ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ರಮೇಶ್ ಜಾರಕಿಹೊಳಿ?
Recommended Video

ಬೆಂಗಳೂರು, ಅಕ್ಟೋಬರ್ 17 : ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೌದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಚಿವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪತ್ರ ಬರೆದಿದ್ದಾರೆ.
ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಅವರು ಉದ್ದೇಶ ಪೂರ್ವಕವಾಗಿ ಗೈರಾಗುತ್ತಿದ್ದಾರೆ. ಸತತವಾಗಿ ಮೂರು ಸಭೆಗೆ ಅವರು ಗೈರಾಗಿದ್ದಾರೆ. ಇದರಿಂದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರು ಕರ್ನಾಟಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಸಚಿವರು. ಆದರೆ, ಅವರು ಸಂಪುಟ ಸಭೆಗೆ ಹಾಜರಾಗುತ್ತಿಲ್ಲ ಮತ್ತು ಕೆಲವು ದಿನಗಳಿಂದ ಸರ್ಕಾರಿ ಕಾರು ಬಳಸುತ್ತಿಲ್ಲ.
ಸಂಪುಟ ಸಭೆಗೆ ಸತತವಾಗಿ ಗೈರಾಗುತ್ತಿರುವ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆಯಲಾಗಿತ್ತು. ಸರ್ಕಾರ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದೆ.

ಭೀಮಪ್ಪ ಗಡಾಧ ಪತ್ರ
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾಧ ಅವರು ಸರ್ಕಾರಕ್ಕೆ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಪತ್ರ ಬರೆದಿದ್ದಾರೆ. ಸತತವಾಗಿ ಸಂಪುಟ ಸಭೆಗೆ ಗೈರಾಗುತ್ತಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿದ್ದರು.

ಮುಖ್ಯ ಕಾರ್ಯದರ್ಶಿಗಳ ಪತ್ರ
ಭೀಮಪ್ಪ ಗಡಾಧ ಅವರ ಪತ್ರದ ಆಧಾರದ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿದ್ದಾರೆ. ಸಚಿವರು ಸತತವಾಗಿ ಗೈರು ಹಾಜರಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ನಿಯಮ ಏನು ಹೇಳುತ್ತದೆ
ನಿಯಮಗಳ ಪ್ರಕಾರ ದೀರ್ಘಕಾಲಿಕ ಅನಾರೋಗ್ಯ ಮತ್ತು ವಿದೇಶ ಪ್ರವಾಸದಲ್ಲಿದ್ದಾರೆ ಮಾತ್ರ ಸಚಿವರು ಸಂಪುಟ ಸಭೆಗೆ ಗೈರು ಹಾಜರಾಗಬಹುದು. ಆದರೆ, ರಮೇಶ್ ಜಾರಕಿಹೊಳಿ ಅವರಿಗೆ ಈ ಯಾವ ಕಾರಣಗಳು ಇಲ್ಲವಾದರೂ ಸತತ ಮೂರು ಸಂಪುಟ ಸಭೆಗೆ ಗೈರು ಹಾಜರಾಗಿದ್ದಾರೆ.

ಸಚಿವರು ಏನು ಹೇಳಿದ್ದರು?
ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ರಮೇಶ್ ಜಾರಕಿಹೊಳಿ ಅವರು, 'ಸಂಪುಟ ಸಭೆಗೆ ಗೈರಾಗಿದ್ದೇನೆ. ಮುಂದೆಯೂ ಗೈರಾಗುತ್ತೇನೆ. ನನ್ನದೊಂದು ಮುಖ್ಯ ಕೋರಿಕೆ ಈಡೇರಲು ದೇವರ ಮೊರೆ ಹೋಗಿದ್ದೇನೆ. ಕೋರಿಕೆ ಈಡೇರುವ ತನಕ ಸರ್ಕಾರಿ ವಾಹನ ಬಳಸುವುದಿಲ್ಲ. ಸಂಪುಟ ಸಭೆಗೂ ಹೋಗುವುದಿಲ್ಲ' ಎದು ಹೇಳಿದ್ದರು.












Click it and Unblock the Notifications