ವಜ್ಜಲ್, ಪಾಟೀಲ್ ಜೆಡಿಎಸ್ ತೊರೆದ ಕಾರಣ ಬಹಿರಂಗ
ಬೆಂಗಳೂರು, ಜನವರಿ 18 : ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ವಿಧಾನಸಭೆ ಚುನಾವಣೆ ಹತ್ತಿರವಿರುವಾಗಲೇ ಇಬ್ಬರು ಶಾಸಕರು ಪಕ್ಷ ಬಿಟ್ಟು, ಬಿಜೆಪಿ ಸೇರಿದ್ದಾರೆ.
ಲಿಂಗಸಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಮತ್ತು ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಮಲ್ಲೇಶ್ವರಂನಲ್ಲಿನ ಕಚೇರಿಯಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಬಿಜೆಪಿ ಸೇರಿದ ಇಬ್ಬರು ಜೆಡಿಎಸ್ ಶಾಸಕರು!
2013ರ ಚುನಾವಣೆಯಲ್ಲಿ ಜೆಡಿಎಸ್ 40 ಸ್ಥಾನಗಳಲ್ಲಿ ಜಯಗಳಿಸಿತ್ತು. 40 ಸದಸ್ಯರ ಪೈಕಿ ಚಿಕ್ಕಮಾದು ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈಗ ಇಬ್ಬರು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಪಕ್ಷ 3 ಸದಸ್ಯ ಬಲವನ್ನು ಕಳೆದುಕೊಂಡಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಕಾರಣಕ್ಕೆ 7 ಶಾಸಕರನ್ನು ಪಕ್ಷ ಅಮಾನತು ಮಾಡಿದೆ.
ಮತ್ತೆ ಆಪರೇಷನ್ ಕಮಲ : ಜೆಡಿಎಸ್, ಕಾಂಗ್ರೆಸ್ ನಾಯಕರು ಬಿಜೆಪಿಗೆ?
ಮಾನಪ್ಪ ವಜ್ಜಲ್ ಮತ್ತು ಶಿವರಾಜ್ ಪಾಟೀಲ್ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಬ್ಬರೂ ನಾಯಕರು ಪಕ್ಷ ತೊರೆದಿದ್ದು ಏಕೆ? ಎಂದು ಹೇಳಿದ್ದಾರೆ. ಶಾಸಕರು ಹೇಳಿದ್ದೇನು?
ಮಾನಪ್ಪ ವಜ್ಜಲ್ ಹೇಳಿದ್ದೇನು?
'ಕಳೆದ ಒಂದು ವರ್ಷದಿಂದ ಸಾಕಷ್ಟು ನೋವು ಅನುಭವಿಸಿದ್ದೇನೆ. ಲಿಂಗಸಗೂರು ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಕೆಲವರು ತಿರುಗಾಡುತ್ತಿದ್ದಾರೆ' ಎಂದು ಮಾನಪ್ಪ ವಜ್ಜಲ್ ಹೇಳಿದರು.
ಯಾವುದೇ ಪ್ರಯೋಜನವಾಗಿಲ್ಲ
'ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಪಕ್ಷದ ವರಿಷ್ಠರು ಮತ್ತು ರಾಜ್ಯಾಧ್ಯಕ್ಷರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದೇನೆ. ಬಿಜೆಪಿ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸುವೆ' ಎಂದು ಮಾನಪ್ಪ ವಜ್ಜಲ್ ತಿಳಿಸಿದರು.
ನಮ್ಮ ಮಾತಿಗೆ ಮನ್ನಣೆ ಸಿಕ್ಕಿಲ್ಲ
ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಶಿವರಾಜ್ ಪಾಟೀಲ್, 'ಜೆಡಿಎಸ್ ಪಕ್ಷದಲ್ಲಿ ನಮ್ಮ ಮಾತಿಗೆ ಮನ್ನಣೆ ಇರಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದರೂ ಯಾವುದೇ ಬದಲಾವಣೆ ಆಗಲಿಲ್ಲ. ಇದರಿಂದ ಬೇಸತ್ತು ಪಕ್ಷ ತೊರೆದಿದ್ದೇನೆ' ಎಂದರು.
ರಾಯಚೂರಿನಲ್ಲಿ ಭಾರೀ ಹಿನ್ನಡೆ
7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ರಾಯಚೂರು. ಲಿಂಗಸಗೂರು ಮತ್ತು ರಾಯಚೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ಈಗ ಇಬ್ಬರು ಪಕ್ಷ ಬಿಟ್ಟಿರುವುದರಿಂದ ಜೆಡಿಎಸ್ಗೆ ಭಾರೀ ಹಿನ್ನಡೆ ಉಂಟಾಗಿದೆ.
ಸ್ಪೀಕರ್ಗೆ ಪತ್ರ ರವಾನೆ
ಇಬ್ಬರೂ ಶಾಸಕರು ಬಿಜೆಪಿ ಸೇರುವ ಮುನ್ನ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ಅವರು ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಹಸ್ತಾಂತರ ಮಾಡಿದ್ದಾರೆ. ರಾಜೀನಾಮೆ ಅಂಗೀಕರಿಸುವ ಕುರಿತು ಸ್ಪೀಕರ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.