ರಾಜ್ಯಸಭೆ ಚುನಾವಣೆಯಲ್ಲಿ 'ಕನ್ನಡ' ಮಂತ್ರ, ಅಭ್ಯರ್ಥಿಗಳ ಆಯ್ಕೆ ಕಗ್ಗಂಟು
ಬೆಂಗಳೂರು, ಮಾರ್ಚ್ 7: ರಾಜ್ಯಸಭೆಗೆ ಇದೇ 23ರಂದು ಚುನಾವಣೆ ನಡೆಯಲಿದ್ದು ಕರ್ನಾಟಕದಿಂದ ನಾಲ್ವರು ಆಯ್ಕೆಯಾಗಬೇಕಿದೆ. ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಇಬ್ಬರನ್ನು ಮತ್ತು ಬಿಜೆಪಿ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸಬಹುದಾಗಿದೆ. ಇನ್ನೊಂದು ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಪರ್ಧೆ ಇದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿದ್ದು, 'ಕನ್ನಡ ಆತ್ಮಗೌರವ'ದ ಬಗ್ಗೆ ರಾಜ್ಯಸಭೆ ಚುನಾವಣೆಯಲ್ಲಿ ಚರ್ಚೆ ನಡೆಯುತ್ತಿದೆ.
ಜೆಡಿಎಸ್ ಜೊತೆ ಮೈತ್ರಿಗೆ ಸಿದ್ದರಾಮಯ್ಯ ವಿರೋಧ!
ಕಾಂಗ್ರೆಸ್ ಕನ್ನಡಿಗರನ್ನೇ ರಾಜ್ಯಸಭೆಗೆ ಕಳುಹಿಸಲು ಚಿಂತನೆ ನಡೆಸಿದೆ. ಮಂಗಳವಾರ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಡುವೆ ನಡೆದ ಸಭೆಯಲ್ಲಿ ಸ್ಯಾಮ್ ಪಿತ್ರೋಡಾ ಮತ್ತು ಜನಾರ್ದನ್ ದ್ವಿವೇದಿಯವರನ್ನು ರಾಜ್ಯಸಭೆಗೆ ಕಳುಹಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ರಾಹುಲ್ ಗಾಂಧಿ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳೀಯರನ್ನು ಆಯ್ಕೆ ಮಾಡಿದರೆ ಉತ್ತಮ ಎಂದಿದ್ದಾರೆ.
ರಾಜ್ಯಸಭೆ ಚುನಾವಣೆ : ಬಿಜೆಪಿ ಅಭ್ಯರ್ಥಿಯಾಗಲು ಪೈಪೋಟಿ!
ಹೀಗಾಗಿ ಮಂಗಳವಾರದ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರದೆ ಸಿದ್ದರಾಮಯ್ಯ ರಾಜ್ಯಕ್ಕೆ ವಾಪಾಸಾಗಿದ್ದಾರೆ.
ಜಾತಿ ಲೆಕ್ಕಾಚಾರ
ಸಿದ್ದರಾಮಯ್ಯ ರಾಜ್ಯಸಭೆ ಚುನಾವಣೆಯಲ್ಲೂ ತಮ್ಮ ಜಾತಿ ಲೆಕ್ಕಾಚಾರವನ್ನು ಮುಂದುವರಿಸಲು ಇಚ್ಛಿಸಿದ್ದಾರೆ. ಈ ಕಾರಣಕ್ಕೆ ತಲಾ ಓರ್ವ ದಲಿತ, ಅಲ್ಪಸಂಖ್ಯಾತ ಮತ್ತು ಲಿಂಗಾಯತ ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಕಳುಹಿಸಲು ಯೋಚಿಸಿದ್ದಾರೆ.
ರೋಷನ್ ಬೇಗ್, ಚನ್ನಾರೆಡ್ಡಿ?
ಮೊದಲೆರಡು ಸ್ಥಾನಗಳಿಗೆ ಅಲ್ಪಸಂಖ್ಯಾತ ಕೋಟಾದಿಂದ ಸಚಿವ ರೋಷನ್ ಬೇಗ್ ಹಾಗೂ ತಮ್ಮ ಆಪ್ತ ಚನ್ನಾರೆಡ್ಡಿಯವರನ್ನು ಕಳುಹಿಸುವುದು ಸಿದ್ದರಾಮಯ್ಯನವರ ತಂತ್ರವಾಗಿದೆ. ಮೂರನೇ ಸ್ಥಾನಕ್ಕೆ ಲಿಂಗಾಯತ ಕೋಟಾದಿಂದ ಶಾಮನೂರು ಶಿವಶಂಕರಪ್ಪ ಹಾಗೂ ರಾಣಿ ಸತೀಶ್ ಅವರ ಹೆಸರೂ ಚರ್ಚೆಗೆ ಬಂದಿದೆ. ಆದರೆ ಅಂತಿಮ ತೀರ್ಮಾನಕ್ಕೆ ಇನ್ನೂ ಬಂದಿಲ್ಲ.
ಹೈಕಮಾಂಡ್ ಪ್ರಸ್ತಾಪಕ್ಕೆ ವಿರೋಧ
ಇನ್ನು ಹೈಕಮಾಂಡ್ ಪಿತ್ರೋಡಾ, ದ್ವಿವೇದಿ ಜತೆಗೆ ಮೀರಾ ಕುಮಾರ್ ರನ್ನೂ ರಾಜ್ಯಸಭೆಗೆ ಕಳುಹಿಸಲು ಉತ್ಸುಕವಾಗಿದೆ. ಆದರೆ ಚುನಾವಣೆ ಹತ್ತಿರವಿರುವಾಗ ಬೇರೆ ರಾಜ್ಯದವರನ್ನು ಕಳಹಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡಿಲ್ಲ.
ಬಿಜೆಪಿಯಲ್ಲೀ ಇದೇ ಸಮಸ್ಯೆ
ಇತ್ತ ಬಿಜೆಪಿ ಕೂಡ ರಾಜ್ಯಸಭೆಗೆ ರಾಜೀವ್ ಚಂದ್ರಶೇಖರ್ ಮತ್ತು ವಿಜಯ್ ಸಂಕೇಶ್ವರ್ ಅವರನ್ನು ಕಳುಹಿಸುವಂತೆ ಪ್ರಸ್ತಾಪ ಮುಂದಿಟ್ಟಿದೆ. ಕನ್ನಡ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡರೆ ಕಷ್ಟ ಎಂಬ ಕಾರಣಕ್ಕೆ ಮಂಗಳವಾರ ರಾಜೀವ್ ಚಂದ್ರಶೇಖರ್ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಒಂದನ್ನು ಫೇಸ್ಬುಕ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಒಂದೊಮ್ಮೆ ಬಿಜೆಪಿಯೂ ಕನ್ನಡ ಕಾರ್ಡ್ ಗೆ ಜೋತು ಬಿದ್ದರೆ ವಿಜಯ್ ಸಂಕೇಶ್ವರ್ ರಾಜ್ಯಸಭೆಗೆ ಹೋಗಲಿದ್ದಾರೆ.
ಸಿಎಂ ಬಿತ್ತಿದ ಬೆಳೆ
ಕನ್ನಡ ಆತ್ಮಗೌರವ ಚುನಾವಣೆಯಲ್ಲಿ ಪ್ರತಿಧ್ವನಿಸುತ್ತಿರುವುದರಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಪಕ್ಷಗಳಿಗೆ ಸವಾಲಿನ ಕೆಲಸವಾಗಿದೆ. ಸಿದ್ದರಾಮಯ್ಯನವರು ತಮ್ಮ ಪ್ರತೀ ಭಾಷಣದಲ್ಲೂ 'ಇದು ಕನ್ನಡಿಗರ ಹೆಮ್ಮ', 'ಕನ್ನಡಿಗರಿಗೆ ಮಾಡಿದ ಅವಮಾನ' ಎಂದೆಲ್ಲಾ ಕನ್ನಡವನ್ನು ಎಳೆದು ತರುತ್ತಿದ್ದು ಇದೀಗ ರಾಜ್ಯಸಭೆ ಚುನಾವಣೆಯಲ್ಲೂ ಇದೇ ಮಾತು ಕೇಳಿ ಬಂದಿದೆ. ಜತೆಗೆ ಹಲವು ಸಂಘಟನೆಗಳು ಕೂಡ ಕನ್ನಡಿಗರನ್ನೇ ರಾಜ್ಯಸಭೆಗೆ ಕಳುಹಿಸಲು ಒತ್ತಡ ಹೇರುತ್ತಿವೆ.