಾಕ್ಷಣ ನಮ್ಮ ಕಣ್ಣೆದುರಿಗೆ ಬರುವುದು ಹಸಿರಿನಿಂದ ತುಂಬಿದ ಬೆಟ್ಟ- ಗುಡ್ಡಗಳು, ಕಾಡಿನ ಮಧ್ಯೆ ನೀರಿನ ಝುಳು-ಝುಳು ನಿನಾದ, ಪಕ್ಷಿಗಳ ಕಲರವ ಅದೆಲ್ಲವನ್ನೂ ಒಮ್ಮೆ ನೆನಸಿಕೊಂಡರೆ ಸಾಕು ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ.
ಆದರೆ ಈ ವರ್ಷ ಪಶ್ಚಿಮ ಘಟ್ಟ ಅಕ್ಷರಶಃ ಇದರ ವಿರುದ್ಧವಾಗಿದೆ. ಒಣಗಿ ಹಳದಿ ಬಣ್ಣಕ್ಕೆ ತಿರುಗಿದ ಮರಗಳು, ಗಂಟಲೊಣಗಿ ಕೂಗಲು ಬಾರದೆ ನರಳುತ್ತಿರುವ ಹಕ್ಕಿಗಳು, ನೀರಿಲ್ಲದೆ ಊರಿಂದ ಊರಿಗೆ ಗುಳೆ ಹೊರಟಿರುವ ಪ್ರಾಣಿಗಳು ಇದೆಲ್ಲವನ್ನು ನೋಡಿದರೆ ಕಣ್ಣಂಚಲ್ಲಿ ನೀರು ಮೂಡುವುದಂತೂ ಸತ್ಯ.
ಹೌದು ಪಶ್ಚಿಮ ಘಟ್ಟ ಈಗ ಮರುಭೂಮಿಯಾದಂತಾಗಿದೆ, ಅಲ್ಲಿ ವಾಸಿಸುವ ಮನುಷ್ಯನಿಂದ ಹಿಡಿದು ಪ್ರಾಣಿ, ಪಕ್ಷಿಗಳೆಲ್ಲರೂ ನೀರಿನ ಅಭಾವ ಎದುರಿಸುತ್ತಿದ್ದಾರೆ. ನದಿಗಳು ಬರಿದಾಗಿವೆ. ಅಂತರ್ಜಲ ಸಂಪೂರ್ಣವಾಗಿ ಬತ್ತಿದೆ. ಇದೇ ರೀತಿ ಇನ್ನೂ ಹದಿನೈದು ದಿನ ತಿಂಗಳು ಮುಂದುವರೆದರೆ ಮಳೆಯಾಗದಿದ್ದರೆ ಅಲ್ಲಿ ವಾಸಿಸುವುದೇ ಕಷ್ಟಕರವಾಗುತ್ತದೆ.

ಇಷ್ಟು ದಿನ ಪ್ರಾಣಿಗಳಿಗೆ ಉತ್ತಮವಾದ ಹುಲ್ಲು, ಬಾಯಾರಿದಾಗ ತಂಪನೆಯ ನೀರು ಅವುಗಳಿದ್ದಲ್ಲೇ ಸಿಗುತ್ತಿತ್ತು ಈಗ ಅರಸಿಕೊಂಡು ಹೋದರೂ ಕೂಡ ಇವೆಲ್ಲವೂ ದೊರೆಯದಂತಾಗಿದೆ.
ಕಾಳಿ ಸಂರಕ್ಷಿತಾರಣ್ಯದಲ್ಲಿ ಗೌರ್ ಪ್ರಾಣಿಯು ನೀರಿನ ಹೊಂಡದಲ್ಲಿ ಸಿಲುಕಿಕೊಂಡು , ರಕ್ಷಿಸಲಾಯಿತಾದರೂ ಮೃತಪಟ್ಟ ಘಟನೆ ನಡೆದಿದೆ. ದಿನ ಇಂತಹುದ್ದೇ ಎಷ್ಟೋ ದುರಂತಗಳು ಸಂಭವಿಸುತ್ತಲೇ ಇರುತ್ತದೆ.
2050ರ ಹೊತ್ತಿಗೆ ಮಾನವ ಸಂಕುಲವೊಂದೇ ಉಳಿಯುತ್ತದೆ ಪ್ರಾಣಿ, ಪಕ್ಷಿಗಳೆಲ್ಲ ನಶಿಸಿ ಹೋಗುತ್ತವೆ ಎಂದು ವಿಜ್ಞಾನಿಯೊಬ್ಬರು ಹೇಳುತ್ತಾರೆ. ಪ್ರಾಣಿಗಳು ಹಾಗಿರಲಿ ಬಯಲು ಸೀಮೆಗಳಲ್ಲಿ ಬೇಸಿಗೆಯಲ್ಲಿ ಕೆಲಸಕ್ಕೆಂದು ಬೇರೆ ಊರುಗಳಿಗೆ ಗುಳೆ ಹೋಗುವಂತೆ ಪಶ್ಚಿಮ ಘಟ್ಟಗಳಿಂದ ಜನರು ಗುಳೆ ಹೋಗುವ ಪರಿಸ್ಥಿತಿಯೂ ದೂರವಿಲ್ಲ ಎನಿಸುತ್ತಿದೆ.












Click it and Unblock the Notifications