ವರುಣ ಚುನಾವಣಾ ಕಣ; ಜೆಡಿಎಸ್ ಪಕ್ಷವನ್ನು ಏಕೆ ಕಡೆಗಣಿಸುವಂತಿಲ್ಲ?
ಮೈಸೂರು, ಮೇ 03; ಈ ಬಾರಿಯ ಚುನಾವಣೆಯಲ್ಲಿ ಮೈಸೂರಿನ ವರುಣ ಕ್ಷೇತ್ರ ರಾಜ್ಯ ಮಾತ್ರವಲ್ಲ ದೇಶದ ಗಮನ ಸೆಳೆದಿದೆ. ಸಿದ್ದರಾಮಯ್ಯ vs ವಿ. ಸೋಮಣ್ಣ ಕದನದಲ್ಲಿ ಯಾರಿಗೆ ಜಯ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ವಿ. ಸೋಮಣ್ಣ ಗೆಲ್ಲಿಸಲೇ ಬೇಕು ಎಂದು ರಾಜ್ಯ, ಕೇಂದ್ರದ ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ.
ಬಾದಾಮಿ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯ ಮೈಸೂರಿನ ವರುಣಗೆ ಬಂದು ಚುನಾವಣೆಗೆ ನಿಂತಿದ್ದಾರೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಹಾಲಿ ಶಾಸಕ ವಿ. ಸೋಮಣ್ಣರನ್ನು ವರುಣಗೆ ತಂದು ನಿಲ್ಲಿಸಿರುವ ಬಿಜೆಪಿ ಲಿಂಗಾಯತ ದಾಳವನ್ನು ಉರುಳಿಸಿದೆ. ಆದರೆ ಸೋಮಣ್ಣ ಚಾಮರಾಜನಗರದಲ್ಲಿಯೂ ಕಣಕ್ಕಿಳಿದಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸಿರುವುದು ಒಂದು ಕಡೆ ಮಾತ್ರ.

ವರುಣದಲ್ಲಿ ಸಿದ್ದರಾಮಯ್ಯ, ವಿ. ಸೋಮಣ್ಣ ನಡುವೆ ನೇರ ಸ್ಪರ್ಧೆ. ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಆದರೆ ಕಣದಲ್ಲಿ ಬಿಎಸ್ಪಿ, ಜೆಡಿಎಸ್ ಅಭ್ಯರ್ಥಿಗಳು ಸಹ ಇದ್ದಾರೆ. ಜೆಡಿಎಸ್ ಪಕ್ಷವನ್ನು ಏಕೆ ಕಡೆಗಣಿಸಬಾರದು? ಎಂದು ಇಲ್ಲಿ ವಿವರಣೆ ನೀಡಲಾಗಿದೆ.
ವರುಣ ಜೆಡಿಎಸ್ ಅಭ್ಯರ್ಥಿ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿಸಬೇಕು ಎಂದು ಬಿಜೆಪಿ ಹೇಗೆ ತಂತ್ರ ರೂಪಿಸಿದೆಯೋ? ಹಾಗೆ ಜೆಡಿಎಸ್ ಸಹ ವ್ಯೂಹ ರಚನೆ ಮಾಡಿದೆ. ವರುಣದಲ್ಲಿ ಮೊದಲು ಪಕ್ಷ ಅಭಿಷೇಕ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಬಳಿಕ ಅಭ್ಯರ್ಥಿ ಬದಲಾವಣೆ ಮಾಡಿದೆ. ಮಾಜಿ ಶಾಸಕ ಡಾ. ಭಾರತಿ ಶಂಕರ್ ಸಿದ್ದರಾಮಯ್ಯ, ವಿ. ಸೋಮಣ್ಣ ಎದುರಾಳಿ.

ಡಾ. ಭಾರತಿ ಶಂಕರ್ ತಿ. ನರಸೀಪುರ ಕ್ಷೇತ್ರದ ಮಾಜಿ ಶಾಸಕರು. 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಅವರು 28,858 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಎದುರಾಳಿಯಾಗಿದ್ದ ಜೆಡಿಎಸ್ನ ಎಚ್. ಸಿ. ಮಹದೇವಪ್ಪ 21,372 ಮತಗಳನ್ನು ಪಡೆದು ಸೋಲು ಕಂಡಿದ್ದರು.
2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ವರುಣ. ತಿ. ನರಸೀಪುರ, ಮೈಸೂರು ಮತ್ತು ನಂಜನಗೂಡು ತಾಲೂಕಿನ ಗ್ರಾಮಗಳನ್ನು ಒಳಗೊಂಡಿದೆ. 2008 ಮತ್ತು 2013ರಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಅವರು ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟರು, ಕಾಂಗ್ರೆಸ್ನ ಯತೀಂದ್ರ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು.
ಜೆಡಿಎಸ್ ಪಡೆದ ಮತಗಳು; ವರುಣ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ 2008ರ ಚುನಾವಣೆಯಲ್ಲಿ 4,133 ಮತ, 2013ರ ಚುನಾವಣೆಯಲ್ಲಿ 2,686 ಮತ್ತು 2018ರ ಚುನಾವಣೆಯಲ್ಲಿ 28,123 ಮತಗಳನ್ನು ಪಡೆದಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ನ ಪ್ರಚಾರ ತಂತ್ರವೇ ಬೇರೆಯಾಗಿದೆ. ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯ ಕಾರಣ ಎಂದು ಪ್ರಚಾರ ನಡೆಸುತ್ತಿದೆ.
ವರುಣ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2,34,533 ಮತದಾರರು ಇದ್ದಾರೆ. ಲಿಂಗಾಯತ ಮತಗಳು ಹೆಚ್ಚಿವೆ, ಆದ್ದರಿಂದಲೇ ಬಿಜೆಪಿ ವಿ. ಸೋಮಣ್ಣರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಲಿಂಗಾಯತ ಮತಗಳನ್ನು ಸೆಳೆದರೆ ಅದು ಬಿಜೆಪಿಗೆ ಹಿನ್ನಡೆ ಉಂಟು ಮಾಡುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿ ಸಹ ವರುಣ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಪಕ್ಷವನ್ನು ಹೊರತುಪಡಿಸಿ ಸಿದ್ದರಾಯ್ಯ ವರುಣದಲ್ಲಿ ವರ್ಚಸ್ಸು ಹೊಂದಿದ್ದಾರೆ. ಆದ್ದರಿಂದ ಅವರನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಬಿಜೆಪಿಯಿಂದ ಬೇರೆ ಯಾರೇ ಅಭ್ಯರ್ಥಿಯಾಗಿದ್ದರೂ ಆ ಲೆಕ್ಕಾಚಾರವೇ ಬೇರೆ, ಸೋಮಣ್ಣ ಬಂದ ಮೇಲಿನ ಲೆಕ್ಕಾಚಾರವೇ ಬೇರೆ ಇದೆ ಎಂಬ ಮಾತಿದೆ.
ಮೇ 10ರಂದು ಮತದಾನ ನಡೆಯಲಿದೆ. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ವರುಣದಲ್ಲಿ ಗೆಲುವು ಯಾರಿಗೆ? ಎಂದು ಜನರು ಅಲ್ಲಿಯ ತನಕ ಮಾತುಕತೆ ನಡೆಸಬಹುದಾಗಿದೆ.












Click it and Unblock the Notifications