ಪುತ್ರನ ಆಸ್ತಿಯಲ್ಲಿ ವಿಧವೆ ತಾಯಿಗೂ ಹಕ್ಕಿದೆ- ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು,ಅ.27. ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 8ರಡಿ ಮೃತ ಪುತ್ರನ ಆಸ್ತಿಯಲ್ಲಿ ವಿಧವೆ ತಾಯಿಗೂ ಹಕ್ಕು ಇದೆ, ಆಕೆಗೆ ಸೇರಬೇಕಾದ ಪಾಲು ನೀಡಲೇಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇದರಿಂದಾಗಿ ಪುತ್ರ ಮೃತಪಟ್ಟ ನಂತರ ಆತನ ತಾಯಿಗೆ ಹಕ್ಕಿಲ್ಲವೆಂದು ಹೇಳಲಾಗದು. ಕಲಬುರಗಿ ಪೀಠದಲ್ಲಿ ಈ ತೀರ್ಪು ಹೊರಬಂದಿದ್ದು, ಇದು ಗಂಭೀರ ಪರಿಣಾಮಗಳನ್ನು ಬೀರಲಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಧವೆ ಪತ್ನಿಯರಿಗೆ ಆಸ್ತಿಯಲ್ಲಿ ಸ್ವತಂತ್ರ ಪಾಲು ಇರುವುದಿಲ್ಲ. ಗಂಡನ ಪಾಲಿನಲ್ಲಿಅವರಿಗೆ ಹಕ್ಕಿರುತ್ತದೆ. ಈ ಪ್ರಕರಣದಲ್ಲಿ ಎರಡನೇ ಪುತ್ರ ಸಹ ಮೃತ ಪಟ್ಟಿದ್ದಾರೆ. ಆಸ್ತಿ ವಿಭಜನೆ ಮಾಡುವಾಗ ಎರಡು ಅಧೀನ ಕೋರ್ಟ್ಗಳು ಈ ಅಂಶವನ್ನು ಪರಿಗಣಿಸಿಯೇ ಇಲ್ಲ ಎಂದು ನ್ಯಾಯಪೀಠ ಹೇಳಿದೆ.

ಅಧೀನ ಕೋರ್ಟ್ ಆಸ್ತಿ ವಿಭಾಗ ಮಾಡಿದ್ದನ್ನು ಪ್ರಶ್ನಿಸಿ ಬೀದರ್ ಜಿಲ್ಲೆಯ ಹುಮ್ನಾಬಾದ್ನ 65 ವರ್ಷದ ಈರಮ್ಮ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.
"ಆಸ್ತಿ ವಿಭಜನೆ ಮಾಡುವ ಕೆಳ ಹಂತದ ಎರಡೂ ಅಧೀನ ನ್ಯಾಯಾಲಯಗಳು ಮೃತರಾಗಿರುವ ಎರಡನೇ ಪುತ್ರ ಭೀಮರೆಡ್ಡಿಯ ಪಾಲಿನಲ್ಲಿತಾಯಿ ಈರಮ್ಮ ಅವರಿಗೆ ಪಾಲು ನೀಡಿರುವುದಿಲ್ಲ. ಇದು ಪ್ರಮಾದವಾಗಿದೆ, ಹಾಗಾಗಿ ಎರಡೂ ಕೋರ್ಟ್ಗಳು ರೂಪಿಸಿರುವ ಪ್ರಾಥಮಿಕ ಡಿಕ್ರಿಯಲ್ಲಿಮಾರ್ಪಾಡು ಮಾಡಬೇಕಿದೆ" ಎಂದು ನ್ಯಾಯಪೀಠ ಆದೇಶದಲ್ಲಿಹೇಳಿದೆ.
ಹೈಕೋರ್ಟ್ ತೀರ್ಪು ಏನು?
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ"ಮಕ್ಕಳು 6/75ನೇ ಭಾಗಕ್ಕೆ ಅರ್ಹರಾಗಿದ್ದು, ಈರಮ್ಮ 6/75ನೇ ಪಾಲು ಜೊತೆಗೆ 1/25ರಷ್ಟು ಭಾಗಕ್ಕೆ ಅರ್ಹರಾಗಿದ್ದಾರೆ. ಒಟ್ಟಾರೆ ಇದು 9/75ರಷ್ಟು ಆಸ್ತಿ ಆಗಲಿದೆ. ಆ ರೀತಿ ವಿಭಜನೆ ಮಾಡಿ ಡಿಕ್ರಿ ಮಾಡಬೇಕು" ಎಂದು ಆದೇಶ ಮಾಡಿದೆ.
ಈರಮ್ಮ ಪತಿಯ ಆಸ್ತಿಯಲ್ಲಿನ ಭಾಗದ ಪೈಕಿ 1/25ನೇ ಭಾಗಕ್ಕೆ ಅರ್ಹರಾಗುತ್ತಾರೆ. ಮೃತ ಪುತ್ರ ಭೀಮರೆಡ್ಡಿಯ ಒಟ್ಟಾರೆ 6/25ನೇ ಭಾಗದಲ್ಲಿ(1/5 + 1/25) ಅವರ ಪತ್ನಿ, ಪುತ್ರಿ ಹಾಗೂ ಈರಮ್ಮ ಸಮಾನ ಪಾಲಿಗೆ ಅರ್ಹರು. ಹಾಗಾದಾಗ ಈರಮ್ಮ ಪಾಲು 6/75ನೇ ಭಾಗದಷ್ಟಾಗುತ್ತದೆ ಎಂದು ನ್ಯಾಯಪೀಠ ಆದೇಶ ಮಾಡಿದೆ. ಅಲ್ಲದೆ, ಪುತ್ರ ಸಾವನ್ನಪ್ಪಿರುವುದನ್ನು ಪರಿಗಣಿಸಲು ವಿಫಲವಾಗಿದ್ದ ಎರಡು ಅಧೀನ ನ್ಯಾಯಾಲಯಗಳ ಆದೇಶಗಳನ್ನು ನ್ಯಾಯಾಲಯ ಮಾರ್ಪಾಟು ಮಾಡಿದೆ.
ಪ್ರಕರಣವೇನು?
ಹನುಮಂತರೆಡ್ಡಿ-ಈರಮ್ಮ ದಂಪತಿಗೆ ಪೊರಸರೆಡ್ಡಿ, ಭೀಮರೆಡ್ಡಿ (ಸಾವನ್ನಪ್ಪಿದ್ದಾರೆ), ರೇವಮ್ಮ ಮತ್ತು ಬಸವರೆಡ್ಡಿ ಎಂಬ ನಾಲ್ಕು ಮಕ್ಕಳಿದ್ದಾರೆ. ಹನುಮಂತ ರೆಡ್ಡಿ ಮೃತಪಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಧವೆ ಪತ್ನಿಯರಿಗೆ ಆಸ್ತಿಯಲ್ಲಿ ಸ್ವತಂತ್ರ ಪಾಲು ಇರುವುದಿಲ್ಲ. ಗಂಡನ ಪಾಲಿನಲ್ಲಿ ಅವರಿಗೆ ಹಕ್ಕಿರುತ್ತದೆ. ಪ್ರಸಕ್ತ ಪ್ರಕರಣದಲ್ಲಿ ದಂಪತಿಯ ಮತ್ತೊಬ್ಬ ಪುತ್ರ ಭೀಮರೆಡ್ಡಿ ಸಹ ಮೃತ ಪಟ್ಟಿದ್ದಾರೆ. ಆಸ್ತಿ ವಿಭಾಗ ಮಾಡುವಾಗ ಎರಡು ಅಧೀನ ನ್ಯಾಯಾಲಯಗಳು ಎರಡನೇ ಪುತ್ರ ಭೀಮರೆಡ್ಡಿ ನಿಧನರಾಗಿರುವ ವಿಚಾರ ಪರಿಗಣಿಸುವಲ್ಲಿ ವಿಫಲವಾಗಿದ್ದವು. ಮೃತ ಪುತ್ರನ ಆಸ್ತಿಯ ಪಾಲಿನಲ್ಲಿ ತಾಯಿಗೂ ಹಕ್ಕಿರುವುದನ್ನು ಅಧೀನ ಕೋರ್ಟ್ಗಳು ಗಮನಿಸಿರಲಿಲ್ಲ. ಇದೆಲ್ಲವನ್ನೂ ಪರಿಗಣಿಸಿದ ಹೈಕೋರ್ಟ್ ವಿಧವೆ ಈರಮ್ಮಗೆ ಆಸ್ತಿಯಲ್ಲಿ ಹಕ್ಕಿದ್ದು, ಅದಕ್ಕೆ ತಕ್ಕಂತೆ ಪಾಲು ಮಾಡಿಕೊಡಲೇಬೇಕು ಎಂದು ಆದೇಶವನ್ನು ನೀಡಿದೆ.












Click it and Unblock the Notifications