ರಾಜಸ್ಥಾನದಲ್ಲಿ ಮಿಂಚುತ್ತಿರುವ ಕನ್ನಡಿಗ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಬಗ್ಗೆ ವಿಕಿಪಿಡಿಯಾ ಪೇಜ್
ಬೆಂಗಳೂರು, ಮೇ. 24: ರಾಜಸ್ಥಾನದ ಜನಪ್ರಿಯ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಅವರ ಪೊಲೀಸ್ ಜರ್ನಿಯ ಸಾಹಸ ಚರಿತ್ರೆಯನ್ನು ವಿಡಿಪಿಡಿಯಾ ಪ್ರಕಟಿಸಿದೆ.
ಕರ್ನಾಟಕದ ಚಿಂತಾಮಣಿಯ ಮುಂಗಾನಹಳ್ಳಿ ನಿವಾಸಿಯಾದ ಎಂ.ಎನ್. ದಿನೇಶ್ ಅವರ ಬಾಲ್ಯದಿಂದ ಹಿಡಿದು ಹಾಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಸಮಗ್ರ ವಿವರಗಳನ್ನು ವಿಡಿಪಿಡಿಯಾ ಪುಟದಲ್ಲಿ ಉಲ್ಲೇಖಿಸಲಾಗಿದೆ.
ಎಂ.ಎನ್. ದಿನೇಶ್ ಪ್ರಸ್ತುತ ರಾಜಸ್ತಾನದ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಎನ್. ದಿನೇಶ್ ಸೊಹರಬುದ್ದೀನ್ ಹಾಗೂ ತುಳಸಿರಾಮ್ ಪ್ರಜಾಪತಿ ಎನ್ಕೌಂಟರ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಇಡೀ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೀಗ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿ ಸರಣಿ ಐಎಎಸ್, ಐಆರ್ಎಸ್ ಅಧಿಕಾರಿಗಳನ್ನೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಕಳುಹಿಸುವ ಮೂಲಕ ಮಿಂಚುತ್ತಿದ್ದಾರೆ.
ನಾನಾ ಪೊಲೀಸ್ ಅಧಿಕಾರಿಗಳ ಬಗ್ಗೆ ವಿಕಿಪಿಡಿಯಾ ಮಾಹಿತಿಯನ್ನು ಪ್ರಕಟಿಸಿದೆ. ಆದರೆ, ಎಂ.ಎನ್. ದಿನೇಶ್ ಬಾಲ್ಯದಿಂದ ಹಿಡಿದು ಪ್ರತಿ ಕೇಸಿನ ವಿವರಗಳನ್ನು ಸಮಗ್ರವಾಗಿ ಪ್ರಕಟಿಸಿದೆ. ಸುಮಾರು 124 ಸುದ್ದಿಗಳ ಲಿಂಕ್ ನ್ನು ನೀಡಿದ್ದು, ಎಂ.ಎನ್. ದಿನೇಶ್ ಅವರ ಸಂಪೂರ್ಣ ಚಿತ್ರಣವನ್ನೆ ನೀಡಲಾಗಿದೆ. ಈ ಕುರಿತು ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಎನ್. ದಿನೇಶ್, "ನನ್ನ ಬಗ್ಗೆ ಸಮಗ್ರ ವಿವರ ಒಂದೇ ಕಡೆ ಸಿಗುವಂತೆ ನೈಜ ಘಟನೆಗಳನ್ನು ಆಧರಿಸಿ ಅದಕ್ಕೆ ಸಂಬಂಧಿಸಿದ ಲಿಂಕ್ ಕೂಡ ಕೊಟ್ಟಿದ್ದಾರೆ. ಅದನ್ನು ಓದಿದಾಗ ಇಡೀ ನನ್ನ ಜೀವನ ಕಣ್ಣು ಮುಂದೆ ನಿಂತಂತೆ ಭಾಸವಾಗುತ್ತಿದೆ," ಎಂದು ತಿಳಿಸಿದರು.
ಕರುನಾಡಿನ ಹೆಮ್ಮೆ ಎಂ.ಎನ್. ದಿನೇಶ್ :
ಎಂ.ಎನ್. ದಿನೇಶ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುಂಗಾನಳ್ಳಿಯಲ್ಲಿ 1971 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣಸ್ವಾಮಿ ತಹಶೀಲ್ದಾರ್ ಆಗಿದ್ದರು. ದಿನೇಶ್ ಎಂ.ಎನ್. ದಾವಣಗೆರೆಯ ಬಿಡಿಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು 1995 ರಲ್ಲಿ ಐಪಿಎಸ್ ಅಧಿಕಾರಿಯಾಗಿ ರಾಜಸ್ಥಾನ ಕೆಡರ್ ಗೆ ಆಯ್ಕೆಯಾಗಿ ವೃತ್ತಿ ಜೀವನ ಅರಂಭಿಸಿದ್ದರು. ಎಂ.ಎನ್. ದಿನೇಶ್ ರಾಜಸ್ಥಾನದ ದೌಸ ಜಿಲ್ಲೆಯಲ್ಲಿ ಎಎಸ್ಪಿಯಾಗಿ 1998 ರಲ್ಲಿ ಸೇವೆ ಆರಂಭಿಸಿದ್ದರು. ರೀ ಪೋಲ್ ಗೆ ಕುಖ್ಯಾತಿ ಪಡೆದಿದ್ದ ದೌಸ ದಲ್ಲಿ ರೌಡಿಗಳು, ಕ್ರಿಮಿನಲ್ ಗಳು, ಭೂಮಾಫಿಯಾ ವಿರುದ್ಧ ಕಾರ್ಯಚರಣೆ ನಡೆಸಿ ಸುದ್ದಿಯಾಗಿದ್ದರು.
ಚಂಬಲ್ ಕಣಿವೆ ಸೊಕ್ಕು ಅಡಗಿಸಿದ್ದ ದಿನೇಶ್ :
ಡಕಾಯಿತಿ ಅಂದ್ರೆ ನೆನಪಿಗೆ ಬರುವುದು ಚಂಬಲ್ ಕಣಿವೆ. ಕರೋಲಿ ಎಸ್ಪಿಯಾಗಿದ್ದಾಗ ಎಂಎನ್ ದಿನೇಶ್ ಚಂಬಲ್ ಕಣಿವೆ 12 ಡಕಾಯಿತರ ಗ್ಯಾಂಗ್ ಗಳ ಸೊಕ್ಕು ಅಡಗಿಸಿದ್ದರು. ಎರಡು ವರ್ಷದಲ್ಲಿ ಹನ್ನೆರಡು ಡಕಾಯಿತರ ಗ್ಯಾಂಗ್ ಮುಗಿಸಿದ್ದರು. ಆರು ಡಕಾಯಿತ ಗ್ಯಾಂಗ್ ಲೀಡರ್ ಗಳನ್ನು ಎನ್ಕೌಂಟರ್ ಮಾಡಿಸಿದ್ದರು. ಎನ್ ಕೌಂಟರ್ ಭಯಕ್ಕೆ ಚಂಬಲ್ ಕಣಿವೆ ಡಕಾಯಿತರು ಪೊಲೀಸರಿಗೆ ಶರಣಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸ್ಥಳೀಯ ರಾಜಕಾರಣಿಗಳ ಒತ್ತಡದಿಂದ ದಿನೇಶ್ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಈ ವೇಳೆ ರಾಮ್ ಸಿಂಗ್ ಡಕಾಯಿತ ಗ್ಯಾಂಗ್ ಅಷ್ಟೇ ಉಳಿದುಕೊಂಡಿತ್ತು. 2002 ರಲ್ಲಿ ಸವಾಯಿ ಮಾದಾಪುರ್ ಜಿಲ್ಲೆಯ ಗಂಗಾಪುರದಲ್ಲಿ ಹಿಂಸಾಚಾರ ಬುಗಿಲೆದ್ದು ಮೂವರು ಪೊಲೀಸರು ಸಾವನ್ನಪ್ಪಿದ್ದರು. ಇದನ್ನು ನಿಯಂತ್ರಿಸಲು ಎನ್.ಎನ್. ದಿನೇಶ್ ಅವರನ್ನು ಸರ್ಕಾರ ನಿಯೋಜಿಸಿತ್ತು!
ಇದಕ್ಕೂಮೊದಲು ಕರೌಲಿ ಜಿಲ್ಲೆಯ ಎಸ್ಪಿಯಾಗಿದ್ದ ಎಂ.ಎನ್.ದಿನೇಶ್, ಪುರಾತನ ವಿಗ್ರಹಗಳನ್ನು ಹೆಲಿಕಾಪ್ಟರ್ ಗಳ ಮೂಲಕ ಸಾಗಿಸುತ್ತಿದ್ದ ಸ್ಮಗ್ಲರ್ಸ್ ನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಮ್ ಸಿಂಗ್ ಗ್ಯಾಂಗ್ ಖತಂ ಮಾಡಿದ್ದ ದಿನೇಶ್ :
1980ರಿಂದ ಸುಮಾರು 80 ಕ್ಕೂ ಹೆಚ್ಚು ಕೊಲೆ, ಅಪಹರಣ ಮಾಡಿ 20 ವರ್ಷಗಳಿಂದ ಸಮಾಜದ ನಿದ್ದೆ ಗೆಡಿಸಿದ್ದ ರಾಮ್ ಸಿಂಗ್ ಡಕಾಯಿತಿ ಗ್ಯಾಂಗ್ ಲೀಡರ್ ನ್ನು ಎನ್ ಕೌಂಟರ್ ಮಾಡಿ ಮುಗಿಸಿ ಚರಿತ್ರೆ ನಿರ್ಮಿಸಿದ್ದರು. ಎನ್ ಕೌಂಟರ್ ಗೂ ಮುನ್ನ ರಾಮ್ ಸಿಂಗ್ ನ ಒಂದು ಪೋಟೋ ಕೂಡ ಪೊಲೀಸರ ಬಳಿ ಇರಲಿಲ್ಲ. 2002 ರಲ್ಲಿ ಪೊಲೀಸರ ಮತ್ತು ರಾಮ್ ಸಿಂಗ್ ಗ್ಯಾಂಗ್ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ರಾಮ್ ಸಿಂಗ್ ಮತ್ತು ಆತನ ಸಚಹರರನ್ನು ಪೊಲೀಸರು ಮುಗಿಸಿದ್ದರು.
ಕನ್ನಡಿಗ ಐಪಿಎಸ್ ಅಧಿಕಾರಿಯ ಫೇಮಸ್ :
ಉದಯಪುರ ಜಿಲ್ಲೆಯ ಸರದ ನಗರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದ ಯುವಕನನ್ನು ಕ್ರಿಮಿನಲ್ ಗಳು ಹತ್ಯೆ ಮಾಡಿ ಕೊಂದಿದ್ದರು. ಈ ಘಟನೆ ಕೋಮು ಹಿಂಸಾಚಾರಕ್ಕೆ ನಾಂದಿ ಹಾಡಿತ್ತು. ಪರಿಸ್ಥಿತಿ ನಿಯಂತ್ರಿಸಲು ಉದಯಪುರ ಎಸ್ಪಿಯನ್ನಾಗಿ 2004 ರಲ್ಲಿ ಎಂ.ಎನ್. ದಿನೇಶ್ ಅವರನ್ನು ರಾಜಸ್ತಾನ ಸರ್ಕಾರ ನಿಯೋಜಿಸಿತ್ತು. ಎಂಟು ವರ್ಷದಿಂದ ತಲೆ ಮರೆಸಿಕೊಂಡಿದ್ದ ಕ್ರಿಮಿನಲ್ ರಶೀದ್ ನನ್ನು ಬಂಧಿಸಿದ ಸಂಭ್ರಮಾಚರಣೆಯಲ್ಲಿ ಪೊಲೀಸರು ತೊಡಗಿದ್ದರು. ಈ ವೇಳೆ ಉದಯಪುರದ ಹೃದಯ ಭಾಗದಲ್ಲಿ ರೌಡಿ ಶೀಟರ್ ಹಮೀದ್ ಲಾಲಾ ಎಂಬಾತನ ಮೇಲೆ ಮೂವರು ಅಪರಿಚಿತರು ಗುಂಡು ಹಾರಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಅಜಮ್ ಗಾಂಗ್ ಶಾಮೀಲಾಗಿರುವ ಮಾಹಿತಿ ಸಿಕ್ಕಿತ್ತು. ಅದರಲ್ಲಿ ಒಬ್ಬ ಸೊಹರಾಬುದ್ದೀನ್, ಆತನ ಶಾರ್ಪ್ ಶೂಟರ್ ತುಳಸಿರಾಮ್ ಪ್ರಜಾಪತಿ ಶಾಮೀಲಾಗಿರುವ ಮಾಹಿತಿ ಪಡೆದು ಉದಯಪುರ ಪೊಲೀಸರು ಮಧ್ಯ ಪ್ರದೇಶಕ್ಕೆ ತೆರಳಿದ್ದರು. ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಗ್ರೆನೇಡ್, ಎಕೆ 47 ಹೊಂದಿದ್ದ ಪ್ರಕರಣದಲ್ಲಿ ಗುಜರಾತ್ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಸೊಹರಾಬುದ್ದೀನ್ ಬೇಕಾಗಿದ್ದ.
ಈತನ ಪತ್ತೆಗೆ ಬಹುಮಾನ ಘೋಷಣೆ ಮಾಡಲಾಗಿತ್ತು. 1993 ರಲ್ಲಿ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಅಬ್ದುಲ್ ಲತೀಫ್ ಗೆ ಸೊಹರಾಬುದ್ದೀನ್ ಸಹಚರನಾಗಿದ್ದ. ಜಾಮೀನು ಪಡೆದು ಎಸ್ಕೇಫ್ ಆಗಿದ್ದ ಲತೀಫ್ ಆ ಬಳಿಕ ಹಲವು ಕೊಲೆ ಮಾಡಿದ್ದ. 2005 ರಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸೊಹರಾಬುದ್ದೀನ್ ನನ್ನು ಗುಜರಾತ್ ಮತ್ತು ರಾಜಸ್ತಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ ಮಾಡಿದ್ದರು. ಆತನ ಸಹಚರ ಪ್ರಜಾಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. 2006 ರಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಜಾಪತಿಯನ್ನು ಎನ್ ಕೌಂಟರ್ ಮಾಡಲಾಗಿತ್ತು.
ಸೊಹರಾಬುದ್ದೀನ್ ಹಾಗೂ ಪ್ರಜಾಪತಿ ಎನ್ ಕೌಂಟರ್ ಕೇಸ್ :
ಸೊಹದ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಎಂ.ಎನ್. ದಿನೇಶ್ ಬಂಧನಕ್ಕೆ ಒಳಗಾಗಿದ್ದರು. ದಿನೇಶ್ ಬಂಧನ ವಿರೋಧಿಸಿ ಇಡೀ ರಾಜಸ್ಥಾನದಲ್ಲಿ ದೊಡ್ಡ ಹೋರಾಟ ಶುರುವಾಗಿತ್ತು. ಟ್ರೈನ್ ಗಳನ್ನು ನಿಲ್ಲಿಸಿ ಬಂದ್ ಮಾಡಲಾಗಿತ್ತು. 2007 ರಲ್ಲಿ ದಿನೇಶ್ ಬಂಧನ ವಿರೊಧಿಸಿ ಉದಯಪುರ ಬಂದ್ ಮಾಡಲಾಗಿತ್ತು. ರಾಜಸ್ಥಾನ ಪೊಲೀಸ್ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದರು. ಸೊಹರಾಬುದ್ದೀನ್ ಹಾಗೂ ಪ್ರಜಾಪತಿ ನಕಲಿ ಎನ್ಕೌಂಟರ್ ಅರೋಪದಡಿ 2010 ರಲ್ಲಿ ಜೈಲಿಗೆ ಹೋಗಿದ್ದ ಎಂ.ಎನ್. ದಿನೇಶ್ ಏಳು ವರ್ಷ ಜೈಲಿನಲ್ಲಿದ್ದರು. ಎರಡು ಪ್ರಕರಣದಲ್ಲಿ ಎಂ.ಎನ್. ದಿನೇಶ್ ಆರೋಪ ಮುಕ್ತರಾದರು. 2014 ರಲ್ಲಿ ಪುನಃ ಖಾಕಿ ತೊಟ್ಟ ದಿನೇಶ್ ಭ್ರಷ್ಟಾಚಾರ ನಿಗ್ರಹ ದಳದ ನೇತೃತ್ವ ವಹಿಸಿದ್ದರು. ಸದ್ಯ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭ್ರಷ್ಟ ಐಎಎಸ್ ಅಧಿಕಾರಿಗಳನ್ನೇ ಜೈಲಿಗೆ ಕಳುಹಿಸುವ ಮೂಲಕ ಎಂ.ಎನ್. ದಿನೇಶ್ ರಾಜಸ್ಥಾನದಾದ್ಯಂತ ರಾಜಾಜಿಸುತ್ತಿದ್ದಾರೆ. ಹೆಮ್ಮೆಯ ಕನ್ನಡಿಗ ರಾಜಸ್ತಾನದಲ್ಲಿ ಮಿಂಚುತ್ತಿದ್ದಾರೆ.
Recommended Video