ಸಿದ್ದರಾಮಯ್ಯರ ಪ್ರತಿಭಟನೆ ಯಾವ ಪುರುಷಾರ್ಥಕ್ಕೆ: ರವಿಕುಮಾರ್ ಪ್ರಶ್ನೆ
ಬೆಂಗಳೂರು, ಆಗಸ್ಟ್ 21; ಕರ್ನಾಟಕ ರಾಜಕೀಯದಲ್ಲಿ ಮೊಟ್ಟೆ ವಿಚಾರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಡಿಕೇರಿಗೆ ಆಗಮಿಸಿದ್ದ ವೇಳೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಈ ಘಟನೆ ಬಳಿಕ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, 'ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ. ಬಿಜೆಪಿ ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26 ರಂದು ಕೊಡಗಿನ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ' ಎಂದು ಘೋಷಣೆ ಮಾಡಿದ್ದರು.
ಈ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. "ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ. ಕೊಡಗಿಗೆ ತೆರಳಿ 26ರಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸಿದ್ದರಾಮಯ್ಯ ಹೇಳಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಸಾರವಾಗುತ್ತಿದೆ. ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಕೊಡಗಿಗೆ ಹೋಗಲಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಸಿದ್ದರಾಮಯ್ಯರಿಗೆ ನೈತಿಕತೆ, ಘನತೆ, ಮಾನ- ಮರ್ಯಾದೆ ಇದ್ದರೆ ಯಾವ ಮುಖ ಇಟ್ಟುಕೊಂಡು ಪ್ರತಿಭಟನೆಗೆ ಕೊಡಗಿಗೆ ಹೋಗಲಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಪ್ರತಿಭಟನೆ ಮಾಡಲಿದ್ದಾರೆ?" ಎಂದರು.

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ
"ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ ಎಂದು ಸಿದ್ದರಾಮಯ್ಯ ಎದೆಯುಬ್ಬಿಸಿ ಹೇಳಿದ್ದರು. ನಿಮ್ಮದೇ ಕಾಂಗ್ರೆಸ್ನ ಕಾರ್ಯಕರ್ತ ಸಂಪತ್, ತಾನೇ ಕಾರಿಗೆ ಮೊಟ್ಟೆ ಎಸೆದುದಾಗಿ ಹೇಳಿದ್ದಾನೆ. ಹಾಗಾಗಿ ನೈತಿಕತೆ ಇದ್ದರೆ ನಿಮ್ಮ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡಿ. ಇಲ್ಲವಾದರೆ ನಿಮ್ಮ ಪ್ರತಿ ಮಾತು ಸುಳ್ಳೆಂದು ಸಾಬೀತಾಗಲಿದೆ" ಎಂದು ಎನ್. ರವಿಕುಮಾರ್ ಹೇಳಿದರು.

ಸಮಾಜದಲ್ಲಿ ನಿಮ್ಮ ಘನತೆ, ಗಾಂಭೀರ್ಯ
"ಶಿವಮೊಗ್ಗದಲ್ಲಿ ನಡೆದ ಹರ್ಷನ ಹತ್ಯೆ, ಮಂಗಳೂರಿನಲ್ಲಿ ನಡೆದ ಹತ್ಯೆ ಇವೆಲ್ಲವುಗಳ ಬಗ್ಗೆ ನೀವು ಮಾತನಾಡಿದ್ದೀರಲ್ಲವೇ?. ಎಲ್ಲ ಮಾತುಗಳೂ ಸಂಶಯವನ್ನು ವ್ಯಕ್ತಪಡಿಸುವಂತಿವೆ. ಸಮಾಜದಲ್ಲಿ ನಿಮ್ಮ ಬಗೆಗಿನ ಘನತೆ, ಗಾಂಭೀರ್ಯ ಯಾವುದೂ ಉಳಿಯುವುದಿಲ್ಲ. ಇದು ಕಾಂಗ್ರೆಸ್ ಟೂಲ್ಕಿಟ್, ಇದು ದೆಹಲಿಯಿಂದ ಬಂದಿದೆಯೇ? ಅಥವಾ ನೀವೇ ಹೆಣೆದಿದ್ದೀರಾ?" ಎಂದು ಎನ್. ರವಿಕುಮಾರ್ ತಿಳಿಸಿದರು.

ನಿಮಗೆ ನಾಚಿಕೆ ಆಗುವುದಿಲ್ಲವೇ?
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, "ಸಾವರ್ಕರ್ ಈ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು. ನೇತಾಜಿ ಸುಭಾಷ್ಚಂದ್ರ ಬೋಸ್ ಮತ್ತು ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಸಮಸಮವಾಗಿ ನಿಲ್ಲುತ್ತಾರೆ. ಕಾಂಗ್ರೆಸ್ನವರು ಸಾವರ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅವಮಾನ ಮಾಡಿದ್ದಾರೆ. ಬೂಟು ಕಾಲಿನಲ್ಲಿ ತುಳಿದಿದ್ದಾರೆ. ನಿಮಗೇನಾದರೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೌರವ ಇದೆಯೇ? ನಿಮಗೆ ನಾಚಿಕೆ ಆಗುವುದಿಲ್ಲವೇ?" ಎಂದು ಕೇಳಿದರು.

ಗಲಭೆ ಎಬ್ಬಿಸುವ ಷಡ್ಯಂತ್ರ
"ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿ, ಅವರಿಂದಲೇ ಮೊಟ್ಟೆ ಹೊಡೆಯುವಂತೆ ಮಾಡಿ ಇದನ್ನು ಬಿಜೆಪಿ ತಲೆಗೆ ಕಟ್ಟುತ್ತೀರಾ?. ಈ ಥರ ಎಷ್ಟು ಟೂಲ್ಕಿಟ್ ನಿಮ್ಮ ಬಳಿ ಇವೆ?. ಇಂಥ ಎಷ್ಟು ಷಡ್ಯಂತ್ರ ಮಾಡಿದ್ದೀರಿ?. ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತೀರಾ?. ಕೋಮು ಗಲಭೆಗೆ ಷಡ್ಯಂತ್ರ ರೂಪಿಸಿದ್ದೀರಾ?. ಕಾಂಗ್ರೆಸ್ ಕಾರ್ಯಕರ್ತರಿಗೆ ನೈತಿಕತೆ, ದೇಶಭಕ್ತಿ ಇದ್ದರೆ, ಮೌಲ್ಯಗಳಿದ್ದರೆ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಲಿ. ಕೊಡಗಿನಲ್ಲಿ ಮುಸ್ಲಿಮರ ಜೊತೆಗೂಡಿ ಗಲಭೆ ಎಬ್ಬಿಸುವ ಷಡ್ಯಂತ್ರ ಇದರ ಹಿಂದಿದೆ" ಎಂದು ಎನ್. ರವಿಕುಮಾರ್ ಆರೋಪ ಮಾಡಿದರು.

ಯಾವ ಪಕ್ಷದ ಕಾರ್ಯಕರ್ತ
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದವರು ಕಾಂಗ್ರೆಸ್ ಪಕ್ಷದವೋ?, ಬಿಜೆಪಿಯವನೋ? ಎಂಬ ಚರ್ಚೆ ಜೋರಾಗಿದೆ. ಈ ಕುರಿತು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, "ಆಪರೇಷನ್ ಕಮಲ ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ ಆಪರೇಷನ್ ಕಮಲ ಕೂಡಾ ಬಿಜೆಪಿ ಕರ್ನಾಟಕ ನಡೆಸುತ್ತದೆ ಎಂದು ಮಡಿಕೇರಿಯಲ್ಲಿ ಸಾಬೀತಾಗಿದೆ. ಬಿಜೆಪಿಯ ಇಂತಹ ನಾಟಕಗಳೆಲ್ಲ ಹಳತಾಗಿದೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ. ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ?" ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications