ಜನಾರ್ದನ ರೆಡ್ಡಿ ಬಂಧನ ಏಕೆ? ಮುಂದಿನ ನಡೆ ಏನು?
ಬೆಂಗಳೂರು, ನವೆಂಬರ್ 11: ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ ಸಿಸಿಬಿ ಭಾರಿ ಗಟ್ಟಿ ನಿರ್ಧಾರವನ್ನೇ ತಳೆದಿದೆ. ಇದು ಬಂಧಿಸುವ ಪ್ರಕರಣ ಅಲ್ಲ ಎಂದು ನಿನ್ನೆ ನ್ಯಾಯಾಲಯ ಕೂಡ ಅಭಿಪ್ರಾಯ ಪಟ್ಟಿತ್ತು ಆದರೆ ಸಿಸಿಬಿ ಇಂದು ರೆಡ್ಡಿ ಅವರನ್ನು ಬಂಧಿಸಿಯೇ ಬಿಟ್ಟಿದೆ.
ಸತತ 20 ಗಂಟೆಗಳ ವಿಚಾರಣೆ ಬಳಿಕ ರೆಡ್ಡಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿಸಲು ನಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಸಿಸಿಬಿ ಹೇಳಿದೆ ಹಾಗಾದರೆ ರೆಡ್ಡಿ ಅವರನ್ನು ಬಂಧಿಸಲು ಕಾರಣವೇನು?
ಜನಾರ್ದನ ರೆಡ್ಡಿ ಅವರು ಆಂಬಿಡೆಂಟ್ ಸಂಸ್ಥೆಯ ಮಾಲೀಕನಿಂದ ಲಂಚವಾಗಿ 20 ಕೋಟಿ ಹಣ ಅಥವಾ ಚಿನ್ನದ ದೊಡ್ಡ ಗಟ್ಟಿಯನ್ನು ಪಡೆದಿದ್ದಾರೆ ಎಂದು ಸಿಸಿಬಿ ಆರೋಪಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದ ರೆಡ್ಡಿ ಅವರ ವಿಚಾರಣೆ ಸಹ ನಡೆಸಿದೆ.
ರೆಡ್ಡಿ ಅವರು ಸಿಸಿಬಿ ಮುಂದೆ ನೀಡಿದ ಹೇಳಿಕೆ ಹಾಗೂ ಆಂಬಿಡೆಂಟ್ ಪ್ರಕರಣದ ಇತರ ಆರೋಪಿಗಳು ನೀಡಿದ ಹೇಳಿಕೆಗಳಿಗೆ ತಾಳೆ ಆಗಿಲ್ಲ, ಅಲ್ಲದೆ ಇಂದು ಬೆಳಿಗ್ಗೆ ಆಂಬಿಡೆಂಟ್ ಮಾಲೀಕ ಫರೀದ್ನನ್ನು ಸಿಸಿಬಿ ಕಚೇರಿಗೆ ಕರೆಸಿ ಮಾಡಿದ ವಿಚಾರಣೆಯಲ್ಲಿ ಆತ ನೇರವಾಗಿ ರೆಡ್ಡಿ ಅವರ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ ಎನ್ನಲಾಗಿದೆ ಹಾಗಾಗಿ ಸಿಸಿಬಿಯು ರೆಡ್ಡಿಯನ್ನು ಬಂಧಿಸುವ ನಿರ್ಧಾರಕ್ಕೆ ಬಂದಿದೆ.

ಸಾಕ್ಷಿಗಳು, ಹೇಳಿಕೆ ಆಧಾರದಲ್ಲಿ ಬಂಧನ
ಸಿಸಿಬಿ ಕಮಿಷನರ್ ಅಲೋಕ್ ಕುಮಾರ್ ಹೇಳಿದ ಪ್ರಕಾರ, ಆರೋಪಿಗಳ ಹೇಳಿಕೆಗಳು, ಸಾಕ್ಷಿಗಳು, ಸಾಕ್ಷಿಗಳ ಸ್ಪೂಟನಗಳನ್ನು ಗಮನಿಸಿ ಅದರ ಆಧಾರದಲ್ಲಿ ಬಂಧನದ ಅವಶ್ಯಕತೆ ಇದ್ದ ಕಾರಣದಿಂದ ಜನಾರ್ದನ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಲಿಖಾನ್ ಸಹ ಬಂಧನ
ಜನಾರ್ದನ ರೆಡ್ಡಿ ಮಾತ್ರವಲ್ಲ ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ದೊರೆತಿದ್ದ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಅವರನ್ನೂ ಸಿಸಿಬಿಯು ಬಂಧಿಸಿದೆ. ಇತರೆ ಆರೋಪಿಗಳನ್ನು ಬಂಧಿಸಲಾಗುವುದು ಎನ್ನಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಗೆ ರೆಡ್ಡಿ
ಜನಾರ್ದನ ರೆಡ್ಡಿ ಅವರನ್ನು ಮೊದಲಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ ಅಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಆ ನಂತರ ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.

ವಶಕ್ಕೆ ಕೇಳುತ್ತಾರೆಯೇ ಸಿಸಿಬಿ?
ಅಲ್ಲಿ ಸಿಸಿಬಿಯು ರೆಡ್ಡಿ ಅವರನ್ನು ತನ್ನ ವಶಕ್ಕೆ ಕೇಳಿದರೆ ಮತ್ತೆ ಸಿಸಿಬಿ ಕಚೇರಿಗೆ ಅವರನ್ನು ಕರೆದುಕೊಂಡು ಬರಲಾಗುತ್ತದೆ. ವಶಕ್ಕೆ ಕೇಳಲಿಲ್ಲವೆಂದಾದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಹಾಗೆ ಆದರೆ ರೆಡ್ಡಿ ಅವರು ಪರಪ್ಪನ ಅಗ್ರಹಾರಕ್ಕೆ ತೆರಳಬೇಕಾಗುತ್ತದೆ.

ನಾಳೆ ಜಾಮೀನಿಗೆ ಹೊಸ ಅರ್ಜಿ ಹಾಕಬೇಕು
ನಾಳೆ ನ್ಯಾಯಾಲಯದಲ್ಲಿ ಹೊಸ ಜಾಮೀನಿಗಾಗಿ ಅರ್ಜಿ ಹಾಕಿ ಜಾಮೀನು ಪಡೆಯಬೇಕಾಗುತ್ತದೆ. ಈಗಾಗಲೇ ವಿಚಾರಣೆ ಮುಗಿಸಿರುವ ಕಾರಣ ಜಾಮೀನು ಸಿಗುವ ಸಾಧ್ಯತೆ ಇದೆ ಎನ್ನಬಹುದು, ಆದರೆ ಹಣ ಇನ್ನೂ ರಿಕವರಿ ಆಗಿಲ್ಲ ಹಾಗಾಗಿ ಆ ಅಂಶವನ್ನು ಮುಂದಿಟ್ಟುಕೊಂಡು ಜಾಮೀನು ನಿರಾಕರಿಸುವ ಸಾಧ್ಯತೆಯೂ ಇದೆ.












Click it and Unblock the Notifications