ಯುದುವೀರ್ ರಾಜಕಾರಣಕ್ಕೆ ಬರುತ್ತೇನೆ ಅಂದಿದ್ದು ಯಾಕೆ?
ಮೈಸೂರು, ಸೆಪ್ಟೆಂಬರ್.04: ಮೈಸೂರಿನ ಅರಸ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕಾರಣಕ್ಕೆ ಬರುತ್ತಾರಂತೆ. ಹೌದು.. ಸುದ್ದಿಗಾರೊಂದಿಗೆ ಮಾತನಾಡುತ್ತ ಅವರೇ ರಾಜಕಾರಣದ ಬಗ್ಗೆ ಇರುವ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ಸಮಯ ಬಂದಾಗ ಎಲ್ಲವನ್ನು ಹೇಳುತ್ತೇನೆ. ರಾಜಕಾರಣದ ಬಗ್ಗೆ ಆಸಕ್ತಿಯಿದ್ದು ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಮೈಸೂರು ರಾಜಮನೆತನದ ಯುವರಾಜನ ಪಟ್ಟಕ್ಕೆ ಅಂತಿಮವಾಗಿ ಆಯ್ಕೆಯಾದ ಯದುವೀರ್ ಇದೀಗ ರಾಜಕಾರಣದ ಬಗ್ಗೆ ಸುಳಿವು ನೀಡಿದ್ದು ಕರ್ನಾಟಕದ ರಾಜಕೀಯ ಪಂಡಿತರಲ್ಲಿ ಚರ್ಚೆ ಹುಟ್ಟುಹಾಕಿರುವುದೆಂತೂ ಸತ್ಯ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ಯದುವೀರ್ ರಾಜಕಾರಣಕ್ಕೆ ಕಾಲಿಡಲು ಕಾರಣಗಳನ್ನು ಹುಡುಕುತ್ತ ಹೋದರೆ ಅನೇಕ ಅಂಶಗಳು ಎದುರಾಗುತ್ತವೆ. ದಸರಾ ಆಚರಣೆ ಸಂಬಂಧ, ಆಸ್ತಿ ಹಂಚಿಕೆ ಸಂಬಂಧ ಸರ್ಕಾರ ಮತ್ತು ರಾಜಮನೆತನದ ನಡುವೆ ಎದುರಾಗಿದ್ದ, ಮುಂದೆ ಎದುರಾಗಬಹುದಾದ ಎಲ್ಲ ಸಂಘರ್ಷಗಳಿಗೆ ಕೊನೆ ಹಾಡಲು ಯದುವೀರ್ ರಾಜಕೀಯ ಅಧಿಕಾರವೊಂದನ್ನು ಬಯಸಿದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತಿದೆ.[ಸೂತಕದ ನಡುವೆ ಎದ್ದಿದೆ ಒಡೆಯರ್ ಆಸ್ತಿ ಪ್ರಶ್ನೆ]
ಸರ್ಕಾರದ ಆಚರಣೆ
ನಾಡಹಬ್ಬ ದಸರಾವನ್ನು ಸರ್ಕಾರವೂ ಆಚರಣೆ ಮಾಡುತ್ತದೆ. ಅತ್ತ ಅರಮನೆಯಲ್ಲಿ ರಾಜಮನೆತನದವರೂ ಆಚರಿಸುತ್ತಾರೆ. ಬರದ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.
ಖಾಸಗಿ ದರ್ಬಾರ್
ಸರ್ಕಾರ ದಸರಾವನ್ನು ಯಾವ ಬಗೆಯಲ್ಲಾದರೂ ಆಚರಿಸಿಕೊಳ್ಳಲಿ, ರಾಜಮನೆತನದವರು ಪರಂಪರೆಗೆ ಅನುಗುಣವಾಗಿ ದಸರಾ ಆಚರಣೆ ಮಾಡಲಿದ್ದೇವೆ. ಖಾಸಗಿ ದರ್ಬಾರ್ ಹೇಗೆ ನಡೆಸಬೇಕು ಎಂಬುದನ್ನು ನಾವೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ರಾಣಿ ಪ್ರಮೋದಾದೇವಿ ಒಡೆಯರ್ ಹೇಳಿಕೆ ನೀಡಿದ್ದಾರೆ.
ರಾಜಧನ ಬೇಕೆ?
ರಾಜಮನೆತನದವರಿಗೆ ಸರ್ಕಾರ ಏತಕ್ಕೆ ಗೌರವ ಧನ ನೀಡಬೇಕೆಂದು ಇತಿಹಾಸತಜ್ಞ ಪ್ರೊ. ನಂಜರಾಜೇ ಅರಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಇದಕ್ಕೆ ಉತ್ತರಿಸಿದ್ದ ರಾಣಿ ಪ್ರಮೋದಾದೇವಿ ಅಂಬಾರಿ ನೀಡುವುದಕ್ಕೆ ಪ್ರತಿಯಾಗಿ ಸರ್ಕಾರ ಗೌರವ ಧನ ನೀಡುತ್ತದೆಯೇ ಹೊರತು ರಾಜಮನೆತನಕ್ಕೆ ಗೌರವಧನ ನೀಡುತ್ತಿಲ್ಲ ಎಂದು ತಿರುಗೇಟು ನೀಡಿದ್ದರು.
ಶ್ರೀಕಂಠದತ್ತ ಒಡೆಯರ್
ಮೈಸೂರು ಅರಸ ಶ್ರೀಕಂಠದತ್ತ ಒಡೆಯರ್ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆ ಮೂಲಕ ರಾಜಕಾರಣದಲ್ಲಿ ನೆಲೆ ಕಂಡುಕೊಂಡಿದ್ದರು. ಯದುವೀರ್ ಸಹ ಅಂಥದ್ದೇ ಯಾವುದಾದರೂ ಪ್ರಯತ್ನ ಮಾಡಲಿದ್ದಾರೆಯೇ? ಕಾದು ನೋಡಬೇಕು.
ಬೆಂಗಳೂರು ಅರಮನೆ ವಿವಾದ
ಹಿಂದೆ ಮೈಸೂರು ರಾಜರಿಗೆ ಸೇರಿದ್ದ್ ಬೆಂಗಳೂರು ಅರಮನೆ ಜಾಗದಲ್ಲಿ ರಸ್ತೆ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ಮತ್ತು ಒಡೆಯರ್ ನಡುವೆ ವಿವಾದ ಉಂಟಾಗಿತ್ತು. ಆದರೆ ನಂತರ ಬೆಂಗಳೂರು ಅರಮನೆ ಜಾಗವನ್ನು ರಸ್ತೆ ವಿಸ್ತರಣೆಗೆ ಬಳಸಿಕೊಳ್ಳಬಹುಹುದು ಎಂದು ಸುಪ್ರೀಂ ಕೋರ್ಟ್ ತೀರ್ಮಾನ ನೀಡಿತ್ತು.
ಅಧಿಕಾರವೇ ಉತ್ತರವೇ?
ಸರ್ಕಾರ ಅಥವಾ ಸರ್ಕಾರದ ಮೇಲೆ ಒತ್ತಡ ತರುವಂಥ ಅಧಿಕಾರ ಕೈಯಲ್ಲಿದ್ದರೆ ಇಂಥ ವಿವಾದಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುಹುದು ಎಂಬುದನ್ನು ಯದುವೀರ್ ಮನಗಂಡಂತಿದೆ. ಅಲ್ಲದೇ ಮೈಸೂರು ಸಂಸ್ಥಾನದ ಆಸ್ತಿ ಕಾಪಾಡಲು ಇದೊಂದು ಅಸ್ತ್ರವಾಗಿ ಬಳಕೆಯಾಗುತ್ತದೆ ಎಂದು ಅರಿತಿರುವ ಯದುವೀರ್ ರಾಜಕಾರಣಕ್ಕೆ ಬರುವ ಮಾತನ್ನಾಡಿದ್ದಾರೆ.